ಪ್ರಧಾನಿ ಭೇಟಿಯಾದ ಮಮತಾ ಬ್ಯಾನರ್ಜಿ; ಸಿಎಎ, ಎನ್ಆರ್ಸಿ ಕುರಿತು ಮರುಪರಿಶೀಲನೆಗೆ ಮನವಿ
Update: 2020-01-11 12:20 GMT
ಕೋಲ್ಕತಾ, ಜ.11: ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಕೋಲ್ಕತಾಕ್ಕೆ ಶನಿವಾರ ಆಗಮಿಸಿದರು. ಈ ಸಂದರ್ಭದಲ್ಲಿ ರಾಜಭವನದಲ್ಲಿ ಪ್ರಧಾನಿಯನ್ನು ಭೇಟಿಯಾದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ ಕಾಯ್ದೆ(ಸಿಎಎ), ಪೌರತ್ವ ನೋಂದಣಿ(ಎನ್ಆರ್ಸಿ) ಹಾಗೂ ಜನಸಂಖ್ಯೆ ನೋಂದಣಿಯ(ಎನ್ಪಿಆರ್) ಕುರಿತು ಮರು ಪರಿಶೀಲನೆಗೆ ಮನವಿ ಮಾಡಿದರು.
ಪೌರತ್ವ ಕಾಯ್ದೆ ವಿರೋಧಿಸಿ ಪಶ್ಚಿಮಬಂಗಾಳದಲ್ಲಿ ತೀವ್ರ ಪ್ರತಿಭಟನೆ ನಡೆದಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಬಿಜೆಪಿಯ ನಡುವೆ ಈ ವಿಚಾರಕ್ಕೆ ಮಾತಿನ ಸಂಘರ್ಷವೂ ನಡೆದಿದೆ. ‘‘ಪ್ರಧಾನಿ ರಾಜ್ಯಕ್ಕೆ ಬಂದಿರುವ ಕಾರಣ ಇದೊಂದು ಸೌಜನ್ಯದ ಭೇಟಿ. ರಾಜ್ಯದ ಜನತೆ ಎನ್ಪಿಆರ್, ಎನ್ಆರ್ಸಿ ಹಾಗೂ ಸಿಎಎಯನ್ನು ಸ್ವೀಕರಿಸುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ಇಂತಹ ಹೆಜ್ಜೆ ಇಡುವ ಮೊದಲು ಮರು ಪರಿಶೀಲಿಸುವಂತೆಯೂ ತಿಳಿಸಿದ್ದೇನೆ’’ ಎಂದು ಬ್ಯಾನರ್ಜಿ ತಿಳಿಸಿದರು.