ಸುರಕ್ಷಿತ ಅಂತರ ಉಳಿಯಲಿ ಸಾಮಾಜಿಕ ಅಂತರ ಅಳಿಯಲಿ

Update: 2020-06-11 06:23 GMT

ವರ್ತಮಾನದ ಎಲ್ಲ ನೋವು ಸಂಕಟಗಳಿಗೆ ನಾವು ಕೊರೋನವನ್ನು ಹೊಣೆ ಮಾಡುತ್ತಿದ್ದೇವೆ. ಆದರೆ ಶತಮಾನಗಳಿಂದ ಮನುಷ್ಯನೇ ಮನುಷ್ಯನಿಗೆ ಎಸಗುತ್ತಾ ಬಂದಿರುವ ಅನ್ಯಾಯಗಳಿಗೆ ಹೋಲಿಸಿದರೆ, ಕೊರೋನ ಮನುಷ್ಯನಿಗೆ ತನ್ನ ಮಿತಿಯನ್ನು ತಿಳಿಸುವುದಕ್ಕಾಗಿಯೇ ಬಂದ ವರದಾನವೇನೋ ಎಂದು ನಾವು ಭಾವಿಸಬೇಕಾಗಿದೆ. ಕೊರೋನ ಇಲ್ಲ ದ ದಿನಗಳಲ್ಲೂ ನಾವು ಮನುಷ್ಯರನ್ನು ಬೇರೆ ಬೇರೆ ಕಾರಣಗಳಿಂದ ದೂರ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಈ ದೇಶದ ಅಸ್ಪಶ್ಯತೆಗೆ ಕೊರೋನ ವೈರಸ್ ಕಾರಣವೇ ಅಲ್ಲ. ಯಾವ ಸೋಂಕುಗಳೂ ಇಲ್ಲದ ದಿನಗಳಲ್ಲೂ ನಿರ್ದಿಷ್ಟ ಕೆಲವು ಮನುಷ್ಯರನ್ನು ಕೆಳಜಾತಿ ಎಂದು ಕರೆದು ಅವರನ್ನು ಸಮಾಜದಿಂದ ದೂರ ಇಡುತ್ತಾ ಬರಲಾಗಿದೆ. ಒಂದು ಸಮುದಾಯವನ್ನು ದಲಿತರು, ಪಂಚಮರು ಎಂದೆಲ್ಲ ಕರೆದು ಅವರು ನೀರನ್ನು ಮುಟ್ಟುವುದನ್ನು ನಿರಾಕರಿಸಲಾಗಿದೆ. ಈ ದೇಶದ ಪರಿಶಿಷ್ಟ ಸಮುದಾಯದ ದೀನಾವಸ್ಥೆಗೆ ಕೊರೋನ ಖಂಡಿತ ಕಾರಣವಲ್ಲ. ಕೊರೋನ ಒಮ್ಮೆಲೆ ಉದ್ಭವಿಸಿ ಇಡೀ ವಿಶ್ವದ ಮನುಷ್ಯರನ್ನು ಪರಸ್ಪರ ಅಸ್ಪಶ್ಯರನ್ನಾಗಿಸಿತು. ಭಾರತದಲ್ಲಿ ಮೇಲ್ಜಾತಿ ಎಂದು ಕರೆಸಿಕೊಳ್ಳುವವರೇ ಪರಸ್ಪರ ಮುಟ್ಟಿಕೊಳ್ಳಲು ಅಂಜುವಂತಾಯಿತು. ಎಲ್ಲರೂ ಎಲ್ಲರಿಂದಲೂ ಅಂತರ ಕಾಪಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಒಂದು ಗಮನಿಸಬೇಕು. ಬರೇ ಆರೋಗ್ಯದ ಕಾರಣಕ್ಕಾಗಿ ಪರಸ್ಪರ ಅಂತರ ಕಾಪಾಡುವುದರಿಂದ ನಾವು ಅನುಭವಿಸಿದ ಸಂಕಷ್ಟಗಳು ಒಂದೆರೆಡಲ್ಲ. ಆದರೆ ‘ಅಸ್ಪಶ್ಯತೆಯ ಅಂತರ’ದಲ್ಲಿ ಬರೇ ಸಂಕಷ್ಟಗಳು ಮಾತ್ರವಲ್ಲ, ಅವಮಾನಗಳೂ ತಳಕು ಹಾಕಿಕೊಂಡಿವೆ. ಈ ಅವಮಾನವನ್ನು ಭಾರತದ ಒಂದು ನಿರ್ದಿಷ್ಟ ಸಮುದಾಯ ಶತಶತಮಾನಗಳಿಂದ ಅನುಭವಿಸಿಕೊಂಡು ಬಂದಿದೆ. ಇದೇ ರೀತಿ, ಧರ್ಮಗಳ ಆಧಾರದಲ್ಲೂ ಅಂತರಗಳನ್ನು ಸೃಷ್ಟಿಸುವ ಹುನ್ನಾರ ಈ ದೇಶದಲ್ಲಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದು ತೀವ್ರಗೊಂಡಿದೆ. ಸರಕಾರದ ನೇತೃತ್ವದಲ್ಲೇ ಈ ಅಂತರಗಳನ್ನು ಸೃಷ್ಟಿಸಲಾಗುತ್ತಿದೆೆ. ಇದನ್ನು ಸೃಷ್ಟಿಸುವುದಕ್ಕಾಗಿಯೇ ಹಲವು ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಹಲವು ಸಾವಿರ ಕೋಟಿ ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಎಲ್ಲ ಮನುಷ್ಯರೂ ಸಮಾನರು ಎಂಬ ಸಂದೇಶವನ್ನು ಸಾರುವುದಕ್ಕಾಗಿಯೇ ಕೊರೋನ ನಮ್ಮ ನಡುವೆ ಕಾಣಿಸಿಕೊಂಡು ‘ಅಂತರ’ಗಳನ್ನು ಎಲ್ಲರಿಗೂ ಸಮಾನವಾಗಿಸಿತು. ದೇಗುಲ, ಮಸೀದಿ, ಚರ್ಚ್‌ಗಳ ಹೆಸರಿನಲ್ಲಿ ರಾಜಕೀಯ ನಡೆಸಿದ ಕಾರಣಕ್ಕಾಗಿಯೋ ಏನೋ, ಈ ಧಾರ್ಮಿಕ ಕೇಂದ್ರಗಳೂ ಅನಿವಾರ್ಯವಾಗಿ ಬಾಗಿಲು ಹಾಕುವ ಸನ್ನಿವೇಶ ನಿರ್ಮಾಣವಾಯಿತು. ಕೊರೋನ ಮನುಷ್ಯನ ಸ್ವಾರ್ಥಗಳನ್ನು ಮಾತ್ರವಲ್ಲ, ಹಲವು ಸಂದರ್ಭಗಳಲ್ಲಿ ‘ಒಳ್ಳೆಯತನ’ಗಳನ್ನು ಬಹಿರಂಗಪಡಿಸಿತು. ಒಳ್ಳೆಯತನಕ್ಕೆ ಜಾತಿ ಧರ್ಮಗಳಿಲ್ಲ ಎನ್ನುವ ಅಂಶವು ಈ ಸಂದರ್ಭದಲ್ಲಿ ಬೆಳಕಿಗೆ ಬಂತು. ಇಷ್ಟರವರೆಗಿನ ನಾಶ, ನಷ್ಟದಿಂದ ಮನುಷ್ಯ ಒಂದಿಷ್ಟು ಒಳ್ಳೆಯವನಾಗಿ ಸಹಜೀವಿಗಳೊಂದಿಗೆ ಸಹೃದಯಿಯಾಗಿ ವರ್ತಿಸಬೇಕಾಗಿತ್ತು. ಆದರೆ ‘ಕೊರೋನ ವೈರಸ್’ನ ಹೆಸರಿನಲ್ಲೇ ಜನರನ್ನು