ಪ್ರಧಾನಿ ಮೋದಿ ಎಲ್ಲವನ್ನೂ ಹೇಳುತ್ತಾರೆ, ಆದರೆ, ಯಾವುದನ್ನೂ ಮಾಡುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2020-06-01 15:09 GMT

ಬೆಂಗಳೂರು, ಜೂ.1: ಕೋವಿಡ್-19 ಹಿನ್ನೆಲೆಯಲ್ಲಿ ಹೇರಲಾದ ಲಾಕ್‍ಡೌನ್ ವೇಳೆ ಕೇಂದ್ರ ಸರಕಾರ ಕಾರ್ಮಿಕರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಅವರೆಲ್ಲ ತಮ್ಮ ಊರುಗಳಿಗೆ ತೆರಳುವಂತಾಯಿತು. ಸರಕಾರ ಸಮರ್ಪಕವಾಗಿ ವ್ಯವಸ್ಥೆಗಳನ್ನು ಮಾಡಿದ್ದರೆ ಯಾರೊಬ್ಬರೂ ವಲಸೆ ಹೋಗುತ್ತಿರಲಿಲ್ಲ ಎಂದು ಕೇಂದ್ರದ ಮಾಜಿ ಸಚಿವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠೀಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಎಲ್ಲವನ್ನೂ ಹೇಳುತ್ತಾರೆ. ಆದರೆ, ಯಾವುದನ್ನೂ ಮಾಡುವುದಿಲ್ಲ ಎಂದರು. ಕೋವಿಡ್-19ನಿಂದಾಗಿ ದೇಶದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಕಾರ್ಮಿಕರಿಗೆ ಸರಕಾರ ಯಾವುದೇ ಸಹಾಯ ನೀಡುತ್ತಿಲ್ಲ. ಇವತ್ತು ಕಾರ್ಮಿಕ ಘಟಕಗಳೆಲ್ಲ ಸಂಕಷ್ಟದಲ್ಲಿವೆ ಎಂದು ಅವರು ತಿಳಿಸಿದರು.

