ಟಿಡಿಆರ್ ಅವ್ಯವಹಾರ ಪ್ರಕರಣ: ಇಂಜಿನಿಯರ್ ಸೇರಿ ನಾಲ್ವರ ನಿವಾಸದ ಮೇಲೆ ಎಸಿಬಿ ದಾಳಿ

Update: 2020-08-25 14:11 GMT

ಬೆಂಗಳೂರು, ಆ.25: ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್) ಕೋಟ್ಯಂತರ ರೂ. ಅವ್ಯವಹಾರ ಪ್ರಕರಣದ ಸಂಬಂಧ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಅಧಿಕಾರಿಗಳು, ಇಂಜಿನಿಯರ್ ಸೇರಿ ನಾಲ್ವರ ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ನಗರದ ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಬಿಬಿಎಂಪಿ ಸಹಾಯಕ ಅಭಿಯಂತರ ಎಂ.ಎನ್.ದೇವರಾಜು ಅವರ ಮನೆ, ಮಧ್ಯವರ್ತಿಗಳಾದ ಬಿ.ನಾಗರಾಜುಗೆ ಸೇರಿದ ದೊಡ್ಡಗುಬ್ಬಿಯ ಯರಪ್ಪನಹಳ್ಳಿಯಲ್ಲಿರುವ ನಿವಾಸ, ಕೆ.ಪಿ.ನಾಗೇಶ್ ಅವರ ಬಿದರಹಳ್ಳಿ ಕಣ್ಣೂರಿನಲ್ಲಿರುವ ಮನೆ, ಟಿಡಿಆರ್ ಅರ್ಜಿದಾರ ಸುಬ್ಬರಾವ್ ಬಿದರಹಳ್ಳಿಯ ರಾಂಪುರದಲ್ಲಿ ಹೊಂದಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ತಿಳಿಸಿದೆ.

ರಸ್ತೆ ಅಗಲಿಕರಣವೇ ನಡೆದಿಲ್ಲ: ಸರಕಾರ ಹೊರಡಿಸಿರುವ ಅಧಿಸೂಚನೆ, ಸುತ್ತೋಲೆ ಮತ್ತು ಕಚೇರಿ ಆದೇಶಗಳಲ್ಲಿ ಸೂಚಿಸಿರುವಂತೆ ರಸ್ತೆ ಅಗಲೀಕರಣದ ಸಲುವಾಗಿ ಹಕ್ಕು ಬಿಡುಗಡೆ ಪತ್ರವನ್ನು ಬಿಬಿಎಂಪಿ ಹೆಸರಿಗೆ ಪಡೆದ ನಂತರ ರಸ್ತೆ ಅಗಲೀಕರಣಕ್ಕೆ ಒಳಪಡುವ ಜಾಗದಲ್ಲಿರುವ ಕಟ್ಟಡಗಳನ್ನು ಡೆಮಾಲಿಷನ್ ಮಾಡಿ ಜಾಗದ ಭೌತಿಕ ಸ್ವಾಧೀನ ಪಡೆದಿಲ್ಲ. ಸ್ವತ್ತಿನ ಖಾತಾವನ್ನು ಬಿಬಿಎಂಪಿ ಹೆಸರಿಗೆ ವರ್ಗಾಯಿಸದೇ, ಈ ವಿವರಗಳನ್ನು ಬಿಬಿಎಂಪಿಯ ರಸ್ತೆ ರಿಜಿಸ್ಟರ್ ನಲ್ಲಿ ನಮೂದಿಸದೇ, ಅಕ್ರಮವಾಗಿ ಡಿಆರ್‍ಸಿ ಸಂ.002639 ನ್ನು 2013 ಆ.29ರಂದು ವಿತರಣೆ ಮಾಡಲಾಗಿದೆ. ಡಿಆರ್‍ಸಿ ಸಂ.002639ನ್ನು ಟಿಡಿಆರ್ ಅರ್ಜಿದಾರರ ಪರವಾಗಿ ಪಡೆದ ಟಿಡಿಆರ್ ಬ್ರೋಕರ್ ಗಳು ಕೋಟ್ಯಂತರ ರೂ.ಗಳಿಗೆ ಮಾರಾಟ ಮಾಡಿ ಅಕ್ರಮ ಲಾಭ ಮಾಡಿಕೊಂಡಿದ್ದಾರೆ. ಆದರೆ, ಡಿಆರ್‍ಸಿ ನೀಡಿ 6 ವರ್ಷಗಳೇ ಕಳೆದರೂ ಟಿಡಿಆರ್ ನೀಡಿರುವ ಕಟ್ಟಡಗಳನ್ನು ಡೆಮಾಲಿಷನ್ ಮಾಡಿ ಜಾಗದ ಭೌತಿಕ ಸ್ವಾಧೀನವನ್ನು ಪಡೆದು ರಸ್ತೆ ಅಗಲೀಕರಣವೇ ಮಾಡಲಿಲ್ಲ ಎಂದು ಹೇಳಲಾಗುತ್ತಿದೆ.