ಒಡೆಯಲು ನೋಡಿದ ಮನುಷ್ಯ, ಇದೀಗ ದೇವಸ್ಥಾನ, ಮಸೀದಿ ಬಾಗಿಲು ತೆರೆಯುತ್ತಿದ್ದಂತೆಯೇ ಮತ್ತೆ ತನ್ನ ಪುರಾತನ ‘ಸಾಮಾಜಿಕ ಅಂತರ’ವನ್ನು ಜಾರಿಗೊಳಿಸಲು ಹೊರಟಿದ್ದಾನೆ. ಲಾಕ್‌ಡೌನ್ ಕಾರಣದಿಂದ ಮುಚ್ಚಲ್ಪಟ್ಟಿದ್ದ ದೇವಸ್ಥಾನಗಳ ಬಾಗಿಲನ್ನು ಸರಕಾರ ತೆರೆದರೂ, ಈ ದೇಶದ ದಲಿತರಿಗೆ ಮಾತ್ರ ದೇವಸ್ಥಾನದ ಬಾಗಿಲು ತೆರೆದಿಲ್ಲ ಎನ್ನುವುದು ಲಕ್ನೊದಲ್ಲಿ ಸಾಬೀತಾಗಿದೆ. ಉತ್ತರ ಪ್ರದೇಶದ ಲಕ್ನೊದ ಗ್ರಾಮವೊಂದರ ದೇವಸ್ಥಾನಕ್ಕೆ ದಲಿತ ಬಾಲಕನೊಬ್ಬ ಪ್ರವೇಶಿಸಲು ಯತ್ನಿಸಿದ ಕಾರಣಕ್ಕೆ ಆತನನ್ನು ಗುಂಡಿಟ್ಟು ಕೊಂದು ಹಾಕಲಾಗಿದೆ. ಯಾವುದೇ ಲಾಕ್‌ಡೌನ್, ಕರ್ಫ್ಯೂ ಇಲ್ಲದೇ ಇದ್ದರೂ ಆತನಿಗೆ ದೇವಸ್ಥಾನದೊಳಗೆ ಪ್ರವೇಶ ದೊರಕಲಿಲ್ಲ ಮಾತ್ರವಲ್ಲ, ಪ್ರಯತ್ನಿಸಿದ ಒಂದೇ ಕಾರಣಕ್ಕಾಗಿ ಆತನನ್ನು ಕೊಂದು ಹಾಕಲಾಗಿದೆ. ಕೊರೋನ ಹರಡದಂತೆ ದೇವಸ್ಥಾನ, ಮಸೀದಿಯೊಳಗೆ ‘ಅಂತರ’ ಕಾಪಾಡಿಕೊಳ್ಳಿ ಎಂದು ನಿಬಂಧನೆಗಳನ್ನು ಸರಕಾರ ಮಾಡಿದೆ. ಆದರೆ ಕೊರೋನ ಆಗಮಿಸುವ ಮೊದಲೇ, ಶತಮಾನಗಳಿಂದ ಧಾರ್ಮಿಕ ಸ್ಥಳದಲ್ಲಿ ಜಾರಿಯಲ್ಲಿರುವ ಈ ‘ಅಂತರ’ಗಳ ವೈರಸ್‌ಗಳಿಂದ ರಕ್ಷಿಸಿಕೊಳ್ಳುವ ಬಗೆಯನ್ನು ಸರಕಾರ ಇನ್ನೂ ತಿಳಿಸಿಲ್ಲ. ಇಲ್ಲವಾದರೆ ಈ ಕೊಲೆ ನಡೆಯುತ್ತಲೇ ಇರಲಿಲ್ಲ. ಕೊರೋನ ವೈರಸ್‌ನಿಂದ ಆ ಬಾಲಕ ಸತ್ತಿದ್ದರೆ, ಮಾಧ್ಯಮಗಳು ಹಗಲು ರಾತ್ರಿ ಗದ್ದಲ ಎಬ್ಬಿಸುತ್ತಿದ್ದವು. ಆದರೆ ಆತ ಸತ್ತಿದ್ದು ‘ಜಾತಿ ವೈರಸ್’ನಿಂದಾಗಿರುವುದರಿಂದ ಇದು ಚರ್ಚೆಯ ವಿಷಯವೇ ಆಗಲಿಲ್ಲ. ಮೊನ್ನೆ ಮೊನ್ನೆಯವರೆಗೆ ಎಲ್ಲ ಧಾರ್ಮಿಕ ಸ್ಥಳಗಳು ಎಲ್ಲರಿಗೂ ನಿಷೇಧ ಹಾಕಿದ್ದವು. ಕೊರೋನ ವೈರಸ್ ಅದೆಷ್ಟೇ ಕೆಟ್ಟದಾಗಿದ್ದರೂ, ಅದು ಯಾರಲ್ಲೂ ಜಾತಿ ಭೇದ, ಧರ್ಮ ಭೇದಗಳನ್ನು ತೋರಿಸಲಿಲ್ಲ. ಸುರಕ್ಷತೆಯನ್ನು ಪಾಲಿಸದ ಎಲ್ಲ ಜಾತಿಯವರಲ್ಲೂ ಕೊರೋನ ಕಾಣಿಸಿಕೊಂಡಿತು. ಎಲ್ಲ ಜಾತಿ, ಧರ್ಮಗಳ ಜನರಲ್ಲೂ ಕಾಣಿಸಿಕೊಂಡ ಕಾರಣಕ್ಕಾಗಿಯೇ ಎಲ್ಲ ಧರ್ಮಗಳ ಧಾರ್ಮಿಕ ಸ್ಥಳಗಳನ್ನೂ ಮುಚ್ಚಿಸಲಾಯಿತು. ಒಂದು ರೋಗದ ಮುಂದೆ ಎಲ್ಲ ಧರ್ಮಗಳ, ಜಾತಿಗಳ ಜನರು ಸಮಾನವಾಗಿರುವಾಗ, ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ಕೆಲವು ಧಾರ್ಮಿಕ ಸ್ಥಳಗಳಲ್ಲಿ ಯಾವ ರೋಗದ ಸೋಂಕು ಇಲ್ಲದ ನಿರ್ದಿಷ್ಟ ಜಾತಿಯ ಜನರು ಹೊರಗೆ ನಿಲ್ಲುವುದು ಹೇಗೆ? ಕೊರೋನದಿಂದ ಕನಿಷ್ಠ ಎಲ್ಲ ಮನುಷ್ಯರು ದೇವರ ಮುಂದೆ ಸಮಾನರು ಎನ್ನುವ ನೀತಿಯನ್ನು ಕಲಿಯಲು ಸಾಧ್ಯವಾಗದೇ ಇದ್ದರೆ, ನಾವು ಕೊರೋನಕ್ಕಿಂತಲೂ ಭೀಕರ ರೋಗಗಳನ್ನು, ವೈರಸ್‌ಗಳನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ.

 ಕರ್ನಾಟಕದಲ್ಲಿ ಇನ್ನೊಂದು ಭಿನ್ನವಾದ ಪ್ರಕರಣ ನಡೆದಿದೆ. ರಾಯಚೂರಿನ ಸಿರವಾರ ತಾಲೂಕಿನ ಪ್ರಮುಖ ಕೆರೆಯೊಂದರ ನೀರನ್ನು ಜನರು ಖಾಲಿ ಮಾಡಿಸುತ್ತಿದ್ದಾರೆ. ಇದಕ್ಕೆ ಕಾರಣ ಮಾತ್ರ ನಿಕೃಷ್ಟವಾದುದು. ಗ್ರಾಮಪಂಚಾಯತ್‌ನ ಸಿಬ್ಬಂದಿಯೊಬ್ಬ ಕೆರೆಗೆ ಕಲ್ಲನ್ನು ಎಸೆದಿದ್ದಾನೆ. ಇದನ್ನು ಯಾರೋ ನೋಡಿ, ಇನ್ನೊಬ್ಬರಿಗೆ ತಿಳಿಸಿದ್ದಾರೆ. ಬಾಯಿಯಿಂದ ಬಾಯಿಗೆ  ಸುದ್ದಿ ಹರಡಿ ಜನರಲ್ಲಿ ಗಾಬರಿ ಉಂಟಾಗಿದೆ. ತಮಾಷೆಗೆ ಎಸೆದ ಕಲ್ಲನ್ನು, ‘ಯಾವುದೋ ಅಪಾಯಕಾರಿ’ ವಸ್ತುವನ್ನು ಕೆರೆಗೆ ಎಸೆದಿದ್ದಾನೆ ಎಂದು ಜನರು ಅನುಮಾನಿಸಿದ್ದಾರೆ. ಕಲ್ಲು ಎಸೆದಾತ ಸ್ವತಃ ನೀರನ್ನು ತಾನೇ ಕುಡಿದು ತೋರಿಸಿದರೂ ಅವರ ಅನುಮಾನ ಹೋಗಿಲ್ಲ. ಅಂತಿಮವಾಗಿ ಅವರು ಇಡೀ ಕೆರೆಯ ನೀರನ್ನೇ ಖಾಲಿ ಮಾಡಲು ಮುಂದಾಗಿದ್ದಾರೆ. ಜನರ ಈ ಅನುಮಾನಕ್ಕೊಂದು ಕಾರಣವಿದೆ. ಕಲ್ಲು ಎಸೆದಾತನ ಹೆಸರು ‘ಮುಹಮ್ಮದ್’ ಎಂದಾಗಿತ್ತು. ಈ ಹೆಸರನ್ನೇ ಮುಂದಿಟ್ಟುಕೊಂಡು ಕೆಲವರು ತಮ್ಮ ರಾಜಕೀಯ ದುರುದ್ದೇಶಗಳನ್ನು ಸಾಧಿಸಲು ಮುಂದಾಗಿದ್ದಾರೆ. ರೈತರ ಪಾಲಿಗೆ ಈ ಕೆರೆ ಸಂಜೀವಿನಿಯಾಗಿತ್ತು. ಸುಮಾರು ಮೂರು ಸಾವಿರ ಜನಸಂಖ್ಯೆಯಿರುವ ಈ ಊರಿನ ಜನರಿಗೆ ಕುಡಿಯುವುದಕ್ಕೆ ಈ ನೀರೇ ಆಸರೆ. ಕೆರೆಯಲ್ಲಿ ಸುಮಾರು ಮೂರು ತಿಂಗಳಿಗೆ ಸಾಕಾಗುವಷ್ಟು ನೀರು ದಾಸ್ತಾನಿತ್ತು. ಈ ನೀರನ್ನು ತುಂಗಭದ್ರಾ ಎಡದಂಡೆ ನಾಲೆಯಿಂದ ಈ ಕೆರೆಗೆ ಹರಿಸಲಾಗಿತ್ತು. ಇದೀಗ ಈ ಕುಡಿಯುವ ನೀರನ್ನು ಬರೇ ಜನಾಂಗೀಯ ದ್ವೇಷ, ಅನುಮಾನ, ಮೌಢ್ಯವನ್ನು ಮುಂದಿಟ್ಟುಕೊಂಡು ಯಾವ ಕಾರಣವೂ ಇಲ್ಲದೆ ವ್ಯರ್ಥ ಮಾಡಲಾಗುತ್ತಿದೆ. ಈ ನೀರನ್ನು ಸಂಪೂರ್ಣ ಬತ್ತಿಸುವುದಕ್ಕೆ ಐದು ದಿನ ಬೇಕಾಗಬಹುದು ಎಂದು ಜನರು ಹೇಳುತ್ತಾರೆ. ಎಷ್ಟೋ ಊರುಗಳು ಕುಡಿಯುವುದಕ್ಕೆ ನೀರಿಲ್ಲದೆ ಹಾಹಾಕಾರ ಮಾಡುತ್ತಿರುವ ಈ ಹೊತ್ತಿನಲ್ಲಿ ಸುಮಾರು ಮೂರು ತಿಂಗಳು ಬಳಸಬಹುದಾದ ನೀರನ್ನು ಚೆಲ್ಲುವ ಮನಸ್ಥಿತಿ ಯಾವುದೇ ಕೊರೋನ ವೈರಸ್‌ಗಿಂತ ಭೀಕರವಾದುದು. ಕೊರೋನ ವೈರಸ್ ಇಷ್ಟೆಲ್ಲ ಅನಾಹುತಗಳನ್ನು ಮಾಡುತ್ತಿರುವಾಗಲೂ ಜನರಲ್ಲಿ ಸ್ವಾರ್ಥ, ವೌಢ್ಯ ತಣ್ಣಗಾಗಿಲ್ಲ ಎಂದರೆ ನಾವು ಸದ್ಯದ ಸಂಕಟಗಳಿಗೆ ಕೊರೋನ ವೈರಸ್‌ನ್ನು ದೂರುವುದರಿಂದ ಏನು ಪ್ರಯೋಜನ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News