ಸಚಿವ ಸ್ಥಾನ ಸಿಗದ ಆಕ್ರೋಶ: ಕಾಂಗ್ರೆಸ್ ಕಚೇರಿ ಧ್ವಂಸಗೈದ ಶಾಸಕನ ಬೆಂಬಲಿಗರು

Update: 2020-01-01 15:24 GMT

ಮುಂಬೈ, ಜ.1: ಮಹಾರಾಷ್ಟ್ರ ಸಚಿವ ಸಂಪುಟವನ್ನು ವಿಸ್ತರಿಸಿದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು ಕಾಂಗ್ರೆಸ್ ಶಾಸಕ ಸಂಗ್ರಾಮ್ ಥೋಪ್ಟೆಗೆ ಸಚಿವ ಸ್ಥಾನ ದೊರಕದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಬೆಂಬಲಿಗರು ಪುಣೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ದಾಂಧಲೆ ಮಾಡಿದ ಘಟನೆ ನಡೆದಿದೆ.

ಮಾಜಿ ಸಚಿವ ಅನಂತರಾವ್ ಥೋಪ್ಟೆ ಪುತ್ರನಾಗಿರುವ ಸಂಗ್ರಾಮ್ ಥೋಪ್ಟೆಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು, ಪುಣೆಯ ಶಿವಾಜಿ ನಗರದಲ್ಲಿರುವ ಪಕ್ಷದ ಕಚೇರಿಯತ್ತ ಕಲ್ಲೆಸೆದರು.

ಕಚೇರಿಯ ಒಳನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿದರಲ್ಲದೆ ನಗರ ಘಟಕದ ಅಧ್ಯಕ್ಷ ರಮೇಶ್ ಬಾಗ್ವೆಯ ಚೇಂಬರ್‌ಗೆ ನುಗ್ಗಿ ಹಾನಿಗೊಳಿಸಿದ್ದಾರೆ ಎಂದು ಅಲ್ಲಿದ್ದ ಸಿಬ್ಬಂದಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಬಾಳಾಸಾಹೇಬ್ ಥೊರಾಟ್, ಅಸಂತುಷ್ಟ ಕಾರ್ಯಕರ್ತರೊಂದಿಗೆ ಮಾತನಾಡಿ ಅವರ ಆಗ್ರಹವನ್ನು ಆಲಿಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News