ಅವಹೇಳನಕಾರಿ ಹೇಳಿಕೆ: ರಾಜ್ಯಸಭಾ ಸಂಸದ ಭಾರತಿ ಬಂಧನ,ಜಾಮೀನು

Update: 2020-05-23 07:14 GMT

ಚೆನ್ನೈ,ಮೇ 23: ಒಂದು ಸಮುದಾಯದ ವಿರುದ್ಧ ಫೆಬ್ರವರಿಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ರಾಜ್ಯಸಭಾ ಸಂಸದ ಹಾಗೂ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಅವರನ್ನು ಎಸ್‌ಸಿ ಹಾಗೂ ಎಸ್‌ಟಿ ಕಾಯ್ದೆ 1989ರ ಅಡಿ ಚೆನ್ನೈನ ಅಲಂದೂರ್‌ನಲ್ಲಿರುವ ಅವರ ನಿವಾಸದಲ್ಲಿ ಶನಿವಾರ ಬಂಧಿಸಲಾಗಿದೆ.

ದಲಿತ ಸಂಘಟನೆಯ ಮುಖಂಡ ಅರುಣ್ ಕುಮಾರ್ ದೂರು ದಾಖಲಿಸಿದ್ದು,ಈ ವರ್ಷದ ಫೆಬ್ರವರಿ 15ರಂದು ಕಲೈನಾರ್ ರೀಡಿಂಗ್ ಸರ್ಕಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದಾಗ ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾವು ಇಂತಹ ಪಿತೂರಿಗಳಿಗೆ ಹೆದರುವುದಿಲ್ಲ. ಭ್ರಷ್ಟ ಸರಕಾರದ ವಿರುದ್ಧ ನಾವು ನಿರಂತರ ಧ್ವನಿ ಎತ್ತುತ್ತೇವೆ ಎಂದು ವೈದ್ಯಕೀಯ ತಪಾಸಣೆಗೊಳಗಾದ ಬಳಿಕ ರಾಜೀವ್ ಗಾಂಧಿ ಸರಕಾರಿ ಜನರಲ್ ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ಭಾರತಿ ತಿಳಿಸಿದರು.

ಭಾರತಿ ಅವರಿಗೆ ಇಗ್ಮೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜೂನ್ 1ರ ತನಕ ಮಧ್ಯಂತರ ಜಾಮೀನು ನೀಡಿದೆ.

ಎಐಎಡಿಎಂಕೆ ನೇತೃತ್ವದ ಸರಕಾರದ ಕೋವಿಡ್-19 ಸರಬರಾಜನ್ನು ಸ್ವಾದೀನಪಡಿಸಿಕೊಳ್ಳಲು ಅಕ್ರಮ ಎಸೆಗಿರುವುದನ್ನು ನಾನು ಬಹಿರಂಗಪಡಿಸಲು ಹೊರಟ್ಟಿದ್ದಕ್ಕೆ ಬಂಧಿಸಲಾಗಿದೆ ಎಂದು 73ರ ಹರೆಯದ ಭಾರತಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News