ಎಂಎಸ್‍ಎಂಇ ಘಟಕಗಳು ನಿಂತುಹೋಗಿವೆ. ಅಲ್ಲಿ ಕೆಲಸ ಮಾಡುತ್ತಿದ್ದ 11 ಕೋಟಿ ಕಾರ್ಮಿಕರಿಗೆ ತೊಂದರೆ ಆಗಿದೆ. ದೇಶದಲ್ಲಿ 8 ಕೋಟಿ ಅಸಂಘಟಿತ ಕಾರ್ಮಿಕರಿದ್ದು, ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಿದೆ. ಕೆಲಸ ಹುಡುಕಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆ ಅವರು ಓಡಾಡುತ್ತಿರುತ್ತಾರೆ. ಇಂತಹ ಕಾರ್ಮಿಕರ ಜೀವನ ಅಸ್ತವ್ಯಸ್ಥವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೃಷಿ ಕಾರ್ಮಿಕರಿಗೂ ತೊಂದರೆಯಾಗಿದೆ. ಕೃಷಿ ಕ್ಷೇತ್ರದ ಉತ್ಪನ್ನಗಳು ಹಾಳಾಗಿಹೋಗಿವೆ. ಹಣವಿಲ್ಲದೆ ಗ್ರಾಹಕರಿಗೆ ಖರೀದಿ ಮಾಡುವ ಶಕ್ತಿಯೂ ಇಲ್ಲ. ಬೇಡಿಕೆ ಇದ್ದರೆ ಉತ್ಪಾದನೆ, ಉತ್ಪಾದನೆ ಹೆಚ್ಚಾದರೆ ಉದ್ಯೋಗಾವಕಾಶ ಕೂಡ ಹೆಚ್ಚು. ಈ ಸರಣಿ ಇವತ್ತು ಸಡಿಲಗೊಂಡಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷ ಕಾರ್ಮಿಕರ ಸಹಾಯಕ್ಕಾಗಿ ನಿಂತಿದೆ. ವಲಸೆ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸ್ ಸೇರಿದಂತೆ ಎಲ್ಲವನ್ನು ನಮ್ಮ ಪಕ್ಷದವರು ನೀಡುತ್ತಿದ್ದಾರೆ. ರೈಲುಗಳ ಪ್ರಯಾಣಕ್ಕೂ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಲಾಕ್‍ಡೌನ್‍ನಿಂದ 560 ಮಂದಿ ಸಾವನ್ನಪ್ಪಿದ್ದಾರೆ. ತಮ್ಮ ತಮ್ಮ ಊರುಗಳಿಗೆ ತಲುಪುವ ನಿರೀಕ್ಷೆಯಿಂದ ನೂರಾರು, ಸಾವಿರಾರು ಕಿ.ಮೀ. ನಡೆದುಕೊಂಡು, ಸೈಕಲ್ ತುಳಿದುಕೊಂಡು, ಅನ್ನ ನೀರಿಲ್ಲದೆ ಹೋಗುವಾಗ ಇವರು ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ? ಯುದ್ಧದ ಸಂದರ್ಭದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಕುರಿತು ವ್ಯಂಗ್ಯವಾಡಿದ ಮಲ್ಲಿಕಾರ್ಜುನ ಖರ್ಗೆ, ಜಿಡಿಪಿಯ ಶೇ.10ರಷ್ಟು ಅಲ್ಲ ಬಜೆಟ್‍ನ ಶೇ.1ರಷ್ಟು ಹಣವನ್ನು ಪರಿಹಾರ ರೂಪದಲ್ಲಿ ಘೋಷಿಸಲಾಗಿಲ್ಲ. ದಿನವೂ ಅವರು ಹೇಳಿದ್ದೆ ಹೇಳಿದ್ದು, ನಾವು ಕೇಳಿದ್ದೆ ಕೇಳಿದ್ದು. ಈ ಪ್ಯಾಕೇಜ್ ಕನ್ನಡಿಯೊಳಗಿನ ಗಂಟಿನಂತಿದೆ ಎಂದು ಟೀಕಿಸಿದರು.

13 ಸಾವಿರ ರೈಲು ದೇಶದಲ್ಲಿ ಓಡಾಡುತ್ತಿದ್ದವು. 9 ಸಾವಿರ ಗೂಡ್ಸ್ ರೈಲು ಸರುಕು ಸಾಗಿಸುತ್ತಿವೆ. 2.30 ಕೋಟಿ ಜನ ಪ್ರತಿದಿನ ರೈಲಿನಿಂದ ಓಡಾಡುತ್ತಾರೆ. ಒಟ್ಟು 5 ಕೋಟಿ ಜನ ರೈಲುಗಳಲ್ಲಿ ಪ್ರಯಾಣಿಸುವರು. ಲಾಕ್‍ಡೌನ್‍ಗೂ ಮುನ್ನ ನಾಲ್ಕು ದಿನ ಕಾರ್ಮಿಕರಿಗೆ ರೈಲುಗಳಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ಅವಕಾಶ ನೀಡಬಹುದಾಗಿತ್ತು ಎಂದು ಅವರು ಹೇಳಿದರು.

