ಬೆಂಗಳೂರು: ಆಟವಾಡುತ್ತಿದ್ದಾಗ ಆಯತಪ್ಪಿ ಬಿದ್ದು ರಾಜಕಾಲುವೆಯಲ್ಲಿ ಕೊಚ್ಚಿಹೋದ ಬಾಲಕಿ

Update: 2020-07-10 12:58 GMT

ಬೆಂಗಳೂರು, ಜು.10: ಮನೆಯ ಮುಂದೆ ಆಟವಾಡುತ್ತಿದ್ದಾಗ ಆಯತಪ್ಪಿ ಬಿದ್ದು ಮಾರತಹಳ್ಳಿಯ ರಾಜಕಾಲುವೆಯಲ್ಲಿ ಬಾಲಕಿಯೊಬ್ಬಳು ಕೊಚ್ಚಿ ಹೋದ ಘಟನೆ ಶುಕ್ರವಾರ ಮಂತ್ರಿ ಅಪಾರ್ಟ್​ಮೆಂಟ್​ ಬಳಿ ನಡೆದಿದೆ. 

ನಿತ್ಯಾನಂದ ಎಂಬವರ ಮಗಳು ಮೊನಾಲಿಕ(6) ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ ಎಂದು ತಿಳಿದುಬಂದಿದೆ.

ಮೂಲತಃ ಅಸ್ಸಾಂನವರಾದ ನಿತ್ಯಾನಂದ ಕುಟುಂಬ, ಮಂತ್ರಿ ಅಪಾರ್ಟ್​ಮೆಂಟ್​ ಹಿಂಭಾಗದ ಗುಡಿಸಿಲಿನಲ್ಲಿ ವಾಸವಿತ್ತು. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೊನಾಲಿಕ ಆಟವಾಡುತ್ತಿದ್ದಾಗ ಆಯಾತಪ್ಪಿ ಪಕ್ಕದಲ್ಲಿದ್ದ ಕಾಲುವೆಗೆ ಬಿದ್ದಿದ್ದಾಳೆ. ಕೂಡಲೇ ಮನೆಯವರ ಗಮನಕ್ಕೆ ಬಂದರೂ ಸಹ ಬಾಲಕಿ ಕೊಚ್ಚಿ ಹೋಗಿದ್ದಾಳೆ ಎನ್ನಲಾಗಿದೆ.

ಗುರುವಾರ ಸುರಿದ ಭಾರೀ ಮಳೆಯಿಂದ ರಾಜಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News