ಕೇರಳ ಮಾದರಿ ರಾಜ್ಯದಲ್ಲೂ ವಾಟರ್ ಬೆಲ್ ವ್ಯವಸ್ಥೆ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ನ.15: ಶಾಲಾ ಮಕ್ಕಳು ತಮ್ಮ ದೇಹಕ್ಕೆ ತಕ್ಕಂತೆ ಸಾಕಷ್ಟು ನೀರನ್ನು ಕುಡಿಯುವ ನಿಟ್ಟಿನಲ್ಲಿ ಕೇರಳ ಸರಕಾರ ಜಾರಿ ಮಾಡಿರುವ ವಾಟರ್ಬೆಲ್ ವ್ಯವಸ್ಥೆಯ ಮಾದರಿಯಲ್ಲಿ ರಾಜ್ಯದಲ್ಲೂ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಶಾಲಾ ಮಕ್ಕಳಿಗೆ ನೀರು ಕುಡಿಯುವುದನ್ನು ನೆನೆಪಿಸಲು ಕೇರಳ ಸರಕಾರ ವಾಟರ್ ಬೆಲ್ ವ್ಯವಸ್ಥೆ ಅಳವಡಿಸಿರುವುದು ಶ್ಲಾಘನೀಯ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇಂತಹ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಲಾಗುವುದು ಎಂದು ಅಭಿಪ್ರಾಯಿಸಿದ್ದಾರೆ.
ದಿನನಿತ್ಯ ವಿದ್ಯಾರ್ಥಿಗಳು ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕೊ, ಅಷ್ಟನ್ನು ಕುಡಿಯುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಮಕ್ಕಳಿಗೆ ದಿನಕ್ಕೆ ಮೂರರಿಂದ ಆರು ಬಾರಿ ನೀರು ಕುಡಿಯುವಂತೆ ಜಾಗ್ರತೆವಹಿಸಲು ಶಾಲೆಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.