ಆರ್ಥಿಕ ಮಿತವ್ಯಯ ಸಾಧಿಸಲು ಸರಕಾರದ ವಿವಿಧ ಇಲಾಖೆಗಳು ವಿಲೀನ: ಸಂಪುಟ ಉಪ ಸಮಿತಿಗೆ ಶಿಫಾರಸ್ಸು

Update: 2020-06-05 18:29 GMT

ಬೆಂಗಳೂರು, ಜೂ.5: ಸರಕಾರದ ಅನವಶ್ಯಕ ವೆಚ್ಚಗಳನ್ನು ಕಡಿತಗೊಳಿಸಿ ಆರ್ಥಿಕ ಮಿತವ್ಯಯವನ್ನು ಸಾಧಿಸಲು ಸರಕಾರದ ವಿವಿಧ ಇಲಾಖೆ, ಕಚೇರಿಗಳ ವಿಲೀನಾತಿ, ಹುದ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಪರಾಮರ್ಶಿಸಿ ವರದಿ ನೀಡುವ ಬಗ್ಗೆ ಕಂದಾಯ ಸಚಿವ ಆರ್. ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ.

ಈ ಸಮಿತಿಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನೂ ಒಂದೆ ಇಲಾಖೆಯನ್ನಾಗಿ ವಿಲೀನಗೊಳಿಸಿ ಹಾಗೂ ಅವುಗಳ ಅಡಿಯಲ್ಲಿ ಬರುವ ಎಲ್ಲ ಆಯುಕ್ತಾಲಯ ಮತ್ತು ನಿರ್ದೇಶನಾಲಯಗಳನ್ನು ಒಂದೆ ಆಯುಕ್ತಾಲಯದಡಿ ತಂದು ಆಡಳಿತ ಕೇಂದ್ರೀಕರಣ ಮಾಡಬೇಕು.

ಅಲ್ಲದೆ, ಆರ್ಥಿಕ ಮಿತವ್ಯಯ ಸಾಧಿಸಲು ಹಾಗೂ ಕನಿಷ್ಠ ಆಡಳಿತ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿಯಾದ ಸೇವೆಗಳನ್ನು ನೀಡಲು ಅನುವು ಮಾಡಿಕೊಡುವಂತೆ ಕೋರಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ಅರ್.ಅಶೋಕ್‍ರನ್ನು ಭೇಟಿ ಮಾಡಿ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ ತಿ ಸಚಿವ ಸಿ.ಟಿ.ರವಿ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

ಪ್ರಸ್ತಾನೆಯ ಸಾರಾಂಶ: ಸಾಹಿತ್ಯ, ಕಲೆ, ಸಂಸ್ಕೃತಿ, ಪ್ರವಾಸೋದ್ಯಮ, ಯುವಜನ ಸೇವೆ ಮತ್ತು ಕ್ರೀಡೆ, ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಗಳ ವಿಷಯಗಳು ನೇರವಾಗಿ ಅಥವಾ ಪರೋಕ್ಷವಾಗಿ ಒಂದಕ್ಕೊಂದು ಸಾಮ್ಯತೆ ಹೊಂದಿದ್ದು, ಕಾರ್ಯಕ್ರಮಗಳ ಸ್ವರೂಪ ಮತ್ತು ಅನುಷ್ಠಾನದ ಪದ್ಧತಿ ಒಂದೇತೆರನಾಗಿರುತ್ತದೆ.

ಈ ಎಲ್ಲ ಇಲಾಖೆಗಳನ್ನು ಒಂದೇ ಸಚಿವಾಲಯ ಮತ್ತು ಒಂದೇ ಆಯುಕ್ತಾಲಯದಡಿ ತಂದಲ್ಲಿ ಅನವಶ್ಯಕ ಹುದ್ದೆಗಳ ರದ್ದತಿ ಹಾಗೂ ಕಚೇರಿಗಳ ವಿಲೀನಾತಿಯಿಂದ ಅನಗತ್ಯ ವೆಚ್ಚವನ್ನು ಕಡಿತಗೊಳಿಸುವುದರ ಜೊತೆಗೆ ಕಾರ್ಯಕ್ರಮಗಳು ಪುನರಾವರ್ತನೆ ಆಗುವುದನ್ನು ತಡೆಯಬಹುದಾಗಿದೆ. ಅಲ್ಲದೆ ಇದರಿಂದ ಉತ್ತರದಾಯಿತ್ವ ಸಹ ಇರುತ್ತದೆ. ಈ ಹಿಂದೆಯೂ ಸಹ ಸಚಿವಾಲಯದ ಮಟ್ಟದಲ್ಲಿ ಪ್ರವಾಸೊದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವಾಲಯ ಮಟ್ಟದಲ್ಲಿ ಒಂದೇ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತದನಂತರ ಕಾರಣಾಂತರಗಳಿಂದ ಅವು ಪ್ರತ್ಯೇಕವಾಗಿ ಬೇರ್ಪಟ್ಟಿವೆ.

ಈ ಮೂರು ಇಲಾಖೆಗಳ ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವಾಲಯದಲ್ಲಿ ಮಂಜೂರಾಗಿರುವ ಹುದ್ದೆಗಳು, ಭರ್ತಿ ಹಾಗೂ ಖಾಲಿ ಇರುವ ಹುದ್ದೆಗಳು ಕೆಳಕಂಡಂತಿದ್ದು, ಈ ಇಲಾಖೆಗಳು ಆಡಳಿತಾತ್ಮಕವಾಗಿ ಬಹಳ ಕಡಿಮೆ ಕಾರ್ಯವ್ಯಾಪ್ತಿ ಹೊಂದಿರುವುದನ್ನು ಗಮನಿಸಬಹುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳಲ್ಲಿ 4 ಜನ ಹಿರಿಯ ಐಎಎಸ್ ಅಧಿಕಾರಿಗಳು ಮತ್ತು ಅವರ ಆಪ್ತ ಸಿಬ್ಬಂದಿಯ ವೇತನ ಹಾಗೂ 4 ಸಚಿವರು, ಅವರ ಆಪ್ತ ಶಾಖೆ, ಅವರುಗಳ ವೇತನದ ವೆಚ್ಚಗಳೆ ಸರಕಾರಕ್ಕೆ ದೊಡ್ಡ ಹೊರೆಯಾಗಿದೆ.

ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪತ್ರಗಾರ ಇಲಾಖೆ, ಕರ್ನಾಟಕ ಗೆಜೇಟಿಯರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ 7 ಕ್ಷೇತ್ರ ಇಲಾಖೆಗಳ ಮುಖ್ಯಸ್ಥರಾದ 4 ಐಎಎಸ್/ಐಎಫ್‍ಎಸ್ ಮತ್ತು 3 ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಅವರ ಆಪ್ತ ಶಾಖೆಯ ಸಿಬ್ಬಂದಿ ವೇತನ ಮತ್ತು ಇತರೆ ವೆಚ್ಚಗಳ ಬಾಬ್ತು ಅಂದಾಜು 113.47 ಕೋಟಿ ರೂ.ಆಗುತ್ತದೆ.

ಅಲ್ಲದೆ ಒಟ್ಟು 7 ಇಲಾಖೆಗಳಲ್ಲಿ 1,768 ಹುದ್ದೆಗಳು ಮಂಜೂರಾಗಿದ್ದು, ಕೇವಲ 865 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 903 ಹುದ್ದೆಗಳು ಖಾಲಿ ಇವೆ. ಅಂದರೆ ಶೇಕಡ 60 ರಷ್ಟು ಹುದ್ದೆಗಳು ಖಾಲಿ ಇರುತ್ತವೆ. ಭರ್ತಿಯಾಗಿರುವ ಹುದ್ದೆಗಳಲ್ಲಿಯೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಈಗಿರುವ ಹುದ್ದೆಗಳ ವಿಲೀನಾತಿ/ಪುನರ್ ಸಂಘಟನೆಯಿಂದಲೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬಹುದಾಗಿದೆ.

