ಲಾಕ್‍ಡೌನ್ ಸಡಿಲಿಕೆ ದುರಂತಕ್ಕೆ ಆಹ್ವಾನ: ಎಚ್.ಕೆ.ಪಾಟೀಲ್

Update: 2020-04-25 06:01 GMT

ಬೆಂಗಳೂರು, ಎ.25: ಲಾಕ್‍ಡೌನ್ ಸಡಿಲಿಕೆಯಂತಹ ನಿರ್ಣಯ ಶ್ರೀಮಂತ ವರ್ಗದ ಪರವೇ ಹೊರತು ಆರ್ಥಿಕ ದುಸ್ಥಿತಿಯಿಂದ ಬಳಲಿರುವ ಬಡವನ ಪರವಾಗುವುದೇ ಇಲ್ಲ. ಇಂತಹ ನಿರ್ಣಯಗಳಿಂದ ಕರ್ನಾಟಕಕ್ಕೆ ತಾವು ದುರಂತಮಯ ಸನ್ನಿವೇಶ ತಂದೊಡ್ಡಿದ ಅಪಕೀರ್ತಿಗೆ ಪಾತ್ರರಾಗುತ್ತೀರಿ. ತಕ್ಷಣ ಲಾಕ್‍ಡೌನ್ ಸಡಿಲಿಕೆಯಂತಹ ದುರಂತವನ್ನು ಆಹ್ವಾನಿಸುವ ನಿರ್ಣಯವನ್ನು ಕೈಬಿಡಬೇಕೆಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ.

ಇಂದು ಹಳಿ ತಪ್ಪಿರುವ ಅರ್ಥ ವ್ಯವಸ್ಥೆಯನ್ನು ಮರಳಿ ಅಭಿವೃದ್ಧಿ ಪಥದತ್ತ ಚಲಿಸುವಂತೆ ಮಾಡಲು ಕೇವಲ ಲಾಕ್‍ಡೌನ್ ಸಡಿಲಿಕೆ ಉಪಾಯವಾಗುವುದಿಲ್ಲ. ಅದಕ್ಕೆ ಸಮಗ್ರವಾದ ಆರ್ಥಿಕ ಚೈತನ್ಯ ತುಂಬುವ ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ, ನೈತಿಕ ಮನಸ್ಥಿತಿಯ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಜನತೆ ತಮ್ಮ ತಮ್ಮ ಉದ್ಯೋಗಗಳಲ್ಲಿ ಮರಳಿ ತೊಡಗಿ, ಎಂದಿನಂತೆ ತಮ್ಮ ಆದಾಯವನ್ನು ಕ್ರೋಢೀಕರಿಸಿಕೊಳ್ಳುವುದು ಕೇವಲ ಈ ಸಡಿಲಿಕೆಯಿಂದ ಸಾಧ್ಯವಾಗುವುದಿಲ್ಲ ಎಂದು ಎಚ್.ಕೆ.ಪಾಟೀಲ್ ತಮ್ಮ ವಿವರವಾದ ಪತ್ರದಲ್ಲಿ ಕಟುವಾದ ಶಬ್ದಗಳಿಂದ ಟೀಕಿಸಿದ್ದಾರೆ.