ಅಕ್ರಮ: ಬಿದರಹಳ್ಳಿಯ ರಾಂಪುರದಲ್ಲಿರುವ ಸರ್ವೆ ನಂ.149 ಹಾಗೂ ಈ ಜಾಗದಲ್ಲಿ ಕೊತ್ತನೂರು-ಆವಲಹಳ್ಳಿ ಮುಖ್ಯರಸ್ತೆಯ ಅಗಲೀರಣಕ್ಕೆ ಸಂಬಂಧಿಸಿದಂತೆ ಟಿಡಿಆರ್ ಅರ್ಜಿಯನ್ನು ಪ್ರಸ್ತುತ ಸ್ವಾಧೀನಾನುಭವದಲ್ಲಿರುವ ಕಟ್ಟಡಗಳ ಮಾಲಕರಿಂದ ಪಡೆಯದೇ, ಆರ್‍ಟಿಸಿಯಲ್ಲಿ ಹೆಸರಿರುವ ಹಿಂದಿನ ಜಮೀನಿನ ಮಾಲಕರಿಂದ ಪಡೆಯಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅಳತೆಗಳನ್ನು ಪಡೆದು ರೆವೆನ್ಯೂ ನಕ್ಷೆಯನ್ನು ತಯಾರಿಸಿದ್ದರು. ಈ ನಕ್ಷೆಯಲ್ಲಿ ರಾಂಪುರ ಗ್ರಾಮದ ಸರ್ವೆ ನಂ.149 ರಲ್ಲಿ ಒಟ್ಟು 6 ಕಟ್ಟಡಗಳು ರಸ್ತೆ ಅಗಲೀಕರಣಕ್ಕೆ ಒಳಪಡುವುದಾಗಿ ಹಾಗೂ ಈ ಕಟ್ಟಡಗಳ ಮಾಲಕರು ಆರ್‍ಟಿಸಿಯಲ್ಲಿ ಹೆಸರಿಸುವ ಈ ಹಿಂದಿನ ಭೂಮಾಲಕ ಆರ್.ಕೆ.ಸುಬ್ಬರಾವ್ ಎಂದು ನಮೂದಿಸಲಾಗಿದೆ. ಆದರೆ, ಕಳೆದ 25 ವರ್ಷಗಳಿಂದ ಇಲ್ಲಿ ಬೇರೆ-ಬೇರೆ ಮಾಲಕರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಗ್ರಾಮ ಪಂಚಾಯತಿಯಲ್ಲಿ ಖಾತಾವನ್ನು ಪಡೆದು, ಪ್ರತ್ಯೇಕ ವಿದ್ಯುತ್ ಸಂಪರ್ಕ ಹೊಂದಿದ್ದರು.

