ನಾನು ಸಣ್ಣತನ ತೋರಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದ ಸಚಿವ ವಿ.ಸೋಮಣ್ಣ !

Update: 2020-09-13 11:43 GMT

ಬೆಂಗಳೂರು, ಸೆ. 13: `ನಾನು ಸಣ್ಣತನ ತೋರಿದ್ದರೆ ಇಲ್ಲವೆ ಯಾರ ಬಗ್ಗೆಯಾದರೂ ಅಪಪ್ರಚಾರ ಮಾಡಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಿದ್ದೇನೆ' ಎಂದು ವಸತಿ ಸಚಿವ ವಿ.ಸೋಮಣ್ಣ, ಹಾಸನದಲ್ಲಿ ಪಿಡಿಓಗಳ ಕಾರ್ಯವೈಖರಿ ಬಗ್ಗೆ ನೀಡಿದ್ದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರವಿವಾರ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಡವರಿಗಾಗಿ ಶಾಸಕರು ನೀಡಿರುವ ಸಲಹೆಯನ್ನು ಸ್ವೀಕರಿಸಬೇಕು. ಸಲಹೆಗಳನ್ನು ನಾನು ಕಾರ್ಯ ರೂಪಕ್ಕೆ ತರಬೇಕು. ಇಲ್ಲವೆಂದರೆ ನಾನು ಕೆಲಸಕ್ಕೆ ಬಾರದ ವ್ಯಕ್ತಿಯಾಗಿ ಬಿಡುತ್ತೇನೆ. `ಕೆಲವು ಪಿಡಿಒಗಳು ರಾಕ್ಷಸ ಪ್ರವೃತ್ತಿ ಉಳ್ಳವರು' ಎಂದು ಹೇಳಿರುವ ಹೇಳಿಕೆಗೆ ಈಗಲೂ ಬದ್ಧ. ಯಾವ ಪಿಡಿಒಗಳು ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅವರ ಕುರಿತು ಹೇಳಿಕೆ ನೀಡಿದ್ದೇನೆಂದು ವಿವರಣೆ ನೀಡಿರುವೆ ಎಂದರು.

ನನ್ನ ಹೇಳಿಕೆಯಿಂದ ಗೌರವದಿಂದ ಕೆಲಸ ಮಾಡುವ ಪಿಡಿಒಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದ ಅವರು, ಬಡವರ ಮನೆಗಳ ಹಂಚಿಕೆ ವಿಚಾರದಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಅಕ್ರಮವಾಗಿದೆ ಎಂಬುದರ ಪುಸ್ತಕ ಸಿದ್ಧಪಡಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಕಣಗನೂರು ಪಂಚಾಯ್ತಿಯಲ್ಲಿ 180 ಮಂದಿ ಅರ್ಹ ಫಲಾನುಭವಿಗಳಿದ್ದರು. ಅಲ್ಲಿ ತಪ್ಪಾಗಿದೆ. ಹಾಗೆಯೇ ಬೀದರ್ ಜಿಲ್ಲೆಯಲ್ಲಿಯೂ ಅನರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆಯಾಗುತ್ತಿದೆ ಎಂದು ದೂರಿದರು.

ವಸತಿ ಇಲಾಖೆಯಲ್ಲಿ ಇನ್ನು ಮುಂದೆ ಮೂರನೆ ವ್ಯಕ್ತಿಯಿಂದ ಪರಿಶೀಲನೆ ಮಾಡಿಸುತ್ತೇವೆ. ಎಲ್ಲವೂ ಪಾರದರ್ಶಕವಾಗಿರುವಂತೆ ವ್ಯವಸ್ಥೆ ತರಲಾಗುವುದು. ಗ್ರಾಮೀಣಾಭಿವೃದ್ಧಿ ವಿವಿಧ ಇಲಾಖೆಗಳ ಮೇಲೆ ಅವಲಂಬಿತವಾಗಿ ಕೆಲಸ ಮಾಡಬೇಕಾಗಿದೆ. ನಾನು ಮನೆ ಹಂಚಿಕೆಗಳ ವಿಚಾರದಲ್ಲಿ ತಪ್ಪು ಮಾಡಬೇಡಿ ಎಂದಷ್ಟೇ ಹೇಳಿದ್ದೇನೆ. 5.40 ಲಕ್ಷ ಮನೆಗಳನ್ನು ನೀಡುತ್ತಿದ್ದೇವೆ. ಈ ಕೆಲಸ ಪಿಡಿಒಗಳು ಮಾಡಬೇಕಿದೆ. ಬಹಳಷ್ಟು ಮಂದಿ ಪಿಡಿಒಗಳಲ್ಲಿ ಪಾರದರ್ಶಕತೆ ಇರುವುದಿಲ್ಲ. ಹೀಗಾಗಿ ಆ ಹೇಳಿಕೆಯನ್ನು ನೀಡಿದ್ದೇ ಹೊರತು ಎಲ್ಲರನ್ನು ಕುರಿತು ಹೇಳಿಲ್ಲ ಎಂದು ಅವರು ತಿಳಿಸಿದರು.

ಗೊಂದಲದ ಗೂಡಾಗಿದ್ದ ವಸತಿ ಇಲಾಖೆಯನ್ನು ತಾರ್ಕಿಕ ಅಂತ್ಯಕ್ಕೆ ತಂದಿದ್ದು, ಅರ್ಹ ಫಲಾನುಭವಿಗಳನ್ನು ವಸತಿ ಇಲಾಖೆ ಆಯ್ಕೆ ಮಾಡಿದ್ದು, 8 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಪಟ್ಟಿಯ ಬಗ್ಗೆ ಪರಾಮರ್ಶೆ ಮಾಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಬೀದರ್ ನಲ್ಲಿ 96 ಕೋಟಿ ರೂ.ನಷ್ಟು ಹಣ ದುರುಪಯೋಗವಾಗುವುದನ್ನು ತಡೆಯಲಾಗಿದೆ ಎಂದು ಸೋಮಣ್ಣ ವಿವರಣೆ ನೀಡಿದರು.

ಈವರೆಗೂ 1,200 ಕೋಟಿ ರೂ.ಹಣ ಬಿಡುಗಡೆ ಮಾಡಿದ್ದೇವೆ. ನಿನ್ನೆ ನಡೆದ ಸಭೆಯಲ್ಲಿ ಶಾಸಕರಾದ ಎಚ್.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡ ಅವರು ಪಿಡಿಒಗಳ ಕಾರ್ಯ ವೈಖರಿಯ ಬಗ್ಗೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಅದನ್ನು ಹೊರತುಪಡಿಸಿದರೆ ಅನ್ಯ ಉದ್ದೇಶವಿಲ್ಲ ಎಂದ ಅವರು, ಕೋವಿಡ್ ನ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಸಿಎಂ ಬಿಎಸ್‍ವೈ 10 ಸಾವಿರ ಕೋಟಿ ರೂ. ನೀಡಿದ್ದಾರೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News