ಆರ್ದ್ರಾ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

Update: 2020-03-03 16:20 GMT

ಬೆಂಗಳೂರು, ಮಾ.3: ನಗರದ ಪುರಭವನದ ಮುಂಭಾಗ ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರ್ದ್ರಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 6ನೆ ಎಸಿಎಂಎಂ ಕೋರ್ಟ್ ವಜಾಗೊಳಿಸಿದೆ.

ದೇಶದ್ರೋಹ ಭಿತ್ತಿ ಪತ್ರ ಪ್ರದರ್ಶಿಸಿದ ಪ್ರಕರಣದ ಆರೋಪಿ ಆರ್ದ್ರಾ ಜಾಮೀನು ಅರ್ಜಿಯನ್ನು ನಗರದ 6ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಕೃಷ್ಣಮೂರ್ತಿ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.

ಸರಕಾರದ ಪರ ವಾದಿಸಿದ್ದ ವಕೀಲರು, ಆರೋಪಿ ಆರ್ದ್ರಾಗೆ ಜಾಮೀನು ನೀಡಬಾರದೆಂದು ಪೀಠಕ್ಕೆ ಮನವಿ ಮಾಡಿದ್ದರು. ಮುಚ್ಚಿದ ಲಕೋಟೆಯಲ್ಲಿ ಸಿಡಿ ಸಮೇತ ಕೋರ್ಟ್‌ಗೆ ಹಾಜರುಪಡಿಸಿದ್ದರು.

ಇದರ ಮಧ್ಯೆ ಅರ್ಜಿಯಲ್ಲಿ ತಮ್ಮನ್ನು ಕೂಡ ಪ್ರಾಸಿಕ್ಯೂಷನ್ ಜೊತೆ ಸೇರಿಸಿಕೊಳ್ಳಬೇಕು ಎಂದು ಕೋರಿ ಶ್ರೀರಾಮ ಸೇನೆ ಸಂಘಟನೆ ಪರ ವಕೀಲರು ಅರ್ಜಿಯನ್ನೂ ಸಲ್ಲಿಸಿದರು.

ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ವಿರುದ್ಧ ಪುರಭವನದ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ್ದ ಆರ್ದ್ರಾ ಪ್ರತಿಭಟನಾಕಾರರ ಹಿಂದೆ ನಿಂತು ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶಿಸಿದ್ದಳು. ಕೂಡಲೇ ಈಕೆಯನ್ನು ವಶಕ್ಕೆ ತೆಗೆದುಕೊಂಡಿದ್ದ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಆರ್ದ್ರಾ ವಿರುದ್ಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News