ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿಯನ್ನು ಹರಿದ ಉವೈಸಿ
Update: 2019-12-19 06:47 GMT
ಹೊಸದಿಲ್ಲಿ,ಡಿ.9: ಸೋಮವಾರ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಅವರು ಮಸೂದೆಯ ಪ್ರತಿಯನ್ನು ಹರಿದು ಆಕ್ರೋಶವನ್ನು ವ್ಯಕ್ತಪಡಿಸಿದರು. ಇದು ದೇಶವನ್ನು ಒಡೆಯುವ ಪ್ರಯತ್ನವಾಗಿದೆ. ಉದ್ದೇಶಿತ ಮಸೂದೆಯು ನಮ್ಮ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಪ್ರತಿಯನ್ನು ಹರಿಯುವ ಮುನ್ನ ಅವರು ಘೋಷಿಸಿದರು.
ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ತಾರತಮ್ಯದಿಂದ ಕೂಡಿದ್ದ ಪೌರತ್ವ ಕಾರ್ಡ್ನ್ನು ಹರಿದು ಹಾಕುವ ಮೂಲಕ ‘ಮಹಾತ್ಮಾ ’ಬಿರುದಿಗೆ ಪಾತ್ರರಾಗಿದ್ದರು.ಹೀಗಾಗಿ ತಾನೂ ಪೌರತ್ವ ತಿದ್ದುಪಡಿ ಮಸೂದೆಗೆ ಅದೇ ಗತಿಯನ್ನೇಕೆ ಕಾಣಿಸಬಾರದು ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ. ಈ ಮಸೂದೆಯು ಸಂವಿಧಾನಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರನ್ನು ರಾಷ್ಟ್ರರಹಿತರನ್ನಾಗಿಸುವ ಪಿತೂರಿಯಾಗಿದೆ. ಇಂತಹ ಶಾಸನವು 1947ರ ವಿಭಜನೆಯನ್ನು ಪುನರಾವರ್ತಿಸುತ್ತದೆ ಅಷ್ಟೇ ಎಂದರು.