ಪ್ರವಾಸೋದ್ಯಮದಲ್ಲಿ ರಾಜ್ಯವನ್ನು ದೇಶದಲ್ಲೇ ಮುಂಚೂಣಿಗೆ ಕೊಂಡೊಯ್ಯುವ ಗುರಿ: ಸಚಿವ ಸಿ.ಟಿ.ರವಿ

Update: 2020-08-27 13:07 GMT

ಬೆಂಗಳೂರು, ಆ. 27: ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ರಾಜ್ಯದ ಪ್ರವಾಸಿತಾಣಗಳಿಗೆ ದೇಶ-ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ, ಮುಂದಿನ ಮೂರು ವರ್ಷದೊಳಗೆ ದೇಶದಲ್ಲೆ ಕರ್ನಾಟಕ ಪ್ರವಾಸೋದ್ಯಮವನ್ನು ಮೊದಲ ಮೂರು ಸ್ಥಾನದೊಳಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಪ್ರವಾಸೋದ್ಯಮ, ಹಾಗೂ ಯುವ ಸಬಲೀಕರಣ ಸಚಿವ ಸಿ.ಟಿ.ರವಿ ಪ್ರಕಟಿಸಿದ್ದಾರೆ.

ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಸೋದ್ಯಮ ಇಲಾಖೆ ಸಾಧನೆ ಬಗ್ಗೆ ಕಿರು ಹೊತ್ತಿಗೆ ಬಿಡುಗಡೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `2020-25ರ ಪ್ರವಾಸೋದ್ಯಮ ನೀತಿ'ಯೂ ಮುಂದಿನ ತಿಂಗಳು ಜಾರಿಗೆ ಬರಲಿದ್ದು, ಸ್ಥಳೀಯರಿಗೆ ಉದ್ಯೋಗ, ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ದಿ, ಮೂಲಸೌಕರ್ಯಗಳಿಗೆ ಒತ್ತು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ನಾನು ಅಧಿಕಾರ ಸ್ವೀಕರಿಸಿದ 83 ದಿನಗಳಲ್ಲಿಯೇ ರಾಜ್ಯದ ಎಲ್ಲ 30 ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಇಲಾಖೆಯ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಸೂಚಿಸಿದ ಪರಿಣಾಮ ಇಂದು ನಮ್ಮ ಸಾಧನೆಗಳ ಪ್ರತಿಫಲನ ಗೋಚರವಾಗುತ್ತಿವೆ. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳನ್ನು ಗುರುತಿಸಿ, ಅವುಗಳನ್ನು ಸರ್ವರೀತಿಯಿಂದಲೂ ವಿಶ್ವ ಪ್ರವಾಸೋದ್ಯಮ ಗುಣಮಟ್ಟಕ್ಕೆ ಏರಿಸಲಾಗುವುದು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಬಹುದು. ಇದಕ್ಕೆ ಪೂರಕವಾಗಿ ಸ್ಥಳೀಯ ಮಟ್ಟದಲ್ಲಿ ಕೌಶಲ ಅಭಿವೃದ್ಧಿ, ಸ್ಥಳೀಯ ಆಹಾರ ಪದ್ಧತಿಯನ್ನು ಹೊರ ಜಗತ್ತಿಗೆ ಪರಿಚಯಿಸಲಾಗುವುದು. ಪ್ರಾದೇಶಿಕ ಮಟ್ಟದಲ್ಲಿ ಆಹಾರ ಮೇಳಗಳನ್ನು ನಡೆಸಿ, ಆಹಾರ ಪ್ರಿಯರನ್ನೂ ಸೆಳೆಯುವ ಮೂಲಕ ಖಾದ್ಯಗಳ ಪ್ರವಾಸೋದ್ಯಮ ಬೆಳೆಸಲು ಅವಕಾಶವಿದೆ. ಹೀಗೆ ಹಲವು ಬಗೆಯ ಪ್ರವಾಸೋದ್ಯಮ  ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ ಹೊಸ ಪ್ರವಾಸೋದ್ಯಮ ನೀತಿ ಮುಂದಿನ ತಿಂಗಳು ಜಾರಿಗೆ ಬರಲಿದೆ ಎಂದರು.

ಈ ಬಾರಿ ಕೋವಿಡ್‍ನಿಂದ  ಪ್ರವಾಸೋದ್ಯಮ ಕ್ಷೇತ್ರಕ್ಕೆ ಆರ್ಥಿಕ ಹಿನ್ನಡೆ ಉಂಟಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. 2006ರಲ್ಲಿ ಕರ್ನಾಟಕಕ್ಕೆ 36.7ರಷ್ಟು ಮಿಲಿಯನ್ ದೇಶಿ ಪ್ರವಾಸಿಗರು ಆಗಮಿಸಿದ್ದರೆ, 2018ರಲ್ಲಿ 215.03 ಮಿಲಿಯನ್ನಷ್ಟು ಏರಿಕೆಯಾಗಿದೆ. ಪ್ರವಾಸಿ ತಾಣಗಳಲ್ಲಿರುವ ಆಹ್ಲಾದಕರ ಹವಾಮಾನ, ಕಾಸ್ಮೋಪಾಲಿಟಿನ್ ಸಂಸ್ಕೃತಿ, ಅತ್ಯುನ್ನತ್ತ ಆಡಳಿತ ಪ್ರಕ್ರಿಯೆ, ಹೂಡಿಕೆಗಿರುವ ವಿಫುಲ ಅವಕಾಶ, ಉದ್ಯೋಗ ಸೃಷ್ಟಿ ಸೇರಿ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ಹಾಗೂ ಸ್ಥಳೀಯ ಪ್ರವಾಸಿ ತಾಣಗಳನ್ನು ದೇಸಿ ಪ್ರವಾಸಿಗರಿಗೆ ಪರಿಚಯಿಸುವ ಲವ್ ಯುವರ್ ಲೋಕಲ್ ಪರಿಕಲ್ಪನೆ ಜಾರಿಗೆ ತರಲಾಗುತ್ತಿದೆ. ಜೊತೆಗೆ ಕೋವಿಡ್-19 ಸಮಯದಲ್ಲಿ ದೇಶವ್ಯಾಪ್ತಿ ಸಂಪೂರ್ಣ ನಿರ್ಬಂಧ ಹೇರಿದ್ದರಿಂದ ರಾಜ್ಯಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರಿಗೆ ಸಹಾಯ ಹಾಗೂ ಸಹಕಾರ ನೀಡಲು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್-19 ಸಹಾಯ ಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಧನಸಹಾಯದಲ್ಲಿ ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ಪ್ರಮುಖ ಪಾರಂಪರಿಕ ಪ್ರವಾಸಿ ತಾಣಗಳನ್ನು ಗುರುತಿಸಿ ಪ್ರವಾಸಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲು ಪ್ರಸ್ತಾವನೆಯನ್ನು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ. ರಾಜ್ಯವನ್ನು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಆಗಿ ಪ್ರಸ್ತುತಪಡಿಸುವ ಸಲುವಾಗಿ 25 ದೇಶ ಹಾಗೂ ರಾಷ್ಟ್ರದ ವಿವಿಧ ರಾಜ್ಯಗಳಿಂದ ಆಗಮಿಸಿದ 400 ಪ್ರತಿನಿಗಳನ್ನೊಳಗೊಂಡ (ಕೈಟ್) ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಅಯೋಜಿಸಲಾಗಿದೆ ಎಂದು ಹೇಳಿದರು.

ಕರ್ನಾಟಕದ ಬಹುಸಂಸ್ಕೃತಿಯನ್ನು ಉಳಿಸುವ ಹಾಗೂ ಅದನ್ನು ವಿವಿಧ ಆಯಾಮಗಳಲ್ಲಿ ದೇಶಿ-ವಿದೇಶಿ ಪ್ರವಾಸಿಗರಿಗೆ ಪರಿಚಯಿಸುವ ಹಾಗೂ ಅನುಭವವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಆದಿವಾಸಿ ಮತ್ತು ಬಂಜಾರ ಕಲ್ಚರಲ್ ಹೆರಿಟೇಜ್ ನಿರ್ಮಾಣದ ಕಲ್ಪನೆಗೆ ಚಾಲನೆ ನೀಡಲಾಗಿದೆ. ಇದನ್ನು ಕಾರ್ಯರೂಪಕ್ಕೆ ತರಲು ಪ್ರಸಕ್ತ ಸಾಲಿನಲ್ಲಿ 15ಕೋಟಿ ರೂ.ಅನುದಾನವನ್ನು ಮೀಸಲಿರಿಸಲಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ಸಹಯೋಗದಲ್ಲಿ ಕೃಷಿ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಕಟ್ಟಿಕೊಡಲು ಅಗ್ರಿ ಟೂರಿಸಂ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.

ಕರ್ನಾಟಕ ದರ್ಶನ: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಜೊತೆಗೆ ಇದೇ ಮೊದಲ ಬಾರಿ ಹಿಂದುಳಿದ ವರ್ಗಗಳ ಹಾಗೂ ಇತರೆ ವರ್ಗಗಳ ವಿದ್ಯಾರ್ಥಿಗಳು ಸೇರಿ ಒಟ್ಟು 25,493 ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು 8.92 ಕೋಟಿ ರೂ.ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆಎಸ್‍ಟಿಡಿಸಿಯೂ ಪ್ರಾರಂಭವಾದ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 2019-20ನೆ ಸಾಲಿನಲ್ಲಿ ಅತ್ಯಧಿಕ ಶೇ.37ರಷ್ಟು ಆದಾಯವನ್ನು ಗಳಿಸಿದ್ದು ಹಲವು ದಿನಗಳಿಂದ ನನೆಗುಂದಿಗೆ ಬಿದ್ದಿದ ಹಾಗೂ ಬಹುಜನರ ಬೇಡಿಕೆಯಾದ ಲೇಸರ್ ಲೈಟ್ ಶೋ ಪ್ರದರ್ಶನವನ್ನು ಹಂಪಿ ಹಾಗೂ ಶ್ರೀರಂಗಪಟ್ಟಣ ಕೋಟೆಗೆ ಅಳವಡಿಸಿದ್ದು, ಇದರಿಂದ ಕರ್ನಾಟಕ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ದೊರಕಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News