``ರಾಷ್ಟ್ರದ ಇತರೆಡೆ ಮತ್ತು ಪ್ರಪಂಚದ ಬೇರೆ ಬೇರೆ ಕಡೆ ಲಾಕ್‍ಡೌನ್ ಇರುವುದರಿಂದ ನಮ್ಮ ಈ ಸಣ್ಣ ಕ್ರಮದಿಂದ ಆರ್ಥಿಕತೆಗೆ ಚೈತನ್ಯ ಸಿಗುತ್ತದೆ ಎಂಬುದು ಒಂದು ಸುಳ್ಳು ಸಮರ್ಥನೆಯಾದೀತು. ಬಿಡಿಎ ಸೈಟ್‍ಗಳನ್ನು ಹರಾಜು ಮಾಡುವ ಮೂಲಕ, ಅಕ್ರಮ-ಸಕ್ರಮಗಳನ್ನು ಘೋಷಿಸುವ ಮೂಲಕ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗೆ ಅವಕಾಶ ನೀಡುವ ಮೂಲಕ ಸರ್ಕಾರಕ್ಕೆ, ಸಂಪನ್ಮೂಲ ಕ್ರೋಢೀಕರಣಕ್ಕೆ ತಾವು ಮುಂದಾಗಿದ್ದೀರಿ ಎಂದು ಪತ್ರಿಕೆಗಳಲ್ಲಿ ಓದಿದೆ. ಇಂತಹ ನಿರ್ಣಯ ಶ್ರೀಮಂತ ವರ್ಗದ ಪರವೇ ಹೊರತು, ಆರ್ಥಿಕ ದುಸ್ಥಿತಿಯಿಂದ ಬಳಲಿರುವ ಬಡವನ ಪರವಾಗುವುದೇ ಇಲ್ಲ. ನೀವು ಆರ್ಥಿಕ ಚೈತನ್ಯ ತುಂಬಬೇಕಾಗಿರುವುದು ಗಣಿಧಣಿಗಳಿಗಲ್ಲ, ರಿಯಲ್ ಎಸ್ಟೇಟ್ ಮಧ್ಯವರ್ತಿ ವ್ಯಾಪಾರಿಗಳಲ್ಲ, ರಾಜಕಾರಣಿಗಳು ಹೊಂದಿರುವ ಕಟ್ಟಡ ಸಂಕೀರ್ಣಗಳ ಬಾಡಿಗೆ ಬರಬೇಕೆಂಬ ಉದ್ದೇಶದಿಂದ ಐಟಿ-ಬಿಟಿ ಕಂಪನಿಗಳಿಗೆ ಲಾಕ್‍ಡೌನ್ ಸಡಿಲಗೊಳಿಸುವ ನಿರ್ಧಾರ ಮೇಲ್ಮಧ್ಯಮ ವರ್ಗದವರಿಗೆ ಮತ್ತು ಸಿರಿವಂತರಿಗೆ ಮಾತ್ರ ಸಹಾಯವಾದೀತು. ಇಂತಹ ನಿರ್ಣಯಗಳಿಂದ ಇತಿಹಾಸದ ಪುಟದಲ್ಲಿ ಕರ್ನಾಟಕಕ್ಕೆ ತಾವು ದುರಂತಮಯ ಸನ್ನಿವೇಶ ತಂದೊಡ್ಡಿದ ಅಪಕೀರ್ತಿಗೆ ಪಾತ್ರರಾಗುತ್ತೀರಿ'' ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಲಾಕ್‍ಡೌನ್ ಅನ್ನು ಮೇ 3, 2020ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಪ್ರಕಟಿಸಿತು. ಆದರೆ, ಏಕಾಏಕಿ 22ನೇ ತಾರೀಕು ರಾತ್ರಿ ಈ ಲಾಕ್‍ಡೌನ್ ಅನ್ನು ಸಡಿಲಗೊಳಿಸಲಾಗಿದೆ ಎಂದು ಘೋಷಣೆ ಮಾಡಲಾಯಿತು. ರಾಜ್ಯದಲ್ಲಿ ಈ ಲಾಕ್‍ಡೌನ್ ಸಡಿಲಿಕೆ ನಂತರ ಬೆಂಗಳೂರು ಮತ್ತು ಇತರ ಕಡೆಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಹೋಗಿದೆ. ಈ ಸಾರಿ ಫಲಿತಾಂಶ ಪ್ರಕಟವಾಗಿ ಕೋವಿಡ್-19 ಪತ್ತೆಯಾದ ಪ್ರಕರಣಗಳಲ್ಲಿ ನಮ್ಮ ರಾಜ್ಯದಲ್ಲಿ ಸಾಮುದಾಯಿಕ ಹರಡುವಿಕೆ ಪ್ರಾರಂಭವಾಗಿದೆ ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ.

ಲಾಕ್‍ಡೌನ್ ಸಡಿಲಿಕೆಯಂತಹ ತೀರ್ಮಾನ ಜನತೆಯ ಸರ್ವಾಂಗೀಣ ಹಿತವನ್ನೂ ಸಂಪೂರ್ಣವಾಗಿ ಪರಿಗಣಿಸಿ ಸರ್ವಸಮ್ಮತವಾಗುವ ರೀತಿಯಲ್ಲಿ ನಿರ್ಣಯ ಕೈಗೊಳ್ಳಬೇಕಾದುದ್ದು ಸರ್ಕಾರದ ಕರ್ತವ್ಯವಾಗಿತ್ತು. ಆದರೆ ಸಂಪೂರ್ಣ ಲಾಕ್‍ಡೌನ್ ಅನ್ನು ಸಡಿಲಗೊಳಿಸಿ ಬೆಂಗಳೂರಿನಂಥ ರೆಡ್ ಅಲರ್ಟ್ ಪ್ರದೇಶದಲ್ಲಿಯೇ ಹತ್ತಾರು ಲಕ್ಷ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಇಂದು ಬೆಂಗಳೂರಿನಲ್ಲಿ ಒಂದು ಗಂಟೆಗೆ 60-70 ಸಾವಿರ ವಾಹನಗಳು ಚಲಿಸುತ್ತಿವೆ ಎಂದು ನನಗೆ ಖಚಿತವಾದ ಮಾಹಿತಿ ಇದೆ. ಐದು ಲಕ್ಷ ಬೈಕ್‍ಗಳು ರೋಡಿಗಿಳಿದಿವೆ ಎಂದು ಮಾಹಿತಿ ಇದೆ. ನಮ್ಮ ಬೆಂಗಳೂರು ನಗರ ಪೊಲೀಸರೇ ಎರಡು ದಿನಗಳಿಂದ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿದ್ದಾರೆಂದು ತಿಳಿದಿದೆ.

ರಾಜ್ಯದಲ್ಲಿ ಇಲ್ಲಿಯವರೆಗೆ 22, ಎಪ್ರಿಲ್ 2020ಕ್ಕೆ 29,512 ಜನರನ್ನು ಪರೀಕ್ಷೆ ಮಾಡಲಾಗಿದೆ. 23 ಮತ್ತು 24ರಂದು ಕೈಗೊಂಡಿರುವ ಒಟ್ಟು ಪರೀಕ್ಷೆಗಳ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ನಮ್ಮ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಬೆನ್ನು ಚಪ್ಪರಿಸಿಕೊಳ್ಳುತ್ತಿದೆ. ಇದು ಸುಳ್ಳು ಸಮರ್ಥನೆಯಾಗುತ್ತಿದೆ ಎಂದು ಎಚ್.ಕೆ.ಪಾಟೀಲ್ ಟೀಕಿಸಿದ್ದಾರೆ.

ಸತ್ಯವೇ ಬೇರೆ ಇರುವುದರಿಂದ, ರಾಜ್ಯದಲ್ಲಿ ಕ್ವಾರಂಟೈನ್ ಆಗಿರುವ ಕನಿಷ್ಠ ಮೂರು ಲಕ್ಷ ಜನರಲ್ಲಿ ಮೂವತ್ತು ಸಾವಿರ ಜನರನ್ನಷ್ಟೇ ಈವರೆಗೆ ಕೋವಿಡ್ ತಪಾಸಣೆಗೆ ಗುರಿಪಡಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ತಪಾಸಣೆಗಳೇ ನಡೆಯದೇ, ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ, ತಾಂತ್ರಿಕ ಮತ್ತು ವೈದ್ಯಕೀಯ ಕಾರಣಗಳೇ ಇಲ್ಲ. ಮಹಾರಾಷ್ಟ್ರದಲ್ಲಿ 95,210 ಜನರನ್ನು, ತಮಿಳುನಾಡಿನಲ್ಲಿ 65,977, ಆಂಧ್ರಪ್ರದೇಶದಲ್ಲಿ 54,338, ಕೇರಳದಲ್ಲಿ 21,334, ತೆಲಂಗಾಣದಲ್ಲಿ 16,827, ಗುಜರಾತ್‍ನಲ್ಲಿ 42,384, ರಾಜಸ್ಥಾನದಲ್ಲಿ 74,484, ಮಧ್ಯಪ್ರದೇಶದಲ್ಲಿ 33,074, ಹರ್ಯಾಣದಲ್ಲಿ 17,582, ಉತ್ತರಪ್ರದೇಶದಲ್ಲಿ 45,483 ಜನರನ್ನು ತಪಾಸಣೆಗೆ ಗುರಿಪಡಿಸಲಾಗಿದೆ.

ರಾಷ್ಟ್ರದಲ್ಲಿ ಸೋಂಕಿತ 25 ಸಾವಿರ ಜನರಲ್ಲಿ, ಈವರೆಗೆ 5 ಸಾವಿರ ಜನರು ಮಾತ್ರ ಗುಣಮುಖರಾಗಿದ್ದಾರೆ. 1 ಸಾವಿರ ಜನರು ಸಾವಿಗೀಡಾಗಿದ್ದಾರೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ಲಾಕ್‍ಡೌನ್ ಸಡಿಲಗೊಳಿಸುವ ತಮ್ಮ ತೀರ್ಮಾನ ದುರಂತಕ್ಕೆ ಆಹ್ವಾನ ನೀಡಿದಂತಾಗಿದೆ. ಆದ್ದರಿಂದ ತಕ್ಷಣವೇ ಈ ತೀರ್ಮಾನ ವಾಪಸ್ ಪಡೆಯಲು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News