ರಾಜ್ಯದ ಅಭಿವೃದ್ಧಿಯಲ್ಲಿ ಕೆ.ಸಿ.ರೆಡ್ಡಿ ಪಾತ್ರ ಅಪಾರ: ಗೋವಿಂದ ಕಾರಜೋಳ

Update: 2020-02-27 06:41 GMT

ಬೆಂಗಳೂರು. ಫೆ.27: ರಾಜ್ಯದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಪಾತ್ರ ಅಪಾರ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸ್ಮರಿಸಿದ್ದಾರೆ.

ಗುರುವಾರ ಮಾಜಿ ಮುಖ್ಯಮಂತ್ರಿ ದಿವಂಗತ ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿಯವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ  ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ ಮಾತನಾಡಿದ ಅವರು, ಕೆ.ಸಿ.ರೆಡ್ಡಿ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷಗಳ ಕಾಲ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ.  ಮಧ್ಯ ಪ್ರದೇಶದ ರಾಜ್ಯಪಾಲರಾಗಿಯೂ ತಮ್ಮ ಹೆಜ್ಜೆ ಗುರುತು ದಾಖಲಿಸಿದ್ದಾರೆ.  ಮಹಾತ್ಮಾ ಗಾಂಧಿ ಅವರ ದರ್ಶನ ಭಾಗ್ಯದಿಂದ ಪ್ರಭಾವಿತರಾಗಿದ್ದರು. ರಾಜ್ಯದಲ್ಲಿ ಅನೇಕ ಕಾರ್ಖಾನೆಗಳ  ಸ್ಥಾಪನೆಗೆ ಕೆ. ಸಿ. ರೆಡ್ಡಿ ಅವರು ಕಾರಣೀಭೂತರಾಗಿದ್ದಾರೆ.  ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ (ಐ.ಟಿ.ಐ) ಹಾಗೂ ಹಿಂದುಸ್ಥಾನ್ ಮೆಶಿನ್ ಟೂಲ್ಸ್ (ಎಚ್.ಎಂ.ಟಿ) ಹಾಗೂ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿ.ಎಚ್.ಇ.ಎಲ್), ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಾಜಿಕಲ್ ರಿಸರ್ಚ್ ಇನ್‍ಸ್ಟಿಟ್ಯೂಟ್ (ಸಿ.ಎಫ್.ಟಿ.ಆರ್.ಐ.), ಕೋಲಾರದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿ.ಇ.ಎಂ.ಎಲ್.) ಹಾಗೂ ಶಿವಮೊಗ್ಗದ ಜೋಗ ಜಲಪಾತದಡಿಯಲ್ಲಿ ಮಹಾತ್ಮಾ ಗಾಂಧಿ ಹೈಡ್ರೋ ಎಲೆಕ್ಟ್ರಿಕ್ ಸ್ಟೇಷನ್ ಸ್ಥಾಪನೆಯಲ್ಲಿ ಕೆ. ಸಿ. ರೆಡ್ಡಿ ಅವರ ಪರಿಶ್ರಮವಿತ್ತು ಎಂಬುದು ರಾಜ್ಯದ ಅಭಿವೃದ್ಧಿಯ ಬಗ್ಗೆ ಅವರ ಕಾಳಜಿಗೆ ಧ್ಯೋತಕವಾಗಿದೆ ಎಂಸರು.

ಕೇಂದ್ರ ಸಚಿವರಾಗಿ ಅಂದಿನ ಮಧ್ಯಪ್ರದೇಶದ (ಇಂದಿನ ಛತ್ತೀಸ್‍ಗಡದ) ಬಿಲಾಯ್, ಒಡಿಶಾದ ರೂರ್ಕೆಲಾ ಮತ್ತು ಅಂದಿನ ಬಿಹಾರದ (ಇಂದಿನ ರಾಂಚಿಯಲ್ಲಿ) ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ತಮಿಳುನಾಡಿನ ನೈವೇಲಿಯಲ್ಲಿ ಲಿಗ್ನೈಟ್ ಕಾರ್ಖಾನೆಯ ಸ್ಥಾಪನೆಗೆ ಕಾರಣರಾಗಿ ನಾಡುಕಟ್ಟಿದವರು.   ಸಮ-ಸಮಾಜವನ್ನು ಪ್ರತಿಪಾದಿಸುತ್ತಿದ್ದ ಅವರು ಯುವ ಸಮುದಾಯಕ್ಕೆ  ಪ್ರೇರಣೆ ಹಾಗೂ ಸ್ಫೂರ್ತಿಯಾಗಿದ್ದಾರೆ ಎಂದು ಡಿಸಿಎಂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News