ರೇಷ್ಮೆಗೂಡಿಗೆ ರಕ್ಷಣಾತ್ಮಕ ದರ ನೀಡಲು 10 ಕೋಟಿ ರೂ. ಬಿಡುಗಡೆ: ಸಚಿವ ನಾರಾಯಣಗೌಡ

Update: 2020-07-11 12:32 GMT

ಬೆಂಗಳೂರು, ಜು. 11: ರೇಷ್ಮೆಗೂಡಿನ ದರ ಕುಸಿತದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಬೆಳೆಗಾರರಿಗೆ ನೆರವು ನೀಡಲು ಮುಂದಾಗಿರುವ ರೇಷ್ಮೆ ಸಚಿವ ನಾರಾಯಣಗೌಡ, ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರ ನೀಡಲು 10 ಕೋಟಿ ರೂ. ಮಂಜೂರು ಮಾಡಿದ್ದು, ಹಣ ಬಿಡುಗಡೆಯನ್ನೂ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಮಾಹಿತಿ ನೀಡಿರುವ ನಾರಾಯಣಗೌಡ, ರೇಷ್ಮೆ ಬೆಳೆಗಾರರ ಹಿತರಕ್ಷಣೆ ಮಾಡುವಲ್ಲಿ ಸರಕಾರ ಯಶಸ್ವಿಯಾಗಿದ್ದು, ರೇಷ್ಮೆ ರೀಲರ್ಸ್‍ಗಳಿಗೆ ಅಡಮಾನ ಸಾಲದ ಮಿತಿಯನ್ನು 2 ಲಕ್ಷ ರೂ.ಗೆ ಏರಿಸಿದ್ದಲ್ಲದೆ 20 ಕೋಟಿ. ರೂ. ಹಣವನ್ನೂ ನೀಡಲಾಗಿದೆ. ಇದೀಗ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾರಕ ಕೋವಿಡ್-19 ಹಿನ್ನೆಲೆಯಲ್ಲಿ ರೇಷ್ಮೆಗೂಡಿನ ದರ ಕುಸಿದಿತ್ತು. ಸಂಕಷ್ಟಕ್ಕೆ ಸಿಲುಕಿದ ರೇಷ್ಮೆ ಬೆಳೆಗಾರರು ರೇಷ್ಮೆಗೂಡಿಗೆ ರಕ್ಷಣಾತ್ಮಕ ಬೆಲೆ ನೀಡಲು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ತಕ್ಷಣವೇ ಅಧಿಕಾರಿಗಳ ಜೊತೆ ಸಭೆ ನಡೆಸಿ, ರೈತರಿಗೆ ರಕ್ಷಣಾತ್ಮಕ ದರ ನೀಡಲು ಸೂಚಿಸಲಾಗಿತ್ತು. ಈಗಾಗಲೆ 10 ಕೋಟಿ ರೂ. ಹಣವನ್ನೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ಗುಣಮಟ್ಟ ಆಧರಿಸಿ ದರ ನಿಗದಿ ಮಾಡಲಾಗುತ್ತದೆ. ಗುಣಮಟ್ಟಕ್ಕೆ ನಿಗದಿಪಡಿಸಿರುವ ದರ ಸಿಗದೆ ಇದ್ದಲ್ಲಿ, ಸರಕಾರ ರಕ್ಷಣಾತ್ಮಕ ದರ ನೀಡಲಿದೆ. ಪ್ರತಿ ಕೆ.ಜಿ.ರೇಷ್ಮೆಗೂಡಿಗೆ 50 ರೂ. ಮೀರದಂತೆ ರಕ್ಷಣಾತ್ಮಕ ದರ ನೀಡಲಾಗುವುದು. ಇದರಿಂದ ದರ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಆಸರೆ ಸಿಗಲಿದೆ. ಕೆಲ ತಿಂಗಳ ಹಿಂದಿನಿಂದಲೇ ದರ ಕುಸಿತವಾಗಿರುವ ಕಾರಣ ಹಿಂದೆ ಆಗಿರುವ ನಷ್ಟವನ್ನೂ ಭರಿಸಲು ತೀರ್ಮಾನಿಸಲಾಗಿದೆ.

ರಕ್ಷಣಾತ್ಮಕ ದರವನ್ನು ಎಪ್ರಿಲ್ 1ರಿಂದಲೇ ಅನ್ವಯವಾಗುವಂತೆ ನೀಡಲು ಸೂಚಿಸಲಾಗಿದೆ. ಇದಕ್ಕಾಗಿ 10 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಮುಂದೆಯೂ ರೇಷ್ಮೆ ಬೆಳೆಗಾರರಿಗೆ ಸಮಸ್ಯೆ ಎದುರಾದಲ್ಲಿ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಕ್ಷಣಾತ್ಮಕ ದರದ ಹಣವೂ ನೇರವಾಗಿ ರೈತರ ಖಾತೆಗೆ ಜಮಾ ಮಾಡಲು ಕ್ರಮ ವಹಿಸಲಾಗಿದೆ. ಇದರಿಂದ ಸರಕಾರದ ನೆರವು ಮಧ್ಯವರ್ತಿಗಳ ಪಾಲಾಗುವುದು ತಪ್ಪಿದೆ. ಜೊತೆಗೆ ರೇಷ್ಮೆಗೂಡಿನ ಧಾರಣೆ ಸುಧಾರಿಸುವವರೆಗೂ ರಕ್ಷಣಾತ್ಮಕ ದರ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News