ರಾಜ್ಯ ರಾಜಧಾನಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮನಬಂದಂತೆ ಮರಗಳಿಗೆ ಕತ್ತರಿ

Update: 2020-06-05 18:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.5: ರಾಜಧಾನಿಯಲ್ಲಿ ರಸ್ತೆ ವಿಸ್ತರಣೆ, ಫುಟ್‍ಪಾತ್, ಚರಂಡಿ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳ ಬೇರುಗಳನ್ನು ಮನಬಂದಂತೆ ಕತ್ತರಿಸಲಾಗುತ್ತಿದೆ. ಪರಿಣಾಮ, ಮಳೆಗಾಲ ಶುರುವಾಯಿತೆಂದರೆ ನೂರಾರು ವೃಕ್ಷಗಳು ನೆಲಕ್ಕೊರಗುತ್ತಿವೆ.

ಸಿಲಿಕಾನ್ ಸಿಟಿಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಬಿರುಗಾಳಿ ಸಹಿತ ಮಳೆಯ ಪರಿಣಾಮ 159 ಮರಗಳು ಬುಡಸಮೇತ ಧರೆಗುರುಳಿದಿವೆ. ಮಳೆಯಿಂದ ಸಂಭವಿಸಿದ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾರು, ಬೈಕ್, ಆಟೊ, ಬಸ್ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ. ಸಾರ್ವಜನಿಕ, ಖಾಸಗಿ ಆಸ್ತಿಗೆ ಹಾನಿಯಾಗಿದೆ. ಬಿಬಿಎಂಪಿಯು ಮರಗಳ ನಿರ್ವಹಣೆ ಕಡೆಗಣಿಸಿರುವುದರಿಂದ ಪ್ರತಿವರ್ಷವೂ ಅನಾಹುತಗಳು ಸಂಭವಿಸುತ್ತಲೇ ಇವೆ.

ನಗರದಲ್ಲಿನ ಹೆಚ್ಚಿನ ಮರಗಳು ಮೂಲತಃ ದೇಶಿ ತಳಿಗಳಲ್ಲ. ಹೆಚ್ಚಿನವು ವಿದೇಶಿ ತಳಿಗಳಾಗಿದ್ದು, ಇವುಗಳ ಬೇರು, ಕಾಂಡ ಗಟ್ಟಿ ಇರುವುದಿಲ್ಲ. ಇವೆಲ್ಲವೂ ಮೆದು ಮರಗಳಾಗಿದ್ದು, ದೇಶಿ ತಳಿಗಳಾದ ಅರಳಿ, ಹುಣಸೆ, ಹೊಂಗೆ, ಮಾವು, ನೇರಳೆಯಂತೆ ಬೇರುಗಳು ಆಳಕ್ಕೆ ಇಳಿಯುವುದಿಲ್ಲ. ದೇಶಿ ಪ್ರಭೇದದ ಮರಗಳು ಎಂಥ ಗಾಳಿ, ಮಳೆಗೂ ಜಗ್ಗದೆ ನೂರಾರು ವರ್ಷ ಗಟ್ಟಿಯಾಗಿ ನಿಲ್ಲುತ್ತವೆ. ಗುಲ್‍ಮೊಹರ್, ಜಕರಂದ, ರೈನ್‍ಟ್ರೀ, ಪೆಲ್ಟೊಫಾರ್ಮ, ಸ್ಪೆತೋಡಿಯಾ, ಆಫ್ರಿಕನ್ ಟುಲಿಪ್‍ನಂತಹ ವಿದೇಶಿ ಮೂಲದ ಮೆತ್ತನೆಯ ಮರಗಳೇ ಹೆಚ್ಚಾಗಿ ಗಾಳಿ ಮಳೆಯಿಂದ ಧರೆ ಉರುಳಿವೆ.

ಈ ಸಂಬಂಧ ಮಾತನಾಡಿರುವ ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ, ರಸ್ತೆ ವಿಸ್ತರಣೆ, ಚರಂಡಿ, ಫುಟ್‍ಪಾತ್ ನಿರ್ಮಾಣಕ್ಕಾಗಿ ಮರಗಳ ಬೇರುಗಳನ್ನು ಕತ್ತರಿಸಿ ಹಾಕಲಾಗುತ್ತಿದೆ. ಬುಡಕ್ಕೆ ಒಂದು ಹನಿ ನೀರು ಹೋಗದಂತೆ ಬುಡಗಳಿಗೆ ಕಾಂಕ್ರೀಟ್, ಡಾಂಬರು ಮೆತ್ತಲಾಗುತ್ತಿದೆ. ಒಂದು ಗಿಡದಲ್ಲಿ ಎಷ್ಟು ಎಲೆಗಳಿವೆಯೋ ಅಷ್ಟು ಬೇರುಗಳಿರಬೇಕು. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಬೇರುಗಳನ್ನು ಕಡಿಯುತ್ತಿರುವುದರಿಂದ ಅವು ಕೊಳೆತು ಹೋಗುತ್ತಿವೆ. ಹೀಗಾಗಿ, ಮಳೆ ಬಂದಾಗ ಬೀಳುತ್ತಿವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News