ತೆಲಂಗಾಣ ಮಹಿಳಾ ಟೆಕ್ಕಿ ಬೆಂಗಳೂರಿನಲ್ಲಿ ನಿಗೂಢ ಸಾವು

Update: 2020-08-08 03:51 GMT

ಬೆಂಗಳೂರು, ಆ.8: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಸಾಫ್ಟ್‌ವೇರ್ ಎಂಜಿನಿಯರ್ ಶರಣ್ಯಾ(25) ಎಂಬವರು ಬೆಂಗಳೂರಿನ ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ.

ಘಟನೆ ತಿಳಿದು ಧಾವಿಸಿದ ಪೋಷಕರು, ಮಗಳ ಸಾವಿನ ಹಿಂದೆ ಪಿತೂರಿ ಅಡಗಿದೆ. ಮದ್ಯಪಾನ ಮಾಡಿ ಬಂದು ಗಂಡ ಪ್ರತಿದಿನ ಹೊಡೆಯುತ್ತಿದ್ದ ಎಂದು ಕೆಲ ದಿನಗಳ ಹಿಂದೆ ಮಗಳು ದೂರಿದ್ದಳು ಎಂದು ವಿವರಿಸಿದ್ದಾರೆ.

ತನ್ನ ಸಹಪಾಠಿ ರೋಹಿತ್ ಎಂಬಾತನನ್ನು ವಿವಾಹವಾಗಿದ್ದ ಶರಣ್ಯಾ, ಆತನೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ಮದುವೆ ಬಳಿಕ ಆತ ಪಾನಮತ್ತನಾಗಿ ಮನೆಗೆ ಬಂದು ಪದೇ ಪದೇ ಜಗಳ ತೆಗೆದು ಹೊಡೆಯುತ್ತಿದ್ದ ಎಂದು ಪೋಷಕರು ಆಪಾದಿಸಿದ್ದಾರೆ. ಕಿರುಕುಳ ತಾಳಲಾರದೇ ಶರಣ್ಯಾ ತವರುಮನೆಗೆ ಬಂದಿದ್ದರು ಎಂದು ದೂರಿದ್ದಾರೆ.

ಮೂರು ತಿಂಗಳ ಹಿಂದೆ ರೋಹಿತ್ ಯಾವುದೇ ಕಿರುಕುಳ ನೀಡುವುದಿಲ್ಲ ಎಂದು ಪೋಷಕರ ಮನವೊಲಿಸಿ ಮತ್ತೆ ಆಕೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ. ಇದೀಗ ರೋಹಿತ್ ಆಕೆಯನ್ನು ಹತ್ಯೆ ಮಾಡಿರಬೇಕು ಅಥವಾ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿರಬೇಕು ಎಂದು ಶರಣ್ಯಾ ಹೆತ್ತವರು ಶಂಕಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News