25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರುಗಳ ಕಳ್ಳತನ: ಆರೋಪಿ ಬಂಧನ
Update: 2020-06-05 16:01 GMT
ಬೆಂಗಳೂರು, ಜೂ.5: ಲಾಕ್ಡೌನ್ ಸಂದರ್ಭದಲ್ಲಿ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಐದು ಕಾರುಗಳನ್ನು ಕಳವು ಮಾಡಿರುವ ಆರೋಪಿಯನ್ನು ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಮಂಜುನಾಥ್ ಯಾನೆ ಮಂಜು ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ ಮಂಜುನಾಥ್, ಜೀವನಕ್ಕಾಗಿ ಕಳ್ಳತನ ವೃತ್ತಿ ಆಯ್ಕೆ ಮಾಡಿಕೊಂಡಿದ್ದ. ಬೀಗ ಹಾಕಿದ ಮನೆಗಳ ಕಳ್ಳತನಕ್ಕೆ ಮುಂದಾಗುತ್ತಿದ್ದ ಈತ ಪೊಲೀಸರಿಗೆ ತಮ್ಮ ಬಗ್ಗೆ ಸುಳಿವು ಸಿಗದಿರಲಿ ಎಂಬ ಕಾರಣಕ್ಕಾಗಿ ಒಬ್ಬನೇ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಈತನ ವಿರುದ್ಧ 20ಕ್ಕೂ ಅಧಿಕ ಪ್ರಕರಣದಲ್ಲಿ ವಾರಂಟ್ ಜಾರಿಯಲ್ಲಿದ್ದರೂ ತಲೆಮರೆಸಿಕೊಂಡು ಕಳ್ಳತನ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.