ಮಹಾರಾಷ್ಟ್ರ:ನಿವೃತ್ತ ಪೊಲೀಸ್‌ನಿಂದ ಕಾನ್‌ಸ್ಟೇಬಲ್ ಪುತ್ರನ ಹತ್ಯೆ

Update: 2020-03-18 17:16 GMT

ಮುಂಬೈ,ಮಾ.18: ನಿವೃತ್ತ ಪೊಲೀಸನೋರ್ವ ತನ್ನ ಪುತ್ರನನ್ನು ಕೊಲೆ ಮಾಡಿರುವ ಘಟನೆ ಉಪನಗರ ಪೊವಾಯಿಯ ಗಣೇಶ ನಗರದಲ್ಲಿ ಸಂಭವಿಸಿದೆ.

ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಹರೀಶ ಸೋಮವಾರ ಪಾನಮತ್ತನಾಗಿ ಮನೆಗೆ ಮರಳಿದ್ದು,ತಡರಾತ್ರಿ ತಂದೆ ಗುಲಾಬ್ ಗಲಾಂಡೆ (61) ಜೊತೆ ಕೌಟುಂಬಿಕ ವಿವಾದದಲ್ಲಿ ಜಗಳವಾಡಿದ್ದ. ಇದು ವಿಕೋಪಕ್ಕೆ ತಿರುಗಿದಾಗ ಗಲಾಂಡೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಹರೀಶ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.

ಹರೀಶ ಮದ್ಯಪಾನದ ಚಟವನ್ನು ಹೊಂದಿದ್ದು,ಪತ್ನಿ ಮತ್ತು ಇಬ್ಬರು ಪುತ್ರರನ್ನು ನಿರ್ಲಕ್ಷಿಸಿದ್ದ. ಇದೇ ಕಾರಣದಿಂದ ತಂದೆ-ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದರು.

ಹರೀಶ ಅಂಧೇರಿಯಲ್ಲಿ ಸರಕಾರಿ ರೈಲ್ವೆ ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ,ಗಲಾಂಡೆ ಮುಂಬೈ ಪೊಲೀಸ್ ಇಲಾಖೆಯಿಂದ ನಿವೃತ್ತಿಯ ಬಳಿಕ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ಭದ್ರತಾ ವಿಭಾಗದಲ್ಲಿ ಕೆಲಸದಲ್ಲಿದ್ದ ಎಂದೂ ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News