ಕೊಡಗಿನ ನಕಲಿ ವೆಬ್ಸೈಟ್ ಪ್ರಕರಣದ ತನಿಖೆ ಸಿಐಡಿಗೆ: ಬಸವರಾಜ ಬೊಮ್ಮಾಯಿ
Update: 2020-03-13 18:30 GMT
ಬೆಂಗಳೂರು, ಮಾ.13: ಕೊಡಗಿನಲ್ಲಿ ನಕಲಿ ವೆಬ್ಸೈಟ್ವೊಂದನ್ನು ತೆರೆದು ಹಣ ದ್ವಿಗುಣಗೊಳಿಸುವುದಾಗಿ ಸಾರ್ವಜನಿಕರಿಗೆ ವಂಚನೆ ಎಸಗಿರುವ ಆರೋಪ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಈ ಪ್ರಕರಣ ಕುರಿತು ಸಿಐಡಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಅಪ್ಪಚ್ಚು ರಂಜನ್, ಕೊಡಗಿನಲ್ಲಿ ಕ್ಯಾಪಿಟಲ್ ರಿಲಯನ್ಸ್ ಡಾಟ್ ಇನ್ ಎಂಬ ಕಂಪೆನಿಯನ್ನು ಆರಂಭಿಸಿ, ಸಾರ್ವಜನಿಕರ ಹಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ, ಸುಮಾರು ಮೂರು ಸಾವಿರ ಜನರನ್ನು ವಂಚನೆ ಮಾಡಲಾಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.