ಎನ್ಆರ್ ಸಿ ದೇಶಾದ್ಯಂತ ಜಾರಿ ಮಾಡುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ: ಉದ್ಧವ್ ಠಾಕ್ರೆ
Update: 2020-02-21 15:45 GMT
ಹೊಸದಿಲ್ಲಿ: ಎನ್ ಆರ್ ಸಿ ಮೂಲಕ ಜನರು ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಪ್ರಕ್ರಿಯೆ ದೇಶಾದ್ಯಂತ ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಸರಕಾರ ಭರವಸೆ ನೀಡಿದ್ದು, ಸಿಎಎ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ದಿಲ್ಲಿಯಲ್ಲಿ ಭೇಟಿಯಾದ ನಂತರ ಅವರು ಈ ಮಾತುಗಳನ್ನು ಹೇಳಿದ್ದಾರೆ.
"ನಾವು ಸಿಎಎ , ಎನ್ ಆರ್ ಸಿ ಮತ್ತು ಎನ್ ಪಿಆರ್ ಬಗ್ಗೆ ಚರ್ಚಿಸಿದೆವು. ನನ್ನ ನಿಲುವನ್ನು ನಾನು ಸ್ಪಷ್ಟಪಡಿಸಿದ್ದೇನೆ. ಸಿಎಎ ಬಗ್ಗೆ ಭಯಪಡುವ ಅಗತ್ಯವಿಲ್ಲ. ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪ್ರಯೋಜನವಾಗಬೇಕು. ಎನ್ ಆರ್ ಸಿ ರಾಷ್ಟ್ರಾದ್ಯಂತ ಜಾರಿಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ" ಎಂದವರು ಹೇಳಿದರು.