'ಜಾತಿವಾದಿ, ಶ್ರೇಷ್ಠತೆಯ ವ್ಯಸನಿಯ ಮಾತು': ತೇಜಸ್ವಿ ಸೂರ್ಯ ಹೇಳಿಕೆ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಆಕ್ರೋಶ

Update: 2019-12-22 17:07 GMT

ಬೆಂಗಳೂರು, ಡಿ.22: ‘ಎದೆ ಸೀಳಿದರೆ ಒಂದು ಅಕ್ಷರ ಇಲ್ಲದವರು, ಪಂಕ್ಚರ್ ಅಂಗಡಿ ಹಾಕಿಕೊಂಡವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಹೆಸರಿನಲ್ಲಿ ಗಲಭೆ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್, ಜೆಡಿಎಸ್ ತೀವ್ರವಾಗಿ ಖಂಡಿಸಿವೆ.

ಬಿಜೆಪಿಯ ತೇಜಸ್ವಿ ಸೂರ್ಯ ಎಂಬ ಜಾತಿವಾದಿ, ಶ್ರೇಷ್ಠತೆಯ ವ್ಯಸನಿಯ ಈ ಮಾತು ತೀವ್ರ ಖಂಡನೀಯ. ಪ್ರತಿಭಟಿಸುವ ಹಕ್ಕು, ಬದುಕುವ ಹಕ್ಕು ವರ್ಗಶ್ರೇಷ್ಠರಿಗೆ, ಜಾತಿ ಶ್ರೇಷ್ಠರಿಗೆ, ವಿದ್ಯೆ ಶ್ರೇಷ್ಠರಿಗೆ ಮಾತ್ರವಿದೆ ಎಂಬ ಅಸಹ್ಯದ ಮಾತುಗಳಿವೆ. ದುಡಿಯುವ, ಶ್ರಮಿಕ ವರ್ಗ, ದಲಿತ, ಹಿಂದುಳಿದ ವರ್ಗಗಳನ್ನು ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಟ್ವೀಟರ್‌ನಲ್ಲಿ ಕಿಡಿಗಾರಿದೆ.

ಶತ ಶತಮಾನಗಳಿಂದ ತಳಸಮುದಾಯಗಳನ್ನ ಶೋಷಿಸಿಕೊಂಡು ವಿದ್ಯೆ, ಸಾಮಾಜಿಕ, ಧಾರ್ಮಿಕ ಸಮಾನತೆಯನ್ನ ವಂಚಿಸಿಕೊಂಡು ಬಂದಿರುವ ಪಟ್ಟಭದ್ರ ಹಿತಾಸಕ್ತಿಯ ಮನಸ್ಥಿತಿಯ ತೇಜಸ್ವಿ ಸೂರ್ಯನ ಹೇಳಿಕೆಯಿಂದ ಸಂವಿಧಾನದ ಆಶಯಗಳನ್ನ ಅವಮಾನಿಸಲಾಗಿದೆ, ನಾಡಿನ ಜನತೆಯಲ್ಲಿ ತಕ್ಷಣವೇ ಕ್ಷಮೆಯಾಚಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಇಂತವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಜೆಡಿಎಸ್: ಅಕ್ಷರ ಜ್ಞಾನವಿಲ್ಲದವರು ಪ್ರತಿಭಟನೆ ಮಾಡಲು ಅನರ್ಹರು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸಿದೆ. ಶತಮಾನಗಳಿಂದ ತಳ ಸಮುದಾಯಗಳು ವಿದ್ಯೆಯಿಂದ ವಂಚಿತವಾಗಿದ್ದು ಈ ಅನಕ್ಷರಸ್ಥ ಸಮುದಾಯಗಳು ಪ್ರತಿಭಟನೆ ಮಾಡಲೇಬಾರದು ಎಂದಿರುವ ತೇಜಸ್ವಿ ಸೂರ್ಯ ಕೂಡಲೇ ಕ್ಷಮೆಯಾಚಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಪಂಕ್ಚರ್ ಹಾಕುವವರ ಎದೆ ಸೀಳಿದರೆ ನಾಲ್ಕು ಅಕ್ಷರ ಇರಲ್ಲ, ಇಂತಹ ಸಣ್ಣ ಪುಟ್ಟ ಕೆಲಸ ಮಾಡುವವರು ಬಂದು ಪ್ರತಿಭಟಿಸುತ್ತಾರೆ ಎಂದು ತಳವರ್ಗಗಳ ಬಗ್ಗೆ ಅಸಹನೆಯಿಂದ ಮಾತನಾಡಿರುವ ತೇಜಸ್ವಿ ಸೂರ್ಯಗೆ ಜ್ಞಾನದ ಅಹಂ ತಲೆಗೇರಿದೆ. ಅನಕ್ಷರಸ್ಥ ಶ್ರಮಿಕ ವರ್ಗ ಕೈಕಟ್ಟಿ ಕೂತರೆ ದೇಶದ ಪರಿಸ್ಥಿತಿ ಹೇಗಿರುತ್ತದೆ ಅನ್ನೋದು ಈ ಅಕ್ಷರಸ್ಥ ಸೂರ್ಯಗೆ ತಿಳಿದಿಲ್ಲವಾ? ಎಂದು ಜೆಡಿಎಸ್ ಟ್ವೀಟ್ ಮಾಡಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News