ಬೆಂಗಳೂರು ಸಮಗ್ರ ಅಭಿವೃದ್ಧಿಗೆ ವಿಧೇಯಕ ಜಾರಿ: ಸುಗ್ರೀವಾಜ್ಞೆಗೆ ಸರಕಾರ ನಿರ್ಧಾರ

Update: 2020-03-28 12:15 GMT

ಬೆಂಗಳೂರು, ಮಾ.28: ಪಾಲಿಕೆಯ ಅಧಿಕಾರಿಗಳ ಕರ್ತವ್ಯ ನಿರ್ವಹಣೆ, ವಾರ್ಡ್‍ಗಳ ಅಭಿವೃದ್ಧಿ ಸೇರಿದಂತೆ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾಗಿ ಬಿಬಿಎಂಪಿ ವಿಧೇಯಕ ಜಾರಿಗೊಳಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಸರಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಾಲಿಕೆಯ ಮೇಯರ್, ಉಪಮೇಯರ್ ಅಧಿಕಾರವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸವುದು, ನೂತನ ಮುಖ್ಯ ಆಯುಕ್ತ ಹುದ್ದೆ ಮತ್ತು ವಲಯ ಆಯುಕ್ತರ ಹುದ್ದೆ ಸೃಷ್ಟಿ, ವಾರ್ಡ್ ಕಮಿಟಿ ರಚನೆ ಒಳಗೊಂಡಿರುವ ವಿಧೇಯಕದ ಬಗ್ಗೆ ಚರ್ಚಿಸಲಾಗಿದೆ. ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರಕ್ಕೆ ಆಡಳಿತ ಪಕ್ಷದಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಂಟಿ ಸದನ ಸಲಹಾ ಸಮಿತಿಗೆ ವಹಿಸಲಾಗಿದೆ.

ಸಮಿತಿಯು ವಿಧೇಯಕದ ಬಗ್ಗೆ ಚರ್ಚಿಸಿ ಕೆಲವೊಂದು ಅಂಶಗಳ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲಿಯವರೆಗೂ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುತ್ತದೆ.

ಬಿಬಿಎಂಪಿಯು 714 ಚ.ಕಿ.ಮೀ. ಪ್ರದೇಶ ಒಳಗೊಂಡಿದೆ. ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ತರುವುದು ವಿಧೇಯಕದ ಉದ್ದೇಶವಾಗಿದೆ. ಬೆಂಗಳೂರಲ್ಲಿ ಇಂದಿಗೂ 1976ರ ಕೆಎಂಸಿ ಕಾಯ್ದೆಯಡಿಯಲ್ಲಿಯೇ ತೆರಿಗೆ, ಉಪತೆರಿಗೆ, ದಂಡ ವಿಧಿಸಲಾಗುತ್ತಿದೆ. ಅದಕ್ಕೆ ತಿದ್ದುಪಡಿ ತಂದು ಹೊಸ ಕಾಯ್ದೆ ಜಾರಿಗೊಳಿಸಲು ಸರಕಾರ ಮುಂದಾಗಿದೆ.

ವಿಧೇಯಕದ ಪ್ರಕಾರ ಬಿಬಿಎಂಪಿ ಚುನಾವಣೆ ನಡೆದ ಬಳಿಕ ಮೊದಲ ಸಭೆಯಲ್ಲಿ ಮೇಯರ್, ಉಪಮೇಯರ್ ಆಯ್ಕೆಯಾಗಲಿದ್ದಾರೆ. ಇವರ ಅವಧಿಯು ಒಂದು ವರ್ಷದಿಂದ 5 ವರ್ಷಕ್ಕೆ ಹೆಚ್ಚಳವಾಗಲಿದೆ. ಪಾಲಿಕೆ ವ್ಯಾಪ್ತಿಗೆ ಒಬ್ಬ ಮುಖ್ಯ ಆಯುಕ್ತರ ಹುದ್ದೆ ಸೃಷ್ಟಿಸಿ ಅದಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯ ನಿಯೋಜನೆ ಮಾಡುವುದು ವಿಧೇಯಕದಲ್ಲಿದೆ. ವಲಯ ಆಯಕ್ತರ ಹುದ್ದೆಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿ ಅಧಿಕಾರಿ ನಿಯೋಜನೆ ಮಾಡುವುದು, ವಲಯ ಸಮಿತಿ ರಚನೆ ಮಾಡುವುದು ಮತ್ತು ಪ್ರತಿ ವಾರ್ಡ್‍ನಲ್ಲಿ ವಾರ್ಡ್ ಸಮಿತಿ ರಚನೆ ಮಾಡಿ ಅದರ ಕೆಳಗೆ ಹಲವು ಏರಿಯಾ ಸಭಾ ರಚನೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಮನರಂಜನಾ ತೆರಿಗೆ ವಿಧಿಸಲು ಅವಕಾಶ ಇದೆ.
ಪಾಲಿಕೆಗೆ ಮುಖ್ಯ ಆಯುಕ್ತರನ್ನು ನಿಯೋಜಿಸಿ ಅವರ ಕೆಳಗೆ ನಾಲ್ಕು ವಲಯಗಳಿಗೆ ನಾಲ್ಕು ಆಯುಕ್ತರನ್ನು ನೇಮಕ ಮಾಡಲಾಗುವುದು. ಆದರೆ, ಇದರಲ್ಲಿ ಬಿಬಿಎಂಪಿಯ ವಿಭಜನೆ ಮಾಡುವ ಉದ್ದೇಶ ಇಲ್ಲ ಎಂದು ಹೇಳಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ. ಬಿಬಿಎಂಪಿಗೆ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಆದಾಯ ಬರುತ್ತಿಲ್ಲ. ಆದ್ದರಿಂದ ವಿಧೇಯಕದಲ್ಲಿ  ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ವೈಜ್ಞಾನಿಕವಾಗಿ ತೆರಿಗೆ, ದಂಡ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News