ಈ ನಾಲ್ಕು ರಾಜ್ಯಗಳಲ್ಲಿ ಕೋವಿಡ್ ಸಾವು ಸಂಭವಿಸಿಲ್ಲ

Update: 2020-06-27 03:48 GMT

ಹೊಸದಿಲ್ಲಿ, ಜೂ.27: ದೇಶದಲ್ಲಿ ಕೋವಿಡ್-19 ಸೋಂಕಿನಿಂದ 15 ಸಾವಿರಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದರೂ, ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಝೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂನಲ್ಲಿ ಇದುವರಗೆ ಯಾರೂ ಈ ಮಾರಕ ಸೋಂಕಿಗೆ ಬಲಿಯಾಗಿಲ್ಲ.

ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಸೋಂಕಿನ ಪ್ರಮಾಣ ಕೂಡಾ ಈ ರಾಜ್ಯಗಳಲ್ಲಿ ಕನಿಷ್ಠ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಈ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಪರೀಕ್ಷಾ ವ್ಯವಸ್ಥೆ, ಕೋವಿಡ್-19 ಚಿಕಿತ್ಸೆಗೆ ಆಸ್ಪತ್ರೆಗಳು ಇಲ್ಲದ ಕಾರಣ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಆರಂಭದಲ್ಲಿ ತಡೆ ಉಂಟಾಗಿದ್ದರೂ, ಇದೀಗ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ನಾಲ್ಕು ರಾಜ್ಯಗಳಲ್ಲಿ ಒಟ್ಟು 3,731 ಸಕ್ರಿಯ ಪ್ರಕರಣಗಳಿದ್ದು, 5,715 ಮಂದಿ ಚೇರಿಸಿಕೊಂಡಿದ್ದಾರೆ. ಇಡೀ ಈಶಾನ್ಯ ಭಾರತದಲ್ಲಿ ಸಾವಿನ ಸಂಖ್ಯೆ ಕೇವಲ 12 ಎಂದು ಸಚಿವಾಲಯ ಅಂಕಿಅಂಶ ಬಿಡುಗಡೆ ಮಾಡಿದೆ. ಈ ಪ್ರದೇಶದಲ್ಲಿ ಪರೀಕ್ಷಾ ಸೌಲಭ್ಯದ ಕೊರತೆ ವ್ಯಾಪಕವಾಗಿ ಕಾಡುತ್ತಿತ್ತು. ಆದರೆ ಕೇಂದ್ರ ಸರ್ಕಾರ ಆರೋಗ್ಯ ಸಚಿವಾಲಯದ ಮೂಲಕ ಹಸ್ತಕ್ಷೇಪ ಮಾಡಿದ ಪರಿಣಾಮ ಇಂದು 39 ಪರೀಕ್ಷಾ ಕೇಂದ್ರಗಳು ಸರ್ಕಾರಿ ವಲಯದಲ್ಲಿ ಹಾಗೂ 42 ಪ್ರಯೋಗಾಲಯಗಳು ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News