ಕೇಂದ್ರದ ತಾಳಕ್ಕೆ ಕುಣಿದು ನಾಡನ್ನು ಗುಲಾಮಗಿರಿಗೆ ತಳ್ಳಲು ಹೊರಟ ಬಿಎಸ್‌ವೈ: ಸಿದ್ದರಾಮಯ್ಯ ಕಿಡಿ

Update: 2020-09-28 13:58 GMT

ಬೆಂಗಳೂರು, ಸೆ. 28: `ರೈತ ವಿರೋಧಿ ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯ್ದೆಗಳ ತಿದ್ದುಪಡಿ ಮತ್ತು ಕಾಯಿದೆಗಳ ಜಾರಿ ಹಿಂದೆ ಕೇಂದ್ರ ಸರಕಾರದ ಸ್ಪಷ್ಟ ಸೂಚನೆಯಿದೆ. ಆತ್ಮಸಾಕ್ಷಿ ಇಲ್ಲದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ನಾಡನ್ನು ಗುಲಾಮಗಿರಿಗೆ ತಳ್ಳಲು ಹೊರಟಿದ್ದಾರೆ. ನಾಚಿಕೆಯಾಗಬೇಕು ಈ ಸರಕಾರಕ್ಕೆ' ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.

ಸೋಮವಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ವಿರೋಧಿಸಿ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ದೇಶದ ಒಟ್ಟು ರೈತರಲ್ಲಿ ಸಣ್ಣ ಹಿಡುವಳಿದಾರರ ಪ್ರಮಾಣ ಶೇ.86 ಇದೆ. ಈ ರೈತರೆಲ್ಲಾ ಧನಿಕರಿಗೆ ತಮ್ಮ ಭೂಮಿ ಮಾರಾಟ ಮಾಡಿ, ದುಡಿಮೆಗಾಗಿ ಪಟ್ಟಣ ಸೇರುತ್ತಾರೆ. ಕೃಷಿ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲದ ಅಮಾಯಕ ಮಂದಿ ನಗರಗಳಲ್ಲಿ ಕೂಲಿ ಮಾಡಬೇಕಾಗುತ್ತದೆ' ಎಂದು ಎಚ್ಚರಿಸಿದರು.

`ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ಕೃಷಿಕನಲ್ಲದವನು ಕೃಷಿ ಭೂಮಿ ಖರೀದಿಸುವಂತಿಲ್ಲ ಎಂಬ ನಿಯಮ ಹೋಗಿ, ಧನಿಕರು ಕೂಡ ಕೃಷಿ ಭೂಮಿ ಖರೀದಿ ಮಾಡಲಿದ್ದಾರೆ. ನಂತರ ಆ ಭೂಮಿಯಲ್ಲಿ ಫಾರ್ಮ್‍ಹೌಸ್‍ಗಳು, ಕಾರ್ಖಾನೆಗಳು ತಲೆಯೆತ್ತಲಿವೆ. ಅಲ್ಲಿಗೆ ಕೃಷಿ ಕ್ಷೇತ್ರ ಸರ್ವನಾಶವಾಗಲಿದೆ. