ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸಹೋದರರಿಬ್ಬರ ಕೊಲೆ

Update: 2020-06-16 15:24 GMT

ಬೆಂಗಳೂರು, ಜೂ.16: ಸಹೋದರರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಕಲ್ಯಾಣ ನಗರದ ಸಹದೇವ(29) ಮತ್ತು ಆತನ ಸಹೋದರ ದಂಡಪಾಣಿ(27) ಕೊಲೆಯಾದವರು ಎಂದು ತಿಳಿದುಬಂದಿದೆ.

ಸಹದೇವ ಮತ್ತು ದಂಡಪಾಣಿ ಅನ್ನಪೂರ್ಣೇಶ್ವರಿ ನಗರದ ಹೋಟೆಲೊಂದರ ಬಳಿ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ವಾಣಿಜ್ಯ ಕಟ್ಟಡದ ನೆಲ ಮಹಡಿಯಲ್ಲಿ ಮಲಗಿದ್ದ ಇವರಿಬ್ಬರ ತಲೆ ಮೇಲೆ ದುಷ್ಕರ್ಮಿಗಳು ಇಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಘಟನೆ ಸೋಮವಾರ ನಡೆದಿದ್ದು, ಮಂಗಳವಾರ ಮುಂಜಾನೆ ವಾಣಿಜ್ಯ ಕಟ್ಟಡದ ಮಾಲಕ ರಾಮಕೃಷ್ಣ ಗೌಡ ಅವರು ನೆಲ ಮಹಡಿಗೆ ಹೋಗಿ ನೋಡಿದಾಗ ಕೊಲೆ ಆಗಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ದಾವಿಸಿರುವ ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ದುಷ್ಕಮಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News