ಚಿನ್ನಾಭರಣ ಮಳಿಗೆಯಲ್ಲಿ ಕಳವು: ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ
Update: 2020-08-08 13:26 GMT
ಬೆಂಗಳೂರು, ಆ.8: ಚಿನ್ನಾಭರಣ ಮಳಿಗೆಯ ಬಾಗಿಲು ಮುರಿದು ಆಭರಣ ಕಳವು ಮಾಡಿರುವ ಘಟನೆ ಇಲ್ಲಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಇಮ್ಮಡಿಹಳ್ಳಿಯ ಮಾತಾಜಿ ಚಿನ್ನಾಭರಣ ಮಳಿಗೆಯಲ್ಲಿ ಕಳವು ಮಾಡಲಾಗಿದ್ದು, ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆ.5ರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಮೊದಲಿಗೆ ಚಿನ್ನಾಭರಣ ಮಳಿಗೆ ಪಕ್ಕದ ಗ್ರಂಧಿಗೆ ಅಂಗಡಿಯ ಕಿಟಕಿ ಸರಳು ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು, ಚಿನ್ನವಿದ್ದ ಲಾಕರ್ ಒಡೆಯಲು ಮುಂದಾಗಿದ್ದಾರೆ. ಲಾಕರ್ ತೆರೆಯದ ಕಾರಣ ಅಲ್ಲೇ ಇದ್ದ 35 ಲಕ್ಷ ಮೌಲ್ಯದ 50 ಕೆಜಿ ಬೆಳ್ಳಿ ವಸ್ತು ಹಾಗೂ 10 ಸಾವಿರ ನಗದು ದೋಚಿದ್ದಾರೆ ಎನ್ನಲಾಗಿದೆ.
ದುಷ್ಕರ್ಮಿಗಳ ಚಲನವಲನ, ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಳಿಗೆ ಮಾಲಕ ಧರ್ಮರಾಮ್ ಎಂಬುವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ವೈಟ್ಫೀಲ್ಡ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.