ತನ್ವೀರ್ ಸೇಠ್ ಕೊಲೆ ಯತ್ನ ಹಿಂದೆ ಕಾಂಗ್ರೆಸ್ ನ ಒಂದು ಗುಂಪಿನ ಒತ್ತಾಸೆ ಇದೆ: ಸಿ.ಟಿ.ರವಿ

Update: 2019-11-20 09:15 GMT

ಬೆಂಗಳೂರು : ಶಾಸಕ ತನ್ವೀರ್ ಸೇಠ್ ಕೊಲೆ ಯತ್ನದ ಹಿಂದೆ ಕಾಂಗ್ರೆಸ್ ನ ಒಂದು ಗುಂಪಿನ ಒತ್ತಾಸೆ ಇದೆ ಎಂಬ ಮಾಹಿತಿ ಇರುವುದಾಗಿ ಸಚಿವ ಸಿ.ಟಿ.ರವಿ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಈ ಬಗ್ಗೆ ಸಿ.ಟಿ.ರವಿ ಅವರು ಹೇಳಿಕೆ ನೀಡಿದರು.

ತನ್ವೀರ್ ಸೇಠ್ ಕೊಲೆ ಯತ್ನದ ಹಿಂದೆ ಎಸ್ ಡಿಪಿಐ ಸಂಘಟನೆ ಇದೆ. ಕಾಂಗ್ರೆಸ್ ನ ಒಂದು ಗುಂಪು ಎಸ್ ಡಿಪಿಐಯ ಹಿಂದಿದೆ. ಆ ಗುಂಪೇ ಈ ಕೆಲಸವನ್ನು ಮಾಡುತ್ತಿದೆ. ಕೈವಾಡವಿದ್ದಿದ್ದೇ ಆದರೆ ಅದು ಬಹಳ ಅಪಾಯಕಾರಿ ಬೆಳವಣಿಗೆ. ಪಿಎಫ್ ಐ ಮತ್ತು ಎಸ್ ಡಿಪಿಐ ಅವಳಿ ಜವಳಿ ಸಂಘಟನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಿಎಫ್‌ಐ ಬೇರೆ, ಎಸ್ ಡಿಪಿಐ ಬೇರೆ ಅಂದಿದ್ದರು. ಅವು ಎರಡೂ ಅವಳಿ ಜವಳಿ ಸಂಘಟನೆಯಾಗಿವೆ. ಕೇರಳದಲ್ಲಿ ಮತೀಯ ಆಧಾರದಲ್ಲಿ ಕೊಲೆಗಳು ನಡೆಯಲು ಪಿಎಫ್‌ಐ ಕಾರಣ. ಮತ ಬ್ಯಾಂಕ್ ಆಸೆಗೆ ಕಾಂಗ್ರೆಸ್ ಪಕ್ಷ ಎಸ್ ಡಿಪಿಐ ಸಂಘಟನೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ ಕಾಂಗ್ರೆಸ್ ಮತ ಬ್ಯಾಂಕಿನ ವ್ಯಾಮೋಹಕ್ಕೆ ಬಿದ್ದು, ಆ ಸಂಘಟನೆಗೆ ಬೆಂಬಲ ನೀಡುತ್ತಿದೆ. ಕಾಂಗ್ರೆಸ್ ತಾಲೀಬಾನ್ ಮಾದರಿ ಸಂಘಟನೆಗೆ ಬೆಂಬಲ‌ ನೀಡುತ್ತಿದೆ ಎಂದು ಹೇಳಿದರು.

ಮತ ಬ್ಯಾಂಕ್ ರಾಜಕಾರಣ ಮಾಡಬೇಡಿ, ಇಂಥ ಸಂಘಟನೆ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅವರಿಗೆ ರಕ್ಷಣೆ, ಆರ್ಥಿಕ ನೆರವು ಕೊಡುವವರು ಯಾರು ? ಅದು ತಾಲಿಬಾನ್ ರೀತಿಯ ಸಂಘಟನೆಯಾಗಿದೆ ಎಂದ ಅವರು ನಮಗೆ ಮತ ರಾಜಕಾರಣ ಅಗತ್ಯ ಇಲ್ಲ. ಆ ಸಂಘಟನೆಯನ್ನು ನಿಷೇಧ ಮಾತ್ರ ಅಲ್ಲ ಅದಕ್ಕೆ‌ ಪೂರಕವಾದ ಇತರ ಕ್ರಮಗಳನ್ನೂ ಕೈಗೊಳ್ಳುತ್ತೇವೆ ಎಂದು ಈ ಸಂದರ್ಭದಲ್ಲಿ ಸಿಟಿ ರವಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News