ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಸೋಲು ನಿಶ್ಚಿತ: ಮಾಜಿ ಪ್ರಧಾನಿ ದೇವೇಗೌಡ

Update: 2019-11-28 12:39 GMT

ಬೆಂಗಳೂರು, ನ. 28: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಆಡಳಿತದಲ್ಲಿದ್ದ ವೇಳೆ ಕುಮಾರಸ್ವಾಮಿ ನೀಡಿದ್ದ ಅನುದಾನ ಪಡೆದುಕೊಂಡು ಪಕ್ಷದ್ರೋಹ ಮಾಡಿದವರಿಗೆ ಸೋಲು ನಿಶ್ಚಿತ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ಗುರುವಾರ ಇಲ್ಲಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಗಿರೀಶ್ ನಾಶಿ ಪರವಾಗಿ ಪ್ರಚಾರ ಜಾಥಾ ನಡೆಸಿದ ವೇಳೆ ಮಾತನಾಡಿದ ಅವರು, ಅನರ್ಹ ಶಾಸಕರಲ್ಲಿನ ಹಣವನ್ನು ಎದುರಿಸುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಡಲಾಗಿತ್ತು. ಶಾಸಕರ ಪತ್ನಿಯನ್ನು ಉಪಮೇಯರ್ ಮಾಡಲಾಯಿತು. ಕೊಟ್ಟ ದುಡ್ಡು ಬಳಸಿಕೊಂಡಿದ್ದರೆ ಕ್ಷೇತ್ರ ಸಿಂಗಪುರವಾಗಬೇಕಿತ್ತು. ಆದರೆ ದುಡ್ಡು ಎಲ್ಲಿಗೆ ಹೋಯಿತು? ಎಂದು ಇದೇ ಸಂದರ್ಭದಲ್ಲಿ ದೇವೇಗೌಡ ಖಾರವಾಗಿ ಪ್ರಶ್ನಿಸಿದರು.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ನಾನೇ ಕಣಕ್ಕೆ ಇಳಿದು ಉಪಚುನಾವಣೆ ಎದುರಿಸುತ್ತಿದ್ದೇನೆ ಎಂಬ ಭಾವನೆಯೊಂದಿಗೆ ಇಲ್ಲಿ ಪ್ರಚಾರಕ್ಕೆ ಆಗಮಿಸಿದ್ದೇನೆ. ಇದು ನಮ್ಮ ಪಕ್ಷದ ಸ್ವಾಭಿಮಾನದ ವಿಚಾರ. ಪಕ್ಷ ತ್ಯಜಿಸಿದ ವ್ಯಕ್ತಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News