ಈ ಇಲಾಖೆಗಳಿಗೆ ವಾರ್ಷಿಕವಾಗಿ ಒಟ್ಟಾರೆ ಕಾರ್ಯಕ್ರಮಗಳಿಗಾಗಿ 817.86 ಕೋಟಿ ರೂ.ವೆಚ್ಚವಾಗುತ್ತಿದ್ದರೆ, ಆಡಳಿತ ನಿರ್ವಹಣೆಗಾಗಿಯೇ ಅಂದಾಜು 113.47 ಕೋಟಿ ರೂ.ವೆಚ್ಚವಾಗುತ್ತಿದೆ. ಈ 4 ಇಲಾಖೆಗಳನ್ನು ಒಟ್ಟುಗೂಡಿಸಿ “ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ವಾರ್ತಾ ಮತ್ತು ಸಾರ್ಜಜನಿಕ ಸಂಪರ್ಕ ಇಲಾಖೆ” ಎಂಬ ಒಂದೆ ಸಚಿವಾಲಯವನ್ನು ಪುನಃ ರಚಿಸುವುದು ಸೂಕ್ತ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಇದರಿಂದಾಗಿ ಸಚಿವಾಲಯದ ಮಟ್ಟದಲ್ಲಿ 3 ಐ.ಎ.ಎಸ್. ವೃಂದದ ಹುದ್ದೆಗಳ ಜೊತೆಗೆ ವಿವಿಧ ವೃಂದಗಳಲ್ಲಿ 73 ಹುದ್ದೆಗಳನ್ನು ಕಡಿತಗೊಳಿಸಬಹುದಾಗಿದೆ. ರಾಜ್ಯ ಮಟ್ಟದಲ್ಲಿರುವ 7 ಇಲಾಖೆಗಳ ಆಯುಕ್ತಾಲಯ/ನಿರ್ದೇಶನಾಲಯಗಳನ್ನು ಒಟ್ಟುಗೂಡಿಸಿ “ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತುಕ್ರೀಡೆ ಹಾಗೂ ವಾರ್ತಾ ಮತ್ತು ಸಾರ್ಜಜನಿಕ ಸಂಪರ್ಕ ಆಯುಕ್ತಾಲಯ” ಎಂಬ ಒಂದೆ ಆಯುಕ್ತಾಲಯವನ್ನು ಪುನರ್ ರಚಿಸಬಹುದು. ಇದರಿಂದಾಗಿ ಒಟ್ಟಾರೆ 7 ಆಯುಕ್ತಾಲಯ/ನಿರ್ದೇಶನಾಲಯಗಳಿಂದ ಎಲ್ಲಾ ವೃಂದಗಳಲ್ಲಿ  947 ಹುದ್ದೆಗಳನ್ನು ಕಡಿತಗೊಳಿಸಬಹುದಾಗಿದೆ.

ಜಿಲ್ಲಾ ಹಂತದಲ್ಲಿರುವ 7 ಇಲಾಖೆಯ ಸ್ಥಾನಿಕ ಕಚೇರಿಗಳನ್ನು ವಿಲೀನಗೊಳಿಸಿ ಪುನರ್ ಸಂಘಟಿಸುವುದರಿಂದ ವಿವಿಧ ಹುದ್ದೆಗಳು ಕಡಿತಗೊಂಡು ಆಡಳಿತಾತ್ಮಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದಾಗಿದೆ.

ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಜಂಗಲ್ ಲಾಡ್ಜಸ್ ಅಂಡ್ ರೆಸಾಟ್ರ್ಸ್ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಸಾಮತ್ಯೆ ಇದ್ದು, ಜಂಗಲ್ ಲಾಡ್ಜಸ್ ಅಂಡ್ ರೆಸಾಟ್ರ್ಸ್‍ನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದೊಂದಿಗೆ ವಿಲೀನಗೊಳಿಸಬಹುದು. ಇದರಿಂದಾಗಿ ಸದರಿ ಸಂಸ್ಥೆಯ ಅಧ್ಯಕ್ಷರು, ನಾಮನಿರ್ದೇಶಿತ ಸದ್ಯಸ್ಯರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳು/ ಆಪ್ತ ಶಾಖೆಗೆ ಆಗುವ ವೆಚ್ಚ ಉಳಿತಾಯವಾಗುತ್ತದೆ.

ಈ ಹಿನ್ನೆಲೆಯಲ್ಲಿ ನನ್ನಅಧೀನದಲ್ಲಿ ಬರುವ ಮೇಲ್ಕಂಡ 3 ಇಲಾಖೆಗಳ ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಸಚಿವಾಲಯದ ಒಂದೇ ಇಲಾಖೆಯನ್ನಾಗಿ ವಿಲೀನಗೊಳಿಸಬೇಕು. ಹಾಗೂ ಅವುಗಳ ಅಡಿಯಲ್ಲಿ ಬರುವ ಎಲ್ಲಾ ಆಯುಕ್ತಾಲಯ ಮತ್ತು ನಿರ್ದೇಶನಾಲಯಗಳನ್ನು ಒಂದೇ ಆಯುಕ್ತಾಲಯದಡಿ ತಂದು ಆಡಳಿತ ಕೇಂದ್ರೀಕರಣ ಮಾಡಿ ಆರ್ಥಿಕ ಮಿತವ್ಯಯ ಸಾಧಿಸಲು ಹಾಗೂ ಕನಿಷ್ಠ ಆಡಳಿತ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿಯಾದ ಸೇವೆಗಳನ್ನು ನೀಡಲು ಅನುವು ಮಾಡಿಕೊಡುವಂತೆ ಸಿ.ಟಿ.ರವಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News