ಬೃಹತ್ ರಾಷ್ಟ್ರಧ್ವಜ ನಿರ್ಮಿಸಿ ಕಾರ್ಗಿಲ್‍ನಲ್ಲಿ ಪ್ರದರ್ಶನಕ್ಕೆ ಮುಂದಾದ ವಸ್ತ್ರಭಾರತ ಚಾರಿಟಬಲ್ ಟ್ರಸ್ಟ್

Update: 2020-08-10 18:49 GMT

ಬೆಂಗಳೂರು, ಆ.10: ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬೃಹತ್ ರಾಷ್ಟ್ರಧ್ವಜ ರೂಪಿಸಿ, ಕಾರ್ಗಿಲ್‍ನಲ್ಲಿ ಪ್ರದರ್ಶಿಸಲು ವಸ್ತ್ರಭಾರತ ಚಾರಿಟಬಲ್ ಟ್ರಸ್ಟ್ ಮುಂದಾಗಿದೆ. ಈ ಸದುದ್ದೇಶಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.

ದೇಶಕ್ಕೆ–ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬೃಹತ್ ಧ್ವಜ ಸಿದ್ಧ ಮಾಡಲು ಉದ್ದೇಶಿಸಿದ್ದೇವೆ. 60x90 ಅಡಿಯ (5,400 ಚದರ ಅಡಿ) ಧ್ವಜ ನಿರ್ಮಿಸಲಾಗುವುದು ಎಂದು ಟ್ರಸ್ಟ್‍ನ ಸ್ಥಾಪಕ ಟ್ರಸ್ಟಿ ಜೆ. ವಿನೋದ್‍ಕುಮಾರ್ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ಸಹಕಾರವಿಲ್ಲದೆ ಇಂತಹ ಬೃಹತ್ ಧ್ವಜ ಸಿದ್ಧಪಡಿಸುವುದು ಅಸಾಧ್ಯ. ಆದರೆ, ಕೊರೋನ ಪರಿಸ್ಥಿತಿ ಇರುವುದರಿಂದ ಹೆಚ್ಚು ಜನರನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ನಾವೇ ಒಂದೊಂದು ದಿನ ಒಂದೊಂದು ಊರಿಗೆ ಹೋಗಿ, ನಿರ್ದಿಷ್ಟ ಸ್ಥಳದಲ್ಲಿ ಉಳಿದುಕೊಂಡು, ಧ್ವಜ ಹೊಲಿಯುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ಆಸಕ್ತರು ಬಂದು ಧ್ವಜ ಹೊಲಿಯಬಹುದು ಎಂದರು.

ಆ.14ರ ರಾತ್ರಿಯೊಳಗೆ ಧ್ವಜ ಸಿದ್ಧಪಡಿಸುವ ಗುರಿ ಇದೆ. ಮುಖ್ಯಮಂತ್ರಿಯವರಿಂದ ಅಂದು ಧ್ವಜಕ್ಕೆ ಪುಷ್ಪನಮನ ಸಲ್ಲಿಸಬೇಕು ಎಂದು ಕೋರಲಾಗುವುದು. ಅದಾದ ನಂತರ, ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಡಚಿದ ಧ್ವಜವನ್ನು ಪ್ರದರ್ಶಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಪ್ರದರ್ಶಿಸಿದ ನಂತರ, ಧ್ವಜವನ್ನು ಕಾರ್ಗಿಲ್‍ಗೆ ಒಯ್ಯಲಾಗುತ್ತದೆ. ಮುಂದಿನ ದೀಪಾವಳಿಯಂದು ಸುಮಾರು 600 ಯೋಧರು ಧ್ವಜವನ್ನು ಹಿಡಿದು ಪ್ರದರ್ಶಿಸಬೇಕು ಎಂದು ಕೋರಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸಲಾಗುವುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News