ಉದ್ಯೋಗ ನೀಡುವುದಾಗಿ ನಂಬಿಸಿ ಚಿನ್ನಾಭರಣ ಕಳವು: ಆರೋಪಿ ಸೆರೆ

Update: 2019-11-22 17:37 GMT

ಬೆಂಗಳೂರು, ನ.22: ಉದ್ಯೋಗ ನೀಡುವುದಾಗಿ ನಂಬಿಸಿ, ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಇಲ್ಲಿನ ಸುಬ್ರಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೇಮಂತ್ ಕುಮಾರ್(32) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಆಟೊದಲ್ಲಿ ಸಂಚರಿಸುತ್ತ ಗಾರ್ಮೆಂಟ್ಸ್, ಇನ್ನಿತರ ಕಡೆಗಳಲ್ಲಿ ಕೆಲಸ ಬಿಟ್ಟು ಉದ್ಯೋಗ ಹುಡುಕುತ್ತಿರುವ ಮಹಿಳೆಯರನ್ನು ಗಮನಿಸಿ ಅವರ ಬಳಿ ಹೋಗಿ ನಾನು ಪ್ರತಿಷ್ಠಿತ ಮಾಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ತನ್ನದೇ ಆಟೊದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ. ಸ್ವಲ್ಪದೂರ ಹೋದ ನಂತರ, ತಮ್ಮ ಒಡವೆಗಳನ್ನು ತೆಗೆಯಬೇಕು ಎಂದು ನಂಬಿಸುತ್ತಿದ್ದ. ಬಳಿಕ ಗಮನ ಬೇರೆಡೆ ಸೆಳೆದು ದೋಚಿ ಪರಾರಿಯಾಗುತ್ತಿದ್ದ. ಈ ಸಂಬಂಧ ಮಹಿಳೆಯೊಬ್ಬರು ನೀಡಿದ್ದ ದೂರು ದಾಖಲಿಸಿ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತನಿಂದ 8 ಲಕ್ಷ 75 ಸಾವಿರ ಮೌಲ್ಯದ 215 ಗ್ರಾಂ ಚಿನ್ನಾಭರಣ, ಆಟೊವೊಂದನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News