ಬೇರೆ ದೇಶಗಳ ಯಶಸ್ವಿ ಚಿಕಿತ್ಸಾ ಕ್ರಮ ಅಧ್ಯಯನಕ್ಕೆ ಶೀಘ್ರದಲ್ಲೇ ಸಮಿತಿ: ಡಾ.ಕೆ.ಸುಧಾಕರ್

Update: 2020-07-07 16:51 GMT

ಬೆಂಗಳೂರು, ಜು.7: ಕೊರೋನ ಸೋಂಕಿನ ನಿಯಂತ್ರಣಕ್ಕಾಗಿ '5-ಟಿ  ಸೂತ್ರ' ಅನುಸರಿಸುತ್ತಾ ಬಂದಿರುವ ಕರ್ನಾಟಕದಲ್ಲಿ ಇನ್ನು ಮುಂದೆ ಇದರ ಜೊತೆಗೆ '4-ಸಿ ಸೂತ್ರ' ಅನುಸರಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕಿತರ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್‍ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿರುವ ಚಿಕಿತ್ಸಾ ಕ್ರಮಗಳನ್ನು ಅಧ್ಯಯನ ಮಾಡಲು ಹಾಗೂ ಅವುಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

4-ಸಿ ಸೂತ್ರ: 4-ಸಿ ಸೂತ್ರ. ಆತ್ಮವಿಶ್ವಾಸ, ಸಹಭಾಗಿತ್ವ, ಸಂವಹನ ಮತ್ತು ಅನುಕಂಪಗಳನ್ನು ಅನುಸರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಅವರು, ಪ್ರಸ್ತುತ ಕೋವಿಡ್ ಸೇವೆಯಲ್ಲಿ ತೊಡಗಿರುವ ಆರೋಗ್ಯ ಯೋಧರು 4 ತಿಂಗಳಿನಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, ಖಾಸಗಿ ವಲಯಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಇರುವ ಪರಿಣಿತರು ಕೆಲದಿನಗಳ ಮಟ್ಟಿಗೆ ಅವರ ಸ್ಥಾನ ತುಂಬಬೇಕಿದೆ ಎಂದರು.

ಸರಕಾರ, ನಾಗರಿಕರು ಮತ್ತು ಸಂಘ-ಸಂಸ್ಥೆಗಳ ಸಹಭಾಗಿತ್ವದಿಂದ ಕೊರೋನ ಮಣಿಸಲು ಸಾಧ್ಯ. ಇದಕ್ಕಾಗಿ ನಾಳೆಯೇ ಸರಕಾರ ಆಪ್ ಬಿಡುಗಡೆ ಮಾಡಲಿದ್ದು ಸ್ವಯಂ ಪ್ರೇರಿತರಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಕೊರೋನ ವಿರುದ್ಧದ ಈ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಬಹುದು ಎಂದ ಅವರು, ಕೊರೋನ ಸೋಂಕಿತರನ್ನು ಅಸ್ಪೃಶ್ಯರಂತೆ ನೋಡಬಾರದು. ಸರಿಯಾದ ಮಾಹಿತಿ ಪಡೆದುಕೊಂಡು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಮೂಲಕ ಕೊರೋನ ಸೋಂಕು ಮಣಿಸಬೇಕು ಎಂದು ತಿಳಿಸಿದರು.

ಕೇಂದ್ರದ ಶ್ಲಾಘನೆ: ಕೇಂದ್ರ ಸರಕಾರದ ಉನ್ನತ ಮಟ್ಟದ ನಿಯೋಗ ಇಂದು ರಾಜ್ಯದ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಪರಿಶೀಲಿಸಿದ್ದು ರಾಜ್ಯದ ಕ್ರಮಗಳನ್ನು ಶ್ಲಾಘಿಸಿದ್ದಾರೆಂದ ಸಚಿವ ಸುಧಾಕರ್, ಕೇಂದ್ರದ ನಿಯೋಗದ ಶಿಫಾರಸ್ಸಿನಂತೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಟೆಸ್ಟ್ ನಡೆಸುವ ಅವಶ್ಯಕತೆ ಇದ್ದು, ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲಿವೆ. ಜನರು ಆತಂಕಪಡದೆ ಮುನ್ನೆಚ್ಚರಿಕೆ ವಹಿಸಬೇಕು. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚು ಆಂಟಿಜೆನ್ ಟೆಸ್ಟ್ ನಡೆಸಬೇಕು, ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಬೇಕು ಎಂಬುದು ಕೇಂದ್ರ ನಿಯೋಗದ ಅಭಿಪ್ರಾಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News