ರೈಲಿನಡಿಗೆ ಬಿದ್ದರೂ ಪವಾಡಸದೃಶವಾಗಿ ಪಾರಾದ ಎರಡು ವರ್ಷದ ಮಗು!

Update: 2020-09-24 09:17 GMT

 ಲಕ್ನೋ : ಫರೀದಾಬಾದ್‍ನ ಬಲ್ಲಬ್ ಘರ್ ರೈಲ್ವೆ ನಿಲ್ದಾಣದ ಸಮೀಪ ರೈಲು ಹಳಿಗಳತ್ತ  ತನ್ನ ಅಣ್ಣನಿಂದ ದೂಡಲ್ಪಟ್ಟಿದ್ದಾನೆಂದು ತಿಳಿಯಲಾದ ಎರಡು ವರ್ಷದ ಮಗುವಿನ ಜೀವ ಪವಾಡಸದೃಶವಾಗಿ ಹಾಗೂ ರೈಲು ಚಾಲಕನ ಪ್ರಸಂಗಾವಧಾನತೆಯಿಂದ  ಉಳಿದ  ಘಟನೆ ನಡೆದಿದೆ.

ಬಾಲಕ ಹಳಿ ಪಕ್ಕ ಆಡುತ್ತಿದ್ದಾಗ ಹದಿಹರೆಯದ ಆತನ ಅಣ್ಣನೇ  ಆತನನ್ನು ಹಳಿಗೆ ದೂಡಿದ್ದನೆಂದು ಆರೋಪಿಸಲಾಗಿದ್ದು ಆ ಸಂದರ್ಭ ರೈಲೊಂದು ವೇಗವಾಗಿ ಆಗಮಿಸುತ್ತಿತ್ತು. ರೈಲಿನ ಚಾಲಕ ಮಗುವನ್ನು ಹಳಿಯಲ್ಲಿ ಗಮನಿಸಿ ತಕ್ಷಣ ಎಮರ್ಜೆನ್ಸಿ ಬ್ರೇಕ್  ಹಾಕಿದ್ದರೂ ರೈಲು ಅದಾಗಲೇ ಬಾಲಕನನ್ನು ದಾಟಿ ಮುಂದೆ ಹೋಗಿತ್ತು.

ಬಾಲಕನಿಗೆ ಏನಾಯಿತೆಂದು ತಿಳಿಯದೆ ಆಘಾತಗೊಂಡ ರೈಲು ಚಾಲಕ ಮತ್ತು ಆತನ ಸಹಾಯಕ ರೈಲು ನಿಂತ ಕೂಡಲೇ ಹಳಿಯತ್ತ ಧಾವಿಸಿದಾಗ ಬಾಲಕನಿಗೆ ಒಂದಿನಿತೂ ತರಚು ಗಾಯ ಕೂಡ ಆಗದೆ ಆತ ಪಾರಾಗಿದ್ದು ಕಂಡು ಅವರಿಗೆ ಹೋದ ಜೀವ ಮರಳಿ ಬಂದಂತಾಗಿತ್ತು. ಮಗುವನ್ನು ನಂತರ ಇಂಜಿನ್ ಅಡಿಯಿಂದ ಇತರರ ಸಹಾಯದಿಂದ ಹೊರತೆಗೆದು ಆತನ ತಾಯಿಗೆ ಒಪಿಸಲಾಗಿದೆ.

ರೈಲು ಚಾಲಕ ದೀವಾನ್ ಸಿಂಗ್ ಮತ್ತಾತನ ಸಹಾಯಕ ಅತುಲ್ ಆನಂದ್ ಘಟನೆಯ ಕುರಿತು ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮಗುವಿನ ಜೀವವುಳಿಸಿದ ಇಬ್ಬರಿಗೂ ವಿಭಾಗೀಯ ರೈಲ್ವೆ ಮ್ಯಾನೇಜರ್ ನಗದು ಬಹುಮಾನ  ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News