ಕಲಾವಿದರ ಮಾಸಾಶನ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಸಚಿವ ಸಿ.ಟಿ.ರವಿ ಸೂಚನೆ

Update: 2020-09-09 10:46 GMT

ಬೆಂಗಳೂರು, ಸೆ. 9: ಕೆಲ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಕಲಾವಿದರ ಮಾಸಾಶನವನ್ನು ಇನ್ನು ಹದಿನೈದು ದಿನಗಳ ಒಳಗಾಗಿ ಇತ್ಯರ್ಥಪಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಇಂದಿಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬುಧವಾರ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ವಿವಿಧ ಪ್ರಾಧಿಕಾರಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿನ ಒಟ್ಟು 2,934 ಕಲಾವಿದರ ಮಾಸಾಶನ ಸ್ಥಗಿತಗೊಂಡಿದ್ದು, ಇನ್ನು ಹದಿನೈದು ದಿನದೊಳಗೆ ಇದನ್ನು ಇತ್ಯರ್ಥವಾಗಬೇಕು. ಕೋವಿಡ್-19 ಪರಿಣಾಮದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರಿಗೆ ಅಕಾಡೆಮಿಗಳ ಬ್ಯಾಂಕ್ ವತಿಯಿಂದ 3.45 ಕೋಟಿ ರೂ.ಹಣವನ್ನು ತಕ್ಷಣವೇ ಬಿಡುಗಡೆ ಮಾಡಿ ಸಂಬಂಧಪಟ್ಟವರಿಗೆ ನೀಡಬೇಕೆಂದು ಆದೇಶ ಮಾಡಿದರು.

ಮೂರು ವರ್ಷಗಳಿಂದ ಬಾಕಿ ಇರುವ ವಿವಿಧ ಅಕಾಡೆಮಿಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನು ಅರ್ಹರಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ವಿಳಂಬವಾಗಿದ್ದು, ಪುನಃ ಕಾರಣಗಳನ್ನು ನೀಡಬಾರದು ಎಂದ ಅವರು, ಗಡಿ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ತುಳು, ಕೊಂಕಣಿ, ಬ್ಯಾರಿ ಹಾಗೂ ಕೊಡಗಿನ ಸಾಂಸ್ಕೃತಿ ಸಮುಚ್ಚಯ ಭವನ ನಿರ್ಮಾಣಕ್ಕೆ ಬಿಡುಗಡೆ ಮಾಡಿರುವ ಅನುದಾನ ಬಳಸಿ ನೆನೆಗುದಿಗೆ ಬಿದ್ದಿರುವ ಕಟ್ಟಡಗಳನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಕಾರದ ವತಿಯಿಂದ ಇ-ತಂತ್ರಾಂಶ ಬಳಸಿ ಹಲವು ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸಲು ತಯಾರಿ ನಡೆಸಿದ್ದು, ನ.1ರಿಂದಲೇ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಜಿಲ್ಲೆಗಳಲ್ಲಿರುವ ಇಲಾಖೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಅಕಾಡೆಮಿ ಮತ್ತು ಪ್ರಾಧಿಕಾರಗಳ ವತಿಯಿಂದ ಮುದ್ರಿಸಿರುವ ಕೃತಿಗಳು ಪುನರಾವರ್ತಿತವಾಗಬಾರದು. ಹೊಸ ಬರಹಗಾರರ ಪುಸ್ತಕಗಳಿಗೆ ಆದ್ಯತೆ ನೀಡಬೇಕೆಂದು ಅವರು ಆದೇಶಿಸಿದರು.

ಈ ಬಾರಿ ಕೇಂದ್ರ ಸರಕಾರದ ವತಿಯಿಂದ ರಾಷ್ಟ್ರಿಯ ಲಲಿತ ಕಲಾ ಮೇಳ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ. ನಮ್ಮ ರಾಜ್ಯದಲ್ಲೇ ಲಲಿತ ಕಲಾಮೇಳವನ್ನು ನಡೆಸಲು ಅಧಿಕಾರಿಗಳು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು. ಕರ್ನಾಟಕ ಸಾಂಸ್ಕೃತಿಕ ನೆಲಬೀಡಾಗಿದ್ದು, ನಮ್ಮಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಮೇಳ ಆಯೋಜಿಸಲು ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕೆಂದು ಸಿ.ಟಿ.ರವಿ ತಿಳಿಸಿದರು.

ರಾಷ್ಟ್ರೀಯ ಲಲಿತ ಕಲಾಮೇಳ ಕರ್ನಾಟಕದಲ್ಲಿ ಆಯೋಜಿಸಲು ನಾವು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳೋಣ. ಈ ಸಂಬಂಧ ಕೇಂದ್ರ ಸಚಿವರಿಗೂ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ವಿಸ್ತೃತ ವರದಿಯನ್ನು ಸಿದ್ದಪಡಿಸಬೇಕೆಂದು ಸಚಿವ ರವಿ ಸಲಹೆ ಮಾಡಿದರು. ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ರಶ್ಮಿ, ನಿರ್ದೇಶಕ ಗಂಗಣ್ಣ ಉಪಸ್ಥಿತರಿದ್ದರು.

ಇನ್ನು ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೀಡುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವರ್ಷಪೂರ್ತಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿ ಕನ್ನಡ ಭಾಷಾಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಆದರೆ, ಯಾವುದೇ ಕಾರಣಕ್ಕೂ ಸರಕಾರದ ಅನುದಾನ ದುರುಪಯೋಗವಾದರೆ ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿರಲಿ, ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಿಂದೆ-ಮುಂದೆ ನೋಡುವುದಿಲ್ಲ'

-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News