ಹಿಂಸಾಚಾರ ಉತ್ತೇಜಿಸುವ ಹಾಡು: ಗಾಯಕನ ವಿರುದ್ಧ ಎಫ್ಐಆರ್ ದಾಖಲು
Update: 2020-02-02 18:13 GMT
ಚಂಡಿಗಢ, ಫೆ. 2: ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಹಾಡು ಹಿಂಸಾಚಾರ ಹಾಗೂ ಗನ್ ಸಂಸ್ಕೃತಿಯನ್ನು ಉತ್ತೇಜಿಸಿದೆ ಎಂದು ಆರೋಪಿಸಿ ಪಂಜಾಬಿ ಹಾಡುಗಾರ ಶುಭ್ದೀಪ್ ಸಿಂಗ್ ಸಿದು ಅಲಿಯಾಸ್ ಸಿಧು ಮೂಸಾ ವಾಲಾ ಹಾಗೂ ಮಂಕಿರತ್ ಔಲಖ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಶನಿವಾರ ಹೇಳಿದ್ದಾರೆ.
ಮಾನ್ಸಾ ಜಿಲ್ಲೆಯ ಮುಸ್ಸಾ ಗ್ರಾಮದ ಮೂಸಾ ವಾಲಾನ ನಿವಾಸದಲ್ಲಿ ಈ ಹಾಡು ರೆಕಾರ್ಡ್ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆ ಬಹಿರಂಗಗೊಳಿಸಿದೆ ಎಂದು ಎಸ್ಎಸ್ಪಿ ಭಾರ್ಗವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಾಡಿನ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ಹಾಡು ಗನ್ ಸಂಸ್ಕೃತಿ ಹಾಗೂ ಹಿಂಸಾಚಾರವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪಂಜಾಬಿ ಹಾಡಿನಲ್ಲಿ ಗನ್ ಸಂಸ್ಕತಿ ಹಾಗೂ ಹಿಂಸಾಚಾರವನ್ನು ಉತ್ತೇಜಿಸುವ ಕುರಿತು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.