ಸಿನಿಮಾ ನಟನ ಕೈಚಳಕ: ಎಟಿಎಂಗೆ ತುಂಬಿಸಬೇಕಿದ್ದ 1.13 ಕೋಟಿ ರೂ. ಲೂಟಿ !
ಬೆಂಗಳೂರು, ಡಿ.25: ಎಟಿಎಂ ಕೇಂದ್ರಗಳಲ್ಲಿ ತುಂಬಿಸಬೇಕಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಸಿನಿಮಾ ನಟನೋರ್ವ ಸೇರಿ ಇಬ್ಬರು ಕದ್ದು ಪರಾರಿಯಾಗಿರುವ ಘಟನೆ ಇಲ್ಲಿನ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಾನಂದ್ ಸರ್ಕಲ್, ಕಾಫಿಕಟ್ಟೆ ಸಿನಿಮಾಗಳಲ್ಲಿ ನಟನಾಗಿ ನಟಿಸಿದ್ದ ಆನಂದ್ ರೆಡ್ಡಿ ಹಾಗೂ ಪವನ್ ಎಂಬವರು ಈ ಕೃತ್ಯವೆಸಗಿರುವ ಆರೋಪದಡಿ ದೂರು ದಾಖಲಾಗಿದೆ.
ಎಟಿಎಂ ಕೇಂದ್ರಗಳಿಗೆ ನಗದು ತುಂಬಿಸುವ ಕಾಕ್ಸ್ ಟೌನ್ನ ಲಾಗಿಕ್ಯಾಷ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಆನಂದ್ ರೆಡ್ಡಿ, ಡಿ.18ರಂದು ಕಚೇರಿಯಿಂದ ಎಟಿಎಂಗಳಿಗೆ ಹಣ ತುಂಬಿಸಲು ತೆರಳಿ ನಂತರ ಕಾಕ್ಸ್ ಟೌನ್ ವ್ಯಾಪ್ತಿಯ ಎಟಿಎಂಗಳಿಗೆ ಹಣವನ್ನು ತುಂಬದೆ 1.13 ಕೋಟಿ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾನೆ ಎಂದು ದೂರು ನೀಡಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಲಾಗಿಕ್ಯಾಷ್ ವ್ಯವಸ್ಥಾಪಕ ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.