ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ‘ಸೆಂಟರ್ ಆಫ್ ಎಕ್ಸಲೆನ್ಸ್’: ಡಾ.ಎಸ್.ಸಚ್ಚಿದಾನಂದ

Update: 2019-11-19 17:46 GMT

ಬೆಂಗಳೂರು, ನ.19: ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲಿದೆ.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ತಾಂತ್ರಿಕ ಶೃಂಗಸಭೆಯ ಸಂದರ್ಭದಲ್ಲಿ ಆರೋಗ್ಯ ವಿವಿಯ ಸಹ ಕುಲಪತಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿಯ ಕುಲಪತಿ ಡಾ.ಎಸ್.ಸಚ್ಚಿದಾನಂದ ಈ ವಿಷಯವನ್ನು ಘೋಷಿಸಿದರು.

ನಮ್ಮಲ್ಲೇ ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಈ ಉತ್ತಮ ಪ್ರಯತ್ನಕ್ಕೆ ಮುಂದಾಗಿದೆ. ಜೈವಿಕ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದರು.

ಔಷಧ, ವಂಶವಾಹಿ ಚಿಕಿತ್ಸೆ (ಜೀನ್ ಥೆರಪಿ), ಮೆಡಿಕಲ್ ಎಂಜನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ಸ್ಥಾಪನೆಯಾಗಲಿದ್ದು, ಇಲ್ಲಿಂದ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಿಗೆ ಜ್ಞಾನ ವಿಸ್ತರಣೆ ಆಗುವುದು ಎಂದು ಅವರು ಹೇಳಿದರು.

ಆರೋಗ್ಯ ವಿವಿ ಕೇವಲ ಪರೀಕ್ಷೆ ನಡೆಸಿ, ಸರ್ಟಿಫಿಕೇಟ್ ನೀಡಲಷ್ಟೇ ಸೀಮಿತವಾಗಿರಬಾರದು. ಆರೋಗ್ಯ ಕ್ಷೇತ್ರದ ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು. ಈ ನಿಟ್ಟಿನಲ್ಲಿ ವಿವಿ ಹೊಸ ಹೆಜ್ಜೆ ಇಟ್ಟಿದೆ. ಯುವ ಜನರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವಂತಾಗಬೇಕು. ಸೃಜನಶೀಲತೆಗೆ ಒತ್ತು ನೀಡಬೇಕು ಎಂದು ಅಶ್ವತ್ಥ ನಾರಾಯಣ ಕರೆ ನೀಡಿದರು.

ರೋಗಿಗಳ ತಪಾಸಣೆಗೆ ಹೊರತಾಗಿ ವೈದ್ಯರು ಸಂಶೋಧನೆಯಲ್ಲಿ ತೊಡಗುವಂತಾಗಬೇಕು. ಸೀಮಿತ ಚೌಕಟ್ಟಿನಿಂದ ಹೊರಬಂದು ಹೊಸತನ್ನು ಜಗತ್ತಿಗೆ ಪರಿಚಯಿಸುವಂತಾಗಬೇಕು. ಇದೇ ಉದ್ದೇಶದಿಂದ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲಾಗುತ್ತಿದೆ ಎಂದು ಡಾ.ಸಚ್ಚಿದಾನಂದ ತಿಳಿಸಿದರು.

ಯಾವುದೇ ಆವಿಷ್ಕಾರಗಳು ಸಾಮಾನ್ಯವಾಗಿ ಆಗುವಂಥದ್ದು ತಂತ್ರಜ್ಞಾನ ಕ್ಷೇತ್ರದಲ್ಲಿ, ವೃತ್ತಿನಿರತ ವೈದ್ಯರು ಆವಿಷ್ಕಾರದಲ್ಲಿ ತೊಡಗಬೇಕು. ಅವರಿಂದ ಸಂಶೋಧನೆಗಳಾಗಬೇಕು. ಈ ಅವಕಾಶ ಸೃಷ್ಟಿಸಲು ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದರು.

ವೈದ್ಯರು ತಮಗೆ ಬೇಕಾದ ತಂತ್ರಜ್ಞಾನವನ್ನು ರೂಪಿಸಿಕೊಳ್ಳುವಂತಾಗಬೇಕು. ವೈದ್ಯಕೀಯ ಮತ್ತು ತಂತ್ರಜ್ಞಾನ ಒಂದೆಡೆ ಸೇರಿದಾಗ ಹೊಸ ವೈದ್ಯಕೀಯ ಸಲಕರಣೆಗಳನ್ನು ಆವಿಷ್ಕರಿಸಬಹುದು. ಆರೋಗ್ಯ ಕ್ಷೇತ್ರದಲ್ಲಿ ಹೊಸದನ್ನು ತರಬೇಕು. ಯಾವುದೇ ಹೊಸ ಸಂಶೋಧನೆ 5-10 ವರ್ಷಗಳು ಆಗುತ್ತದೆ. ನಮ್ಮ ಈ ಪ್ರಯತ್ನದಿಂದ ಪ್ರಯೋಗಾಲಯದಿಂದ ಮಾರುಕಟ್ಟೆಗೆ ತಲುಪುವ ಸಮಯ ಕಡಿಮೆ ಆಗುವುದು. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದು ಎಂದು ಸಚ್ಚಿದಾನಂದ ತಿಳಿಸಿದರು.

ಕೆಂಗೇರಿ ಬಳಿ ಕೇಂದ್ರ: ಕೆಂಗೇರಿ ಬಳಿಯ ಭೀಮನಕುಪ್ಪೆಯಲ್ಲಿ 50 ಎಕರೆ ಪ್ರದೇಶದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರ ತಲೆ ಎತ್ತಲಿದೆ. ಅಲ್ಲೇ ಪುನರ್ವಸತಿ ಕೇಂದ್ರಗಳು ಇರಲಿವೆ. ಸಂಶೋಧನೆ, ವಂಶವಾಹಿಯ ಅಧ್ಯಯನ ನಡೆಯುವ ಸಂಸ್ಥೆಗಳ ಸಂಖ್ಯೆ ಭಾರತದಲ್ಲಿ ಕಡಿಮೆ ಇದ್ದು, ನಮ್ಮ ರಾಜ್ಯದಲ್ಲಿ ಇಂಥ ಕೇಂದ್ರ ಬರುತ್ತಿರುವುದು ಸಂತಸದ ವಿಷಯ ಎಂದು ಡಾ.ಸಚ್ಚಿದಾನಂದ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News