ಆಗ ಎಲ್ಲ ಕಾರ್ಮಿಕರು ತಮ್ಮ ಊರು ಸೇರುತ್ತಿದ್ದರು. ಇಂದು ಬೀದಿಯಲ್ಲಿ ಸಾಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಮಗುವಿನ ಎದುರು ತಾಯಿ ಸಾಯುವ ಸ್ಥಿತಿ ಬರುತ್ತಿರಲಿಲ್ಲ. ಹಾಲಿಲ್ಲದೆ ಮಕ್ಕಳು ಸಾಯುತ್ತಿರಲಿಲ್ಲ. ರೈಲು ಹಳಿಗಳ ಮೇಲೆ ಮಲಗಿ ಕಾರ್ಮಿಕರು ಸಾಯುತ್ತಿರಲಿಲ್ಲ. ಅನ್ನ ನೀರಿಲ್ಲದೆ ಜನ ಸಾಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ದೇಶದಲ್ಲಿ ಜನವರಿ 30ರಂದೇ ಕೋವಿಡ್-19 ಗಮನಕ್ಕೆ ಬಂದಿತ್ತು. ಆದರೂ, ನರೇಂದ್ರ ಮೋದಿ ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಕರೆಸಿ ಲಕ್ಷಾಂತರ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದರು. ಕೇಂದ್ರ ಸರಕಾರ ಆಗಲೆ ಎಚ್ಚೆತ್ತುಕೊಂಡಿದ್ದರೆ, ಇಷ್ಟೆಲ್ಲ ಅನಾಹುತಗಳು ಆಗುತ್ತಿರಲಿಲ್ಲ. ದೇಶದಲ್ಲಿ ಕೊರೋನ ವೈರಾಣು ಹಬ್ಬುವಲ್ಲಿ ಟ್ರಂಪ್ ಕಾರ್ಯಕ್ರಮ ಕೂಡ ಕಾರಣ ಎಂದು ಅವರು ಆರೋಪಿಸಿದರು.

ಕಾರ್ಮಿಕರನ್ನು ಸಾಗಿಸಲು ಶ್ರಮಿಕ್ ರೈಲುಗಳು ಸಂಚರಿಸುತ್ತಿವೆ. ಮುಂಬೈಯಿಂದ ಲಕ್ನೋಗೆ ಹೋಗಬೇಕಾದ ರೈಲನ್ನು ಬಿಹಾರಕ್ಕೆ ಕಳುಹಿಸಲಾಗಿದೆ. 30 ಗಂಟೆಗಳಲ್ಲಿ ಮುಗಿಯುವ ಪ್ರಯಾಣ 72 ಗಂಟೆವರೆಗೆ ಸಾಗಿತು. ಕಾರ್ಮಿಕರನ್ನು ಕಳುಹಿಸುವ ವಿಚಾರದಲ್ಲಿ ರೈಲೈ ಇಲಾಖೆ ಸಂಪೂರ್ಣ ವಿಫಲವಾಗಿದೆ. ರೈಲ್ವೆ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಇದೇ ವೇಳೆ ಮಹಾರಾಷ್ಟ್ರದಲ್ಲಿ ಕೊರೋನ ಸೋಂಕು ಹೆಚ್ಚಳವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಮುಂಬೈ ಪರಿಸ್ಥಿತಿ ಬೇರೆ, ಇತರೆ ರಾಜ್ಯಗಳ ಪರಿಸ್ಥಿತಿ ಬೇರೆ. ಮುಂಬೈಗೆ ದೇಶದ ಬಹುತೇಕ ಎಲ್ಲ ರಾಜ್ಯಗಳ ಜನರು ಬರುತ್ತಾರೆ. ಸ್ಲಂ ಪ್ರದೇಶದಲ್ಲೆ ಸುಮಾರು 30 ಲಕ್ಷ ಜನ ವಾಸಿಸುತ್ತಾರೆ. ಅದಕ್ಕಾಗಿ ಅಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡು ಬಂದಿದೆ. ಮಹಾರಾಷ್ಟ್ರ ಸರಕಾರ ಕೊರೋನ ಸೋಂಕು ತಡೆಗಟ್ಟಲು ಕಠಿಣ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.

ನಾವು ಈ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ, ಮಾಡುವುದು ಇಲ್ಲ. ಆದರೆ, ಸುಮ್ಮನೆ ಇದ್ದರೆ ಜನರಿಗೆ ಸತ್ಯ ಸಂಗತಿಗಳು ತಿಳಿಯುವುದಾದರೂ ಹೇಗೆ? ಹೀಗಾಗಿ ಅನಿವಾರ್ಯವಾಗಿ ಮಾತನಾಡಬೇಕಿದೆ. ಈ ಸರಕಾರಕ್ಕೆ ಜನಪರವಾಗಿ ಕೆಲಸ ಮಾಡುವ ಹುಮ್ಮಸ್ಸೂ ಇಲ್ಲ, ಕಾಳಜಿಯೂ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News