ದೇಶದಲ್ಲಿ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸಂಘರ್ಷ ಆರಂಭಗೊಂಡಿದೆ: ಸಿದ್ದರಾಮಯ್ಯ

Update: 2020-09-22 14:21 GMT

ಬೆಂಗಳೂರು, ಸೆ. 22: `ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಜನವಿರೋಧಿ ಕಾಯ್ದೆಗಳ ವಿರುದ್ಧ ಒಮ್ಮತದ ಕೂಗು ಹೊರಹೊಮ್ಮಬೇಕು. ಕಾಯ್ದೆ ಜಾರಿಯಾಗದಂತೆ ಸದನದ ಒಳಗೆ ಮತ್ತು ಹೊರಗೆ ಗಟ್ಟಿ ಧ್ವನಿಯಲ್ಲಿ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್ ಪಕ್ಷ ಬದ್ಧವಿದೆ' ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಇಲ್ಲಿನ ಫ್ರೀಡಂ ಪಾರ್ಕ್ ನಲ್ಲಿ ರೈತ, ದಲಿತ, ಕಾರ್ಮಿಕ ವಿರೋಧಿ ಅಧ್ಯಾದೇಶಗಳ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಐಕ್ಯ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, `ಕೇಂದ್ರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ 8 ಮಂದಿ ಸಂಸದರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ. ಈಗ ದೇಶದಲ್ಲಿ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸಂಘರ್ಷ ಆರಂಭಗೊಂಡಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ರೈತರು, ದಲಿತರು, ಕಾರ್ಮಿಕರು ಸೇರಿದಂತೆ ಇಡೀ ದೇಶ ಒಂದಾಗಬೇಕು' ಎಂದು ಹೇಳಿದರು.

'ಇದರ ಜೊತೆಗೆ ಕೇಂದ್ರ ಸರಕಾರ ಎಪಿಎಂಸಿ ಕಾಯ್ದೆಗೆ ಮಾದರಿ ತಿದ್ದುಪಡಿ ರೂಪಿಸಿ, ಇದನ್ನು ಎಲ್ಲ ರಾಜ್ಯಗಳು ಒಪ್ಪಿಕೊಳ್ಳಬೇಕು ಎಂದು ಸರ್ವಾಧಿಕಾರಿ ರೀತಿ ವರ್ತಿಸುತ್ತಿದೆ. ರಾಜ್ಯ ಪಟ್ಟಿಯಲ್ಲಿರುವ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಎಂದು ಹೇಳಲು ಕೇಂದ್ರ ಸರಕಾರಕ್ಕೆ ಯಾವ ಅಧಿಕಾರವಿದೆ?' ಎಂದು ಸಿದ್ದರಾಮಯ್ಯ ಇದೇ ವೇಳೆ ಖಾರವಾಗಿ ಪ್ರಶ್ನಿಸಿದರು.

'ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಯೋಚನೆ ಸರಕಾರಕ್ಕೆ ತಾನಾಗಿಯೇ ಬಂದದ್ದಲ್ಲ. ಇದರ ಹಿಂದೆ ಸಾವಿರಾರು ಕೋಟಿ ಹಣದ ಕಳ್ಳ ವ್ಯವಹಾರ ನಡೆದಿದೆ. ಇಲ್ಲದಿದ್ದರೆ ಜನ ಕೊರೋನದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ಚುನಾಯಿತ ಸರ್ಕಾರವೊಂದು ಇಷ್ಟು ಅಮಾನವೀಯವಾಗಿ ವರ್ತಿಸಲು ಹೇಗೆ ಸಾಧ್ಯ? ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತನ್ನಿ, ಅದರಿಂದ ನಮಗೆ ಅನುಕೂಲ ಆಗುತ್ತೆ ಎಂದು ಯಾರಾದರೂ ಒಬ್ಬನೇ ಒಬ್ಬ ರೈತ ಸರಕಾರದ ಬಳಿ ಮನವಿ ಮಾಡಿದ್ದನಾ? ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರನ್ನು ಉದ್ಧಾರ ಮಾಡ್ತೀವಿ ಅಂತ ಹೇಳಿ ರೈತರಿಂದ ಭೂಮಿಯನ್ನು ಕಿತ್ತು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯಲು ಹೊರಟಿವೆ' ಎಂದು ಟೀಕಿಸಿದರು.

ರಾಜ್ಯ ಸರಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು, ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ಹೊರಟಿದ್ದು, ಇದರಿಂದ ಈಗಾಗಲೇ ನ್ಯಾಯಾಲಯದಲ್ಲಿರುವ ಸುಮಾರು 13,814 ಪ್ರಕರಣಗಳು ಖುಲಾಸೆಗೊಂಡು, ನಿಯಮಬಾಹಿರವಾಗಿ ಭೂಮಿ ಖರೀದಿ ಮಾಡಿದ್ದವರಿಗೆ ಭೂಮಿಯ ಒಡೆತನದ ಹಕ್ಕು ಸಿಗಲಿದೆ. ಜಮೀನ್ದಾರಿ ಪದ್ಧತಿಗೆ ಅಂತ್ಯ ಹಾಡಬೇಕೆಂಬ ಉದ್ದೇಶದಿಂದ 1974ರಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನನ್ನೇ ಭೂಮಿಯ ಒಡೆಯ ಎಂದು ಘೋಷಣೆ ಮಾಡಲಾಯಿತು. ಈಗಿನ ಸರಕಾರ ಕಾಯ್ದೆ ತಿದ್ದುಪಡಿ ತಂದು ನಾಡಿನ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News