ಶಿಕ್ಷಣ ನೀತಿ ಜಾರಿಗೆ ಕಾನೂನು, ಆಡಳಿತಾತ್ಮಕ ಸಿದ್ಧತೆ: ಡಿಸಿಎಂ ಡಾ.ಅಶ್ವತ್ಥನಾರಾಯಣ

Update: 2020-08-29 09:38 GMT

ಬೆಂಗಳೂರು, ಆ.29: ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ನೀತಿಯ ಜಾರಿ ಪ್ರಕ್ರಿಯೆ ಆರಂಭ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಅಸೋಚಂ ಏರ್ಪಡಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಉನ್ನತ ಶಿಕ್ಷಣದಲ್ಲಿ ಆಗುವ ಬದಲಾವಣೆ ಮತ್ತು ಬೀರುವ ಪ್ರಭಾವ’ದ ಕುರಿತ ಸಂವಾದದಲ್ಲಿ ವರ್ಚುವಲ್ ವೇದಿಕೆ ಮೂಲಕ ಮಾತನಾಡಿದ ಅವರು, ಒಮ್ಮೆ ಶಿಕ್ಷಣ ನೀತಿಯನ್ನು ಜಾರಿ ಮಾಡಿದರೆ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಗುರುತರ ಬದಲಾವಣೆಗಳು ಗೋಚರವಾಗುತ್ತವೆ. ರಾಜ್ಯದ ಉನ್ನತ ಶಿಕ್ಷಣದ ದಿಕ್ಕನ್ನೇ ಬದಲಿಸುವಂಥ ಅಂಶಗಳು ಈ ನೀತಿಯಲ್ಲಿವೆ ಎಂದು ಅಭಿಪ್ರಾಯಿಸಿದರು.

ಈಗಾಗಲೇ ನೀತಿಯಲ್ಲಿರುವ ಅಂಶಗಳನ್ನು ಕೂಲಂಕಷವಾಗಿ ವಿಶ್ಲೇಷಣೆ ಮಾಡಲಾಗಿದೆ. ಅದಕ್ಕಾಗಿ ಉನ್ನತಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಈಗಾಗಲೇ ಕಾರ್ಯಪಡೆಯ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಈ ಕಾರ್ಯಪಡೆಯ ಉಪ ಸಮಿತಿಗಳು ನೀಡಿರುವ ವರದಿಗಳನ್ನು ಅಧ್ಯಯನ ಮಾಡಲಾಗಿದೆ. ಇನ್ನು ನೀತಿಯ ಜಾರಿಗೆ ಕಾರ್ಯಪಡೆಯೂ ಅಂತಿಮ ವರದಿ ನೀಡಲಿದ್ದು, ಅದು ಕೈ ಸೇರಿದ ಕೂಡಲೇ ಸರಕಾರವು ಶಿಕ್ಷಣ ನೀತಿಯ ಜಾರಿ ನಿಟ್ಟಿನಲ್ಲಿ ಹೆಜ್ಜೆ ಇಡಲಿದೆ. ಇನ್ನು, ನಮ್ಮ ರಾಜ್ಯಕ್ಕೆ ಸೇರಿದ ತಜ್ಞರೇ ಇದ್ದ ಸಮಿತಿಯು ಅನೇಕ ಕ್ರಾಂತಿಕಾರಕ ಅಂಶಗಳನ್ನು ನೀತಿಯಲ್ಲಿ ಸೇರಿಸಿದೆ. ಎಲ್ಲ ಹಂತಗಳ ಶಿಕ್ಷಣದಲ್ಲೂ ಉತ್ತಮ ಸ್ಥಿತಿಯಲ್ಲಿರುವ ರಾಜ್ಯದಲ್ಲಿ ಮುಂದೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ಹಂತದವರೆಗೂ ಅಪಾರ ಬದಲಾವಣೆಗಳನ್ನು ಕಾಣಬಹುದು. ಈ ಮೂಲಕ ಭಾರತವು ಜಗತ್ತಿನ ಜ್ಞಾನ ಕಣಜವಾಗಿ ಹೊರಹೊಮ್ಮಲಿದೆ. ಕರ್ನಾಟಕವೂ ಶಿಕ್ಷಣ ನೆಲೆಯಾಗಲಿದೆ ಎಂಬ ವಿಶ್ವಾಸ ನನಗೆ ಸಂಪೂರ್ಣವಾಗಿ ಇದೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಅಕಾಡಮಿ:

ಇಡೀ ದೇಶದಲ್ಲೇ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯವಾಗಿ ಕರ್ನಾಟಕವು ಮುನ್ನಡೆಯಲ್ಲಿ ನಿಲ್ಲಲಿದೆ. ಈಗಾಗಲೇ ಸರಕಾರ ಹಾಕಿಕೊಂಡಿರುವ ಯೋಜನೆಯಂತೆ, ತಜ್ಞರು ಕೊಟ್ಟಿರುವ ಸಲಹೆಯಂತೆ ಹಂತಹಂತವಾಗಿ ಅನುಷ್ಠಾನ ಮಾಡಲಾಗುವುದು. ಧಾರವಾಡದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಉನ್ನತ ಶಿಕ್ಷಣ ಅಕಾಡಮಿ ಕೂಡ ಅನುಕೂಲವಾಗಲಿದೆ. ಇದರ ಜತೆಜತೆಯಲ್ಲೇ ಬಹು ಉದ್ದೇಶಿತ ಹಾಗೂ ಬಹುವಿಷಯಗಳನ್ನು ಬೋಧನೆ ಮಾಡುವ ವಿವಿಗಳನ್ನು ಕೂಡ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

ಸಂವಾದದಲ್ಲಿ ಅಸೋಚಂ ರಾಜ್ಯ ಘಟಕದ ಅಧ್ಯಕ್ಷ ಬಿ.ವಿ. ನಾಯ್ಡು, ಪ್ರಾದೇಶಿಕ ನಿರ್ದೇಶಕಿ ಉಮಾ ನಾಯರ್, ಎಐಸಿಟಿಇ ಅಧ್ಯಕ್ಷ ಪ್ರೊ.ಅನಿಲ್ ಸಹಸ್ರಬುದ್ಧೆ, ಬೆಂಗಳೂರಿನ ಐಐಐಟಿ-ಬಿ ನಿರ್ದೇಶಕ ಪ್ರೊ.ಎಸ್.ಸಡಗೋಪನ್ ಮುಂತಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News