ರೆವೆನ್ಯೂ ನಕ್ಷೆಯಲ್ಲಿ ನಮೂದಿಸಿದ 6 ಕಟ್ಟಡಗಳ ಮೌಲ್ಯಮಾಪನವನ್ನು ತಯಾರಿಸಿ ಈ ಮೌಲ್ಯವನ್ನು ಡಿಆರ್‍ಸಿ ವಿಸ್ತೀರ್ಣಕ್ಕೆ ಪರಿವರ್ತಿಸುವಾಗ ಗ್ರಾಮ ಪಂಚಾಯತಿ ಖಾತಾ ಹೊಂದಿರುವ ಕಟ್ಟಡಗಳನ್ನು ಕೃಷಿ ಭೂಮಿಯಲ್ಲಿರುವುದಾಗಿ ಉಲ್ಲೇಖಿಸಲಾಗಿತ್ತು. ಕೃಷಿ ಭೂಮಿಯ ಮಾರ್ಗಸೂಚಿ ದರಗಳನ್ನು ಕಾನೂನು ಬಾಹಿರವಾಗಿ ಅಳವಡಿಸಿಕೊಂಡು ವಾಸ್ತವವಾಗಿ ನೀಡಬೇಕಾಗಿದ್ದ 6,314.44 ಚ.ಮೀಗಳಿಗೆ ಬದಲಾಗಿ ಅಕ್ರಮವಾಗಿ ಬಿಬಿಎಂಪಿ ಅಧಿಕಾರಿಗಳು 1,6151.19 ಚ.ಮೀ.ಗಳ ಡಿಆರ್‍ಸಿಯನ್ನು ವಿತರಣೆ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಕಟ್ಟಡ ಮೌಲ್ಯಮಾಪನ ಮಾಡುವ ವೇಳೆ 15 ರಿಂದ 20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಹಳೆಯ ಕಟ್ಟಡಗಳನ್ನು 6 ವರ್ಷಗಳ ಕಟ್ಟಡಗಳೆಂದು ನಮೂದಿಸಿ ಕಟ್ಟಡಗಳಿಗೆ ಹೆಚ್ಚು ಮೌಲ್ಯವನ್ನು ಅಕ್ರಮವಾಗಿ ನಿಗದಿಪಡಿಸಿದ್ದರು ಎನ್ನುವ ಮಾಹಿತಿ ದಾಳಿಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನೆಲೆ: ಕೆಲ ಸರಕಾರಿ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಬೇಕಾದ ಸೈಟುಗಳು ಮತ್ತು ಬಿಲ್ಡಿಂಗ್‍ಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಬೆಲೆ ನಿಗದೀಕರಣ ಮಾಡಿಸಿ ಗ್ರಾಮ ಪಂಚಾಯತಿಯಲ್ಲಿ ಖಾತಾ ಹೊಂದಿರುವುದನ್ನು ಮರೆಮಾಚಿದ್ದರು. ಕೃಷಿ ಭೂಮಿಯ ದರಗಳನ್ನು ಕಟ್ಟಡಗಳ ಮೌಲ್ಯ ಮಾಪನಗಳನ್ನು ನಿಗದಿಪಡಿಸುವಾಗ ಟಿಡಿಆರ್ ವಿಸ್ತೀರ್ಣವನ್ನು ಕಾನೂನು ಬಾಹಿರವಾಗಿ ಹೆಚ್ಚಾಗಿ ವಿತರಣೆ ಮಾಡಿದ್ದರು. ಆ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಲಾಭ ಮಾಡಿ ಕೊಟ್ಟು ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಿದ್ದರು. 

ಈ ಜಾಗದಲ್ಲಿ ಸ್ವಾಧೀನಾನುಭವದಲ್ಲಿರುವ ಸೈಟ್ ಮಾಲಕರಿಗೆ ಸರಕಾರದಿಂದ ಯಾವುದೇ ಪರಿಹಾರ ಸಿಗದಂತೆ ನೋಡಿಕೊಂಡಿದ್ದರು. ಬಿಬಿಎಂಪಿ ವತಿಯಿಂದ ಹೊರಡಿಸಲಾದ ಸುತ್ತೋಲೆಯಂತೆ ಹಕ್ಕು ಬಿಡುಗಡೆ ಪತ್ರ ಪಡೆದ ಕಟ್ಟಡಗಳ, ಜಾಗದ ಭೌತಿಕ ಸ್ವಾಧೀನ ಪಡೆಯದೆಯೇ ಖಾತಾವನ್ನು ಬಿಬಿಎಂಪಿ ಹೆಸರಿಗೆ ವರ್ಗಾಯಿಸದೆ, ಅಕ್ರಮವಾಗಿ ಖೊಟ್ಟಿ ಭೂಮಾಲಕರಿಗೆ ಡಿಆರ್‍ಸಿ ವಿತರಣೆ ಮಾಡಿರುವುದು ಎಸಿಬಿ ತನಿಖೆಯಲ್ಲಿ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News