ಪ್ರತ್ಯೇಕ ರಸ್ತೆ ಅಪಘಾತ: ಮಹಿಳೆ ಸೇರಿ ಇಬ್ಬರು ಮೃತ್ಯು

Update: 2019-12-09 16:00 GMT

ಬೆಂಗಳೂರು, ಡಿ.9: ನಗರ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಎರಡು ರಸ್ತೆ ಅಪಘಾತ ಪ್ರಕರಣಗಳಲ್ಲಿ ಮಹಿಳೆಯೊಬ್ಬರು ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಹೊಸ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರಲ್ಲಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಇಲ್ಲಿನ ಆರ್‌ಟಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ದಿಣ್ಣೂರು ರಸ್ತೆ ಬಂಜಾರ ಅಕಾಡೆಮಿ ಬಳಿ ಈ ಘಟನೆ ನಡೆದಿದ್ದು, ದೇವರಜೀವನಹಳ್ಳಿಯ ನೂರಿನ್ ಎಂಬಾಕೆ ಮೃತ ಮಹಿಳೆ. ಘಟನೆಯಲ್ಲಿ ಈಕೆಯ ಪತಿ ಮುಜಾಹಿದೀನ್ ಎಂಬುವರು ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮುಜಾಹಿದೀನ್ ಇತ್ತೀಚಿಗಷ್ಟೇ ಹೊಸ ಸ್ಕೂಟರ್ ಖರೀದಿಸಿದ್ದು, ಅದರಲ್ಲಿ ಪತ್ನಿ ನೂರಿನ್ ಅವರನ್ನು ಹಿಂದೆ ಕೂರಿಸಿಕೊಂಡು ರವಿವಾರ ರಾತ್ರಿ ದಿಣ್ಣೂರು ರಸ್ತೆಯ ಬಂಜಾರ ಅಕಾಡೆಮಿ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ನೂರಿನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಆರ್‌ಟಿನಗರ ಸಂಚಾರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಾಲಕ ಸಾವು: ನಾಗರಬಾವಿ ರಿಂಗ್ ರಸ್ತೆಯ ತೆರಿಗೆ ಭವನ ಬಳಿ ಸೋಮವಾರ ಮುಂಜಾನೆ ಕೆಟ್ಟು ನಿಂತು ಲಾರಿಯನ್ನು ನಿಲ್ಲಿಸಿ ಚಾಲಕ ಪರಿಶೀಲಿಸುತ್ತಿದ್ದಾಗ ಅದೇ ರಸ್ತೆಯಲ್ಲಿ ಹಿಂದಿನಿಂದ ಅತೀ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಲಾರಿ ಚಾಲಕನ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಅಪಘಾತವೆಸಗಿ ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News