ಲಾಕ್‌ಡೌನ್: ಊರಿಗೆ ಹಿಂತಿರುಗುವಾಗ ಕನಿಷ್ಠ 251 ವಲಸೆ ಕಾರ್ಮಿಕರು ಮೃತ್ಯು

Update: 2020-06-01 16:36 GMT

ಹೊಸದಿಲ್ಲಿ, ಮೇ 21: ಲಾಕ್‌ಡೌನ್ ಹೇರಿಕೆಯಾದ ಆನಂತರ ದುಡಿಮೆ ಕಳೆದುಕೊಂಡು ತಮ್ಮ ಊರುಗಳಿಗೆ ವಾಪಸಾಗುವ ಯತ್ನದಲ್ಲಿ 250ಕ್ಕೂ ಅಧಿಕ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆಂಬ ಆಘಾತಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ.

2020ರ ಮಾರ್ಚ್ 24ರಿಂದ 2020ರ ಮೇ 31ರವರೆಗೆ ಮೃತಪಟ್ಟ 251 ಮಂದಿ ವಲಸೆ ಕಾರ್ಮಿಕರ ಪೈಕಿ 170 ಮಂದಿ ವಿವಿಧ ವಾಹನಗಳಲ್ಲಿ ಹಾಗೂ 81 ಮಂದಿ ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾಗ ಅಸುನೀಗಿದ್ದಾರೆ ಎಂದು ‘ರೈಟ್ಸ್ ಆ್ಯಂಡ್ ರಿಸ್ಕ್ ಗ್ರೂಪ್’ (ಆರ್‌ಆರ್‌ಎಜಿ) ಸೋಮವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.

ಮಾರ್ಚ್ 24ರಂದು ಲಾಕ್‌ಡೌನ್ ಹೇರಿಕೆಯಾದ ಬಳಿಕ ದುಡಿಮೆ ಕಳೆದುಕೊಂಡ ಸಾವಿರಾರು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ, ವಾಹನದಲ್ಲಿ ಹಾಗೂ ವಿಶೇಷ ಶ್ರಮಿಕ್ ರೈಲುಗಳಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ಹಸಿವು, ನಿರುದ್ಯೋಗ, ವಸತಿಯಿಲ್ಲದೆ ಕಂಗಾಲಾದ ವಲಸೆ ಕಾರ್ಮಿಕರು ಊರಿಗೆ ಬೇರೆ ದಾರಿಯಿಲ್ಲದೆ ಊರಿಗೆ ತೆರಳುತ್ತಿದ್ದ ಸಂದರ್ಭ ದಾರಿ ಮಧ್ಯೆ ರಸ್ತೆ ಅವಘಡ, ಕಾಡ್ಗಿಚ್ಚು, ಬಳಲಿಕೆ, ಅನಾರೋಗ್ಯ ಮತ್ತು ಪರಿಹಾರ ಶಿಬಿರಗಳಲ್ಲಿನ ನಿರ್ಲಕ್ಷ್ಯದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಆಯೋಜಿಸಲಾದ ವಿಶೇಷ ಶ್ರಮಿಕ ರೈಲುಗಳಲ್ಲಿನ ಅವ್ಯವಸ್ಥೆಯು ವಲಸೆ ಕಾರ್ಮಿಕರ ಗಾಯಕ್ಕೆ ಬರೆ ಎಳೆದಂತಿವೆ.

ಈ ರೈಲುಗಳಲ್ಲಿ ನೀರು ಆಹಾರ ಸರಿಯಾಗಿ ಪೂರೈಕೆಯಾಗದೆ ವಲಸೆ ಕಾರ್ಮಿಕರು ಹಸಿದ ಹೊಟ್ಟೆಯಲ್ಲಿ ಪ್ರಯಾಣಿಸಬೇಕಾಗಿದೆ ಎಂದು ವರದಿ ಹೇಳಿದೆ. ರೈಲುಗಳಿಗಾಗಿ ತಮ್ಮ ಕಂದಮ್ಮಗಳೊಂದಿಗೆ ಬೇಸಿಗೆಯ ಉರಿಸಿಬಿಸಿಲಿನಲ್ಲಿ ಅನ್ನ, ನೀರಿಲ್ಲದೆ ಗಂಟೆಗಟ್ಟಲೆ ಅವರು ಕಾಯುವಂತಹ ದುಸ್ಥಿತಿಯಿದೆ.

ಭಾರತದಲ್ಲಿ ಕೋವಿಡ್-19 ಸೋಂಕು ಸಾಮುದಾಯಿಕವಾಗಿ ಹರಡುವುದನ್ನು ತಡೆಯಲು ಈ ಲಾಕ್‌ಡೌನ್ ವಿಫಲವಾಗಿದೆಯೆಂದು ವರದಿ ಹೇಳಿದೆ. ಲಾಕ್‌ಡೌನ್ ಘೋಷಣೆಯಾದ ದಿನವಾದ ಮಾರ್ಚ್ 24ರಂದು ಭಾರತದಲ್ಲಿ 564 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಆದರೆ ಮೇ 31ರ ವೇಳೆಗೆ ಸೋಂಕಿತರ ಸಂಖ್ಯೆಯು 1,82,142ಕ್ಕೇರಿದೆ ಹಾಗೂ 5,164 ಮಂದಿ ಮೃತಪಟ್ಟಿದ್ದಾರೆ ಎಂದು ಆರ್‌ಆರ್‌ಎಜಿಯ ನಿರ್ದೇಶಕ ಸುಹಾಸ್ ಚಕ್ಮಾ ತಿಳಿಸಿದ್ದಾರೆ.

ವಲಸಿಗರು ಹಾಗೂ ಬಡವರ ತುರ್ತು ಅವಶ್ಯಕತೆಗಳಿಗೆ ಸ್ಪಂದಿಸುವ ಕೇಂದ್ರ ಸರಕಾರದ ವೈಫಲ್ಯತೆಯನ್ನು ವರದಿ ಬೆಟ್ಟು ಮಾಡಿದೆ. ನಗರಪ್ರದೇಶಗಳಿಗೆ, ತಮ್ಮ ಹಳ್ಳಿಗಳಿಗೆ ವಾಪಸಾಗುತ್ತಿರುವ ಹಲವಾರು ವಲಸಿಗರು ಕೋವಿಡ್-19 ಕಾಯಿಲೆಯನ್ನು ಕೂಡಾ ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದಾರೆ. ಮೇ 30ರವರೆಗೆ ವಲಸೆ ಬಂದಿರುವ ಬಿಹಾರದ 2433 ವಲಸೆ ಕಾರ್ಮಿಕರಲ್ಲಿ ಕೊರೋನ ಸೋಂಕು ಪತ್ತೆಯಾಗಿರುವುದು ಇದಕ್ಕೆ ತಾಜಾ ನಿದರ್ಶನವಾಗಿದೆ. ಇತ್ತ ಈಶಾನ್ಯ ಭಾರತದ ರಾಜ್ಯಗಲ್ಲಿಯೂ ಮೇ 1ರವರೆಗೆ 61ರಷ್ಟಿದ್ದ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮೇ 31ರ ವೇಳೆಗೆ 1689ಕ್ಕೇರಿದೆ.

‘‘ಭಾರತದ ಲಾಕ್‌ಡೌನ್, ಇತಿಹಾಸದಲ್ಲಿಯೇ ಅತಿ ದೊಡ್ಡ ಆಂತರಿಕ ಸ್ಥಳಾಂತರಕ್ಕೆ ಕಾರಣವಾಗಿದ್ದು, ವಲಸೆ ಕಾರ್ಮಿಕರನ್ನು ಘೋರವಾದ ಮಾನವೀಯ ಬಿಕ್ಕಟ್ಟಿಗೆ ಒಡ್ಡಿದೆ. ವಲಸೆ ಕಾರ್ಮಿಕರಿಗೆ ಬದುಕು ಮತ್ತು ಸ್ವಾತಂತ್ರ್ಯವನ್ನು ಒದಗಿಸುವಲ್ಲಿ, ಅವರು ಸುರಕ್ಷಿತವಾಗಿ ಘನತೆಯಿಂದ ಮನೆಗೆ ಮರಳುವುದನ್ನು ಖಾತರಿಪಡಿಸುವಲ್ಲಿ ಕೇಂದ್ರ ಸರಕಾರ ಮಾತ್ರವಲ್ಲ ಸುಪ್ರೀಂಕೋರ್ಟ್ ಕೂಡಾ ವಿಫಲವಾಗಿದೆ’’ ಎಂದು ಸುಹಾಸ್‌ ಚಕ್ಮಾ ವರದಿಯಲ್ಲಿ ಹೇಳಿದ್ದಾರೆ.

ಕೋವಿಡ್-19 ಸೋಂಕು ನಿಯಂತ್ರಣದ ಸಂದರ್ಭದಲ್ಲಿ ಮಾನವಹಕ್ಕುಗಳನ್ನು ಕೂಡಾ ಗೌರವಿಸಲ್ಪಡುವುದನ್ನು ಕೇಂದ್ರ ಸರಕಾರ ಖಾತರಿಪಡಿಸಬೇಕು. ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಸರಕಾರವು ಚುನಾವಣಾ ರಾಜಕೀಯವನ್ನು ಬದಿಗಿರಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳು ಮತ್ತು ಪ್ರತಿಪಕ್ಷಗಳ ಅರ್ಥಪೂರ್ಣ ಪಾಲ್ಗೊಳ್ಳುವಿಕೆಯೊಂದಿಗೆ ರಾಷ್ಟ್ರೀಯ ಕಾರ್ಯತಂತ್ರವೊಂದನ್ನು ರೂಪಿಸಬೇಕೆಂದು ಆರ್‌ಆರ್‌ಎಜಿ ಶಿಫಾರಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News