ಶಾಹೀನ್ ಬಾಗ್ ಪ್ರತಿಭಟನೆ: ಗುಂಡು ಹಾರಾಟದ ಘಟನೆಗಳ ಬಳಿಕ ಡಿಸಿಪಿ ಬಿಸ್ವಾಲ್ ಎತ್ತಂಗಡಿ
Update: 2020-02-02 18:29 GMT
ಹೊಸದಿಲ್ಲಿ, ಫೆ.2: ದಿಲ್ಲಿಯ ಶಾಹೀನ್ ಬಾಗ್ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಎರಡು ಗುಂಡು ಹಾರಾಟದ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಆಗ್ನೇಯ ದಿಲ್ಲಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಚಿನ್ಮಯ ಬಿಸ್ವಾಲ್ ಅವರನ್ನು ತಕ್ಷಣವೇ ಹುದ್ದೆಯಿಂದ ಬಿಡುಗಡೆಗೊಳಿಸಿ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ.
‘ಪ್ರಚಲಿತ ಸ್ಥಿತಿ’ಯನ್ನು ಉಲ್ಲೇಖಿಸಿರುವ ಆಯೋಗವು ಪ್ರಭಾರ ಡಿಸಿಪಿ ಅಧಿಕಾರವನ್ನು ವಹಿಸಿಕೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿ ಕುಮಾರ ಜ್ಞಾನೇಶ್ ಅವರಿಗೆ ನಿರ್ದೇಶ ನೀಡಿದೆ.
ದಿಲ್ಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗಳ ಕೇಂದ್ರ ಬಿಂದುವಾಗಿರುವ ಶಾಹೀನ್ ಬಾಗ್ನಲ್ಲಿಯ ಭದ್ರತಾ ಸ್ಥಿತಿಯನ್ನು ರವಿವಾರ ಪುನರ್ಪರಿಶೀಲಿಸಿದ ಆಯೋಗವು, ಗೃಹ ಸಚಿವಾಲಯ ಅಥವಾ ದಿಲ್ಲಿ ಪೊಲೀಸ್ ಆಯುಕ್ತರು ಸೂಕ್ತ ಅಧಿಕಾರಿಯನ್ನು ನಿಯಮಿತ ಡಿಸಿಪಿ ಹುದ್ದೆಗೆ ನೇಮಕಗೊಳಿಸಲು ಮೂರು ಹೆಸರುಗಳನ್ನು ಸಲ್ಲಿಸಬಹುದು ಎಂದು ಹೇಳಿದೆ.