ಬಸವ ತತ್ವಗಳನ್ನು ಅಳವಡಿಸಿಕೊಳ್ಳಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕರೆ

Update: 2020-04-26 10:42 GMT

ಬೆಂಗಳೂರು. ಎ .26: ಮಹಾ ಮಾನವತಾವಾದಿ, ಜಗಜ್ಯೋತಿ,  ವಿಶ್ವಗುರು ಬಸವಣ್ಣ ಅವರ ತತ್ವ-ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಏಕತೆಯನ್ನು ಸಾಧಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಕರೆ ನೀಡಿದರು. 

ರವಿವಾರ ಬೆಂಗಳೂರಿನ ಬಸವ ಸಮಿತಿ ಸಭಾಂಗಣದಲ್ಲಿ ಗ್ಲೊಬಲ್ ಬಸವ ಫೌಂಡೇಷನ್ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣ ಅವರು,  900 ವರ್ಷಗಳ ಹಿಂದೆ ವರ್ಗ, ವರ್ಣ, ಜಾತಿ, ಧರ್ಮ, ಲಿಂಗ- ಭೇದಗಳಿಂದ ಮುಕ್ತರಾಗಿ ಮಾನವ ಏಕತೆಯನ್ನು   ಸಾಧಿಸಬೇಕು ಎನ್ನುವ ಸಂದೇಶವನ್ನು ಸಾರಿದ್ದಾರೆ. 

ಅದಕ್ಕಾಗಿ ಅಪರಿಮಿತವಾಗಿ ಶ್ರಮಿಸುವ   ಮಾಡುವ ಹೋರಾಟವನ್ನೇ ಮಾಡಿದ್ದಾರೆ.   ಇಡೀ ಪ್ರಪಂಚದ ಯಾವುದೇ ದೇಶದಲ್ಲಿ   ದುಡಿಯುವ ವರ್ಗಕ್ಕಾಗಿ, ಕಾಯಕ ಜೀವಿಗಳಿಗಾಗಿ,  ನೊಂದವರ ಏಳಿಗೆಗಾಗಿ  ಬಸವ ನಾಡಿನಲ್ಲಿ ಹುಟ್ಟಿದ್ದು ಈ ಧರ್ಮ.  ಈ ಧರ್ಮವನ್ನು  ಉಳಿಸಿ ಬೆಳಸ ಬೇಕು. ಇದು ಪ್ರತಿಯೊಬ್ಬರ ಮನೆಯ ಧರ್ಮವಾಗಬೇಕು. ಬಸವಣ್ಣ ಅವರ ಆದರ್ಶ, ತತ್ವಗಳನ್ನು ಸದಾ ಸ್ಮರಿಸಬೇಕು.  ಕೇವಲ  ಬಸವ ಜಯಂತಿಗೆ ಸೀಮಿತವಾಗಬಾರದು.  ಬಸವಣ್ಣ ಅವರ ಆದರ್ಶಗಳು, ಅರ್ಥಪೂರ್ಣವಾದ  ಕಾರ್ಯಕ್ರಮಗಳು, ಚಿಂತನೆಗಳು ಇಡೀ  ಪ್ರಪಂಚವೇ  ಮೆಚ್ಚುವ ಕಾರ್ಯಕ್ರಮಗಳಾಗಿವೆ. ಅಮೇರಿಕಾದ ಸಂಯುಕ್ತ ರಾಷ್ಟ್ರಗಳಲ್ಲಿ ಬಸವಣ್ಣ ಚಿಂತನೆ. ಕಾರ್ಯಕ್ರಮಗಳಲ್ಲಿ   30ಕ್ಕೂ ಹೆಚ್ಚು ವಚನಗಳು ಅಲ್ಲಿನ  ಮಾನವ ಹಕ್ಕುಗಳಾಗಿ ರೂಪುಗೊಂಡಿವೆ. ಮಾನವ ಇತರ ಜೀವಿಗಳು ಮತ್ತು ನಿಸರ್ಗ ಪಾಲನೆಯ ತತ್ವವಾದ ಬಸವ ತತ್ವವನ್ನು ಜನ ಅರಿತು ಅಳವಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಬಸವ ಜಯಂತಿಯ ಈ ಶುಭ ದಿನದಂದು ಜಗತ್ತು ಕೊರೋನ ಮುಕ್ತವಾಗಿ ವಿಶ್ವದೆಲ್ಲೆಡೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ ಅವರು, ಇಂದಿನ  ಸಂದರ್ಭಕ್ಕೆ ಅನ್ವಯವಾಗುವ ವಚನವಾದ 'ಒಲೆ ಹತ್ತಿ ಉರಿದೆಡೆ ನಿಲಬಹುದಲ್ಲದೇ ಧರೆಹತ್ತಿ ಉರಿದಡೆ ನಿಲಲು ಬಾರದು' ಎನ್ನುವ ವಚನದ ಸಾರವಾದ ಇಡೀ ವಿಶ್ವವೇ ನಂಜಾದರೆ ಯಾರಿಗೆ ದೂರಬೇಕು ಎಂದು  ಬಸವಣ್ಣ ಅವರು ಅಂದೇ  ಸೂಚ್ಯವಾಗಿ ಸಂದೇಶ ವನ್ನು ಸಾರಿದ್ದಾರೆ. ಬಸವ ಜಯಂತಿಯನ್ನು ಎಂದಿನಂತೆ ಇಡೀ ನಾಡಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕಿತ್ತು, 

ಆದರೆ ಕೊರೊನಾ ಸೋಂಕಿನಿಂದಾಗಿ ಸರಳವಾಗಿ ಆಚರಿಸಲಾಗಿದೆ. ಎಲ್ಲರೂ ಸರಳವಾಗಿ ಆಚರಿಸಿ, ಬಸವತತ್ವಗಳನ್ನು ಅಳವಡಿಸಿಕೊಳ್ಳ ಬೇಕು   ಎಂದು ಡಿಸಿಎಂ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿ, ಬಸವ ತತ್ವ ಆದರ್ಶಗಳ ಕುರಿತು ಮಾತನಾಡಿದರು. ಗೃಹ ಸಚಿವ  ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಸವ ಸಮತಿಯ ಅಧ್ಯಕ್ಷ ಅರವಿಂದ ಜತ್ತಿ ಅವರು ಮಾತನಾಡಿದರು.  ಶ್ರೀ ಮುರುಘ ರಾಜೇಂದ್ರ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಆಶಿರ್ವಚನ ನೀಡಿದರು. ವಿವಿಧ ಶ್ರೀಮಠಗಳ ಶ್ರೀಗಳು, ಜನಪ್ರತಿನಿಧಿಗಳು, ಅಧಿಕಾರಿಗಳು,  ಬಸವಣ್ಣ ಅವರ  ಅನುಯಾಯಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News