ಸಿಎಂ ಪರಿಹಾರ ನಿಧಿ ಆನ್‍ಲೈನ್ ಮೂಲಕ ನಿರ್ವಹಣೆಗೆ ಚಾಲನೆ

Update: 2020-09-16 16:49 GMT

ಬೆಂಗಳೂರು, ಸೆ.16: ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಕಾರ್ಯವಿಧಾನಗಳನ್ನು ಆನ್ ಲೈನ್ ಮೂಲಕ ನಿರ್ವಹಿಸುವ ತಂತ್ರಾಂಶವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಲೋಕಾರ್ಪಣೆ ಮಾಡಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಯ ದೈನಂದಿನ ಕಾರ್ಯ ವಿಧಾನಗಳನ್ನು ಅಂತರ್ ಜಾಲದ ಮೂಲಕ ನಿರ್ವಹಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದ್ದೇನೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಡವರು ಮತ್ತು ಅಶಕ್ತ ಜನರ ವೈದ್ಯಕೀಯ ವೆಚ್ಚಕ್ಕಾಗಿ ಪರಿಹಾರವನ್ನು ಒದಗಿಸಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸಾರ್ವಜನಿಕರು, ಸಂಘ ಸಂಸ್ಥೆಗಳು, ನಿಗಮ-ಮಂಡಳಿಗಳು ನೀಡುವ ದೇಣಿಗೆಯ ಮೊತ್ತದಿಂದ ಪರಿಹಾರ ಕಾರ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ. ನೈಸರ್ಗಿಕ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ನೊಂದ ಸಂತ್ರಸ್ತರಿಗೆ ಹಾಗೂ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಕೂಡ ಪರಿಹಾರ ನಿಧಿಯ ಮೊತ್ತವನ್ನು ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು.

ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಒಟ್ಟು 14,275 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 11,530 ಪ್ರಕರಣಗಳಿಗೆ 61.88 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

587 ಪ್ರಕರಣಗಳಿಗೆ 9.16 ಕೋಟಿ ರೂ.ಗಳ ಭರವಸೆ ಪತ್ರಗಳನ್ನು ಸಂಬಂಧಿಸಿದ ಆಸ್ಪತ್ರೆಗಳ ಹೆಸರಿಗೆ ವಿತರಿಸಲಾಗಿದ್ದು, ಒಟ್ಟು 12,117 ಪ್ರಕರಣಗಳಿಗೆ 71.04 ಕೋಟಿ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿನ ಎಪ್ರಿಲ್ ತಿಂಗಳಿನಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಅಂತರ್‍ಜಾಲದ ಮೂಲಕ ಸ್ವೀಕರಿಸಿ, ಪರಿಹಾರದ ಮೊತ್ತವನ್ನು ಡಿ.ಬಿ.ಟಿ. ಯೋಜನೆಯ ಮೂಲಕ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.

ಮಧ್ಯವರ್ತಿಗಳು ಬಡ ಅರ್ಜಿದಾರರನ್ನು ಶೋಷಿಸುವುದು ಹಾಗೂ ನಕಲಿ ಫಲಾನುಭವಿಗಳ ಹಾವಳಿಯನ್ನು ತಪ್ಪಿಸಿ, ಅರ್ಹ ಫಲಾನುಭವಿಗಳ ಅವಶ್ಯಕತೆಗೆ ತಕ್ಕಂತೆ ಶೀಘ್ರವಾಗಿ ಪರಿಹಾರ ಮೊತ್ತವನ್ನು ತಲುಪಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡಿಕೆಯಲ್ಲಿ ಆಗಬಹುದಾದ ವಿಳಂಬವನ್ನು ತಡೆಯಲು ತಂತ್ರಾಂಶವು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಬಿ.ಪಿ.ಎಲ್. ಪಡಿತರ ಚೀಟಿ ಮತ್ತು ಆಧಾರ್ ಗುರುತಿನ ಚೀಟಿಯ ಡಾಟಾವನ್ನು ಮಾನದಂಡವಾಗಿ ಉಪಯೋಗಿಸುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಅರ್ಜಿದಾರರಿಗೆ ಯಾವುದೇ ವಿಳಂಬವಿಲ್ಲದೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪರಿಹಾರವನ್ನು ಈ ತಂತ್ರಾಂಶದ ಮೂಲಕ ಒದಗಿಸಬಹುದಾಗಿದೆ. ಶಾಸಕರು, ಸಂಸದರಿಗೆ ಪ್ರತ್ಯೇಕ ಲಾಗಿನ್ ಒದಗಿಸಲಾಗಿರುವ ಹಿನ್ನೆಲೆಯಲ್ಲಿ ಅರ್ಜಿದಾರರು ನೇರವಾಗಿ ಶಾಸಕರ ಕಚೇರಿಗೆ ಅಥವಾ ಸಂಸದರ ಕಚೇರಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಸೇವಾ ಸಿಂಧು ಕೇಂದ್ರಗಳಲ್ಲಿ ಹಾಗೂ ಯಾವುದಾದರೂ ಅಂತರ್ ಜಾಲ ಕೇಂದ್ರಗಳಲ್ಲಿ ಸಾರ್ವಜನಿಕರು ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಯ ಸ್ಥಿತಿಗತಿಯನ್ನು ಆನ್‍ಲೈನ್ ಮೂಲಕವೇ ಪರಿಶೀಲಿಸಿಕೊಳ್ಳಬಹುದಾಗಿದ್ದು, ಪರಿಹಾರ ಧನ ಬಿಡುಗಡೆ ವಿವರ ಇತ್ಯಾದಿಗಳನ್ನು ಮೊಬೈಲ್ ಸಂದೇಶದ ಮೂಲಕ ಮಾಹಿತಿ ಒದಗಿಸಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಕಚೇರಿಗೆ ವಿದ್ಯುನ್ಮಾನ ಅರ್ಜಿ ಸಲ್ಲಿಸಲು ಬಳಸಬಹುದಾದ ಇಂಟರ್ ನೆಟ್ ಕೊಂಡಿಗಳು: cmrf.karnataka.gov.in ಹಾಗೂ https://sevasindhu.karnataka.gov.in ಆಗಿದೆ. ಈ ತಂತ್ರಾಂಶದ ಲಾಭವನ್ನು ಅರ್ಹ ಸಾರ್ವಜನಿಕರು ಪಡೆಯಲಿ ಎಂದು ಮುಖ್ಯಮಂತ್ರಿ ಆಶಿಸಿದರು.

ಈ ಸಂದರ್ಭದಲ್ಲಿ ಇ-ಆಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಮುಖ್ಯಮಂತ್ರಿಯ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News