ನೆರೆ ಅಧ್ಯಯನಕ್ಕೆ ಕಾಂಗ್ರೆಸ್ ನಿಂದ ತಂಡಗಳ ನೇಮಕ: ಡಿ.ಕೆ.ಶಿವಕುಮಾರ್

Update: 2020-08-08 13:02 GMT

ಬೆಂಗಳೂರು, ಆ. 8: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಪರಿಣಾಮ ಪ್ರವಾಹ ಎದುರಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ. ಈ ಪರಿಸ್ಥಿತಿಯಲ್ಲಿ ನೆರೆ ಪ್ರದೇಶಗಳ ಅಧ್ಯಯನ ನಡೆಸಲು ಹಾಗೂ ಅಲ್ಲಿನ ಜನರಿಗೆ ಧೈರ್ಯ ತುಂಬಲು ಒಂದೆರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ 4-5 ತಂಡಗಳನ್ನು ರಚಿಸಿ ವಿವಿಧ ಭಾಗಗಳಿಗೆ ಕಳುಹಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತಿಯಾದ ಮಳೆಯಿಂದಾಗಿ, ಕಾವೇರಿ, ಕೃಷ್ಣ ಭಾಗದ ಜಿಲ್ಲೆಗಳು, ಕರಾವಳಿ, ಮಲೆನಾಡು ಜಿಲ್ಲೆಗಳು ಪ್ರವಾಹ ಎದುರಿಸುತ್ತಿದೆ. ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿಗಳು ಸಂಭವಿಸಿದೆ. ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಸಚಿವರುಗಳಿಗೆ ಭೇಟಿ ನೀಡಲು ಸೂಚನೆ ನೀಡಿದ್ದಾರೆ ಹಾಗೂ ಈ ಜಿಲ್ಲೆಗಳಿಗೆ 5 ಕೋಟಿ ರೂ.ಅನುದಾನ ನೀಡುವುದಾಗಿ ಹೇಳಿದ್ದಾರೆ.

ನೆರೆ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಮಾಡಿ, ವರದಿ ಸಿದ್ಧಪಡಿಸಲು ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು ಹಾಗೂ ಇತರೆ ಮುಖಂಡರುಗಳು ಒಳಗೊಂಡಂತೆ ತಂಡಗಳನ್ನು ರಚನೆ ಮಾಡಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗುವುದು. ಸರಕಾರ ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ದೂರಿದರು.

ಚಾಲಕರಿಗೆ ಪರಿಹಾರ ಸಿಕ್ಕಿಲ್ಲ: ಟ್ಯಾಕ್ಸಿ ಮತ್ತು ಆಟೋ ಚಾಲಕರ ಸಂಘಗಳ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಸರಕಾರ 7.5 ಲಕ್ಷ ಚಾಲಕರಿಗೆ ಹಣ ನೀಡುವುದಾಗಿ ಘೋಷಿಸಿತ್ತು. ಈವರೆಗೂ 1.20 ಲಕ್ಷ ಚಾಲಕರಿಗೆ ಮಾತ್ರ ದಾಖಲೆ ನೀಡಿ ಎಂದು ಹೇಳಿ ಮುಂದಕ್ಕೆ ಹಾಕುತ್ತಿದೆ. ಆಶಾ ಕಾರ್ಯಕರ್ತೆಯರು, ಸವಿತಾ ಸಮಾಜದವರು, ನೇಕಾರರು ಸೇರಿ ಯಾರೊಬ್ಬರಿಗೂ ಹಣ ತಲುಪಿಲ್ಲ. 11 ನೇಕಾರರು ಈವರೆಗೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ ಬರೀ 2 ಸಾವಿರ ರೂ. ಕೊಡುವುದಾಗಿ ಘೋಷಿಸಿದ ಸರಕಾರ ಅದನ್ನು ಕೊಟ್ಟಿಲ್ಲ. ಇಂತಹ ವಿಚಾರಗಳು ಬೇಕಾದಷ್ಟಿವೆ. ನಮಗೆ ಈ ಸಮಯದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ. ಆದರೆ ನಾವು ಸರಕಾರವನ್ನು ಪ್ರಶ್ನಿಸದೇ ಬೇರೆ ದಾರಿ ಇಲ್ಲ. ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದು, ಈ ಸಮಯದಲ್ಲಿ ನಾನು ಅವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಸರಕಾರದ ಬೇರೆ ಮಂತ್ರಿಗಳು ಈ ಜವಾಬ್ದಾರಿ ನಿರ್ವಹಿಸಬೇಕಿತ್ತು. ಆದರೆ ಅವರ ಸಂಭ್ರಮವೇ ಬೇರೆ ಇದೆ. ಸಮಾಜದಲ್ಲಿ ಅಸೂಯೆ, ದ್ವೇಷವನ್ನು ಬಿತ್ತುವ, ಸಮಾಜ ಒಡೆಯುವ ಹೇಳಿಕೆ ನೀಡುವುದರಲ್ಲಿ ಅವರು ತೊಡಗಿದ್ದಾರೆ ಎಂದು ದೂರಿದರು. 

ನ್ಯಾಯ ಸಿಗುವವರೆಗೂ ಬಿಡುವುದಿಲ್ಲ: ಸರಕಾರದ ಭ್ರಷ್ಟಾಚಾರದ ವಿರುದ್ಧದ ಉತ್ತರ ಕೊಡಿ, ಲೆಕ್ಕ ಕೊಡಿ ಆಂದೋಲನವನ್ನು ನಾವು ನಿಲ್ಲಿಸಿಲ್ಲ. ಜನರಿಗೆ ನ್ಯಾಯ ಸಿಗುವವರೆಗೂ ನಾವು ಇದನ್ನು ಮುಂದುವರಿಸುತ್ತೇವೆ. ಲೆಕ್ಕ ಕೊಡಿ ಎಂದು ಕೇಳಿದ್ದೇವೆ, ಉತ್ತರ ಕೊಡಿ ಎಂದು ಕೇಳಿದ್ದೇವೆ, ನ್ಯಾಯ ಕೊಡಿ ಎಂದು ಕೇಳುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಮಂತ್ರಿಗಳು ವಿಶ್ರಾಂತಿ ತೆಗೆದುಕೊಳ್ಳಲಿ: ಜಿಲ್ಲಾ ಉಸ್ತುವಾರಿ ಮಂತ್ರಿಗಳು ಪ್ರವಾಹದ ಸಮಯದಲ್ಲಿ ತಮ್ಮ ಜಿಲ್ಲೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಅವರಿಗೆ ತೊಂದರೆ ಕೊಡಬೇಡಿ. ಅವರು ಮಲಗಿಕೊಂಡಿರಲಿ, ವಿಶ್ರಾಂತಿ ಪಡೆದುಕೊಂಡು ಆರೋಗ್ಯ ನೋಡಿಕೊಳ್ಳಲಿ. ಪ್ರವಾಹ ವಿಚಾರವಾಗಿ ನಮ್ಮ ಪಕ್ಷದ ಯಾವುದೇ ನಾಯಕರು ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.

`ಕುಂಬಳಕಾಯಿ ಕಳ್ಳ ಅಂದರೆ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನಾನೇನಾದರೂ ಹೇಳಿಕೆ ನೀಡಿದ್ದೀನಾ? ಸಿದ್ದರಾಮಯ್ಯನವರು ಆಸ್ಪತ್ರೆಯಿಂದ ಹೇಳಿಕೆ ನೀಡಿದ್ದಾರಾ? ನಾನು ಕಾಂಗ್ರೆಸ್ ಪಕ್ಷದ ಧ್ವನಿ, ಸಿದ್ದರಾಮಯ್ಯನವರು ವಿರೋಧ ಪಕ್ಷದ ಧ್ವನಿ. ನಾವ್ಯಾರು ಮಾತನಾಡಿಲ್ಲ ಎಂದ ಮೇಲೆ ಅವರಿಗೇಕೆ ನೋವಾಗುತ್ತಿದೆ. ಅವರ ಪಕ್ಷದವರೇ ಸಿಎಂಗೆ ಅಗೌರವ ತೋರುತ್ತಿದ್ದಾರೆ. ಯಾವುದೇ ನಾಯಕರು ಎಲ್ಲಿ ಮಾತನಾಡಿದರು ನನಗೆ ಮಾಹಿತಿ ಬರುತ್ತದೆ. ಅವರಿಗೆ ಆರೋಗ್ಯ ಸರಿ ಇಲ್ಲ ಎನಿಸುತ್ತದೆ, ಆಸ್ಪತ್ರೆಗೆ ತೋರಿಸುವುದು ಒಳ್ಳೆಯದು'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News