​ಜೀವ, ಜೀವನಾಧಾರ ಕಳೆದುಕೊಳ್ಳಲು ಕಾರಣವಾದ ಲಾಕ್‌ಡೌನ್: ಪ್ರಧಾನಿಗೆ ಕಮಲ್ ಹಾಸನ್ ಪತ್ರ

Update: 2020-04-07 04:27 GMT

ಚೆನ್ನೈ, ಎ.7: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 21 ದಿನಗಳ ಲಾಕ್‌ಡೌನ್, ಯೋಜಿತ ನಡೆಯಲ್ಲ. ಇದರ ಪರಿಣಾಮವಾಗಿ ದೇಶದ ಜನ ಜೀವ ಹಾಗೂ ಜೀವನಾಧಾರ ಎರಡನ್ನೂ ಕಳೆದುಕೊಳ್ಳಬೇಕಾಗಿದೆ ಎಂದು ಚಿತ್ರನಟ ಹಾಗೂ ಮಕ್ಕಳ್ ನೀತಿ ಮೈಯಮ್ (ಎಂಎನ್‌ಎಂ) ಮುಖಂಡ ಕಮಲ್ ಹಾಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಬಹಿರಂಗ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

ದೇಶದಲ್ಲಿ 100ಕ್ಕೂ ಹೆಚ್ಚು ಬಲಿ ಪಡೆದಿರುವ ಕೊರೋನ ವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 24ರಂದು ದೇಶಾದ್ಯಂತ 21 ದಿನಗಳ ಕರ್ಫ್ಯೂ ಘೋಷಿಸಿದ್ದರು.

ನನಗಿರುವ ದೊಡ್ಡ ಆತಂಕವೆಂದರೆ ನೋಟು ರದ್ದತಿಯ ಪ್ರಮಾದವನ್ನು ಅದೇರೀತಿ ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರಲಾಗಿದೆ. ನೋಟು ರದ್ದತಿ ಕಡುಬಡವರ ಉಳಿತಾಯ ಹಾಗೂ ಜೀವನಾಧಾರವನ್ನು ಕಸಿದುಕೊಂಡರೆ, ಸಾಕಷ್ಟು ತಯಾರಿ ಇಲ್ಲದೇ ಘೋಷಿಸಿದ ಲಾಕ್‌ಡೌನ್, ಜೀವಹಾನಿ ಹಾಗೂ ಜೀವನಾಧಾತ ಕಳೆದುಕೊಳ್ಳುವಂಥ ಮಾರಕ ಪರಿಣಾಮಗಳಿಗೆ ಕಾರಣವಾಗುತ್ತಿದೆ ಎಂದು ವಿವರಿಸಿದ್ದಾರೆ.

ಒಂದೆಡೆ ಸೌಲಭ್ಯ ಇರುವವರು ದೀಪ ಬೆಳಗಬೇಕು ಎಂದು ಸೂಚಿಸುತ್ತೀರಿ. ಇನ್ನೊಂದೆಡೆ ಬಡವರ ಭವಿಷ್ಯವೇ ಮಬ್ಬಾಗಿದೆ. ನಿಮ್ಮ ಜಗತ್ತು ಬಾಲ್ಕನಿಗಳಲ್ಲಿ ತೈಲದೀಪಗಳನ್ನು ಬೆಳಗಿದರೆ, ಬಡವರಿಗೆ ತಮ್ಮ ಮುಂದಿನ ರೊಟ್ಟಿ ಬೇಯಿಸಲು ಸಾಕಷ್ಟು ಎಣ್ಣೆಗೂ ಪರದಾಡಬೇಕಾದ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದ್ದಾರೆ. ಬಾಲ್ಕನಿ ಸರ್ಕಾರ ಕೇವಲ ಬಾಲ್ಕನಿ ಹೊಂದಿದವರ ಬಗ್ಗೆ ಮಾತ್ರ ಚಿಂತಿಸದೇ ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಬಡವರನ್ನು ಕೂಡಾ ನಿರ್ಲಕ್ಷಿಸಬಾರದು ಎಂದು ಕಮಲ್ ಸಲಹೆ ಮಾಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆಯೂ ಗಮನ ಸೆಳೆದಿದ್ದಾರೆ. ಈಗಾಗಲೇ ಸುಸ್ಥಿತಿಯಲ್ಲಿರುವ ಮಧ್ಯಮವರ್ಗದ ಕೋಟೆಯನ್ನು ಸುರಕ್ಷಿತಗೊಳಿಸಲು, ದಿನಗೂಲಿಗಳು, ಮನೆಗೆಲಸದವರು, ಬೀದಿಬದಿ ವ್ಯಾಪಾರಿಗಳು, ಆಟೊರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ಮುಂತಾದ ಅಸಹಾಯಕ ವಲಸೆ ಕಾರ್ಮಿಕರನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News