ಮಾರುತಿ ಸುಝುಕಿ ಕಂಪೆನಿಯ 46 ಕಾರ್ಮಿಕರ ವಜಾ ಆರೋಪ: ಕಾರ್ಮಿಕರಿಂದ ಮೌನ ಪ್ರತಿಭಟನೆ
Update: 2020-07-07 16:47 GMT
ಬೆಂಗಳೂರು, ಜು.7: ಇಲ್ಲಿನ ಡಾಬಸ್ ಪೇಟೆಯಲ್ಲಿರುವ ಮಾರುತಿ ಸುಝುಕಿ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 46 ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಮೌನ ಪ್ರತಿಭಟನೆ ನಡೆಸಿದರು.
ಮಾರುತಿ ಸುಝುಕಿ ಕಾರ್ಖಾನೆಯಲ್ಲಿ ಕಳೆದ 9 ವರ್ಷಗಳಿಂದ ಭರತ್ ಎಂಟರ್ ಪ್ರೈಸಸ್ ಮಾಲಕ ಭರತ್ ಬಾಬು ಎಂಬವರು ಕೂಲಿ ಕಾರ್ಮಿಕರ ಜವಾಬ್ದಾರಿ ವಹಿಸಿಕೊಂಡಿದ್ದರು. ಕೊರೋನ ಹಿನ್ನೆಲೆ ಕಾರ್ಖಾನೆ ಸಂಪೂರ್ಣ ಲಾಕ್ಡೌನ್ ಆಗಿದ್ದು, ಭರತ್ ಬಾಬು ಕಾರ್ಮಿಕರ ಸಂಪೂರ್ಣ ವೇತನ ತೆಗೆದುಕೊಂಡಿದ್ದರೂ ಕಾರ್ಮಿಕರಿಗೆ ನೀಡದೇ ವಂಚಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಮಂಗಳವಾರ ದಿಢೀರ್ 46 ಕಾರ್ಮಿಕರನ್ನು ಕೆಲಸಕ್ಕೆ ಬರಬೇಡಿ ಎಂದು ಹೇಳಲಾಗಿದೆ ಎನ್ನಲಾಗಿದ್ದು, ಇದನ್ನು ಖಂಡಿಸಿ ಕಾರ್ಮಿಕರು ಕಾರ್ಖಾನೆ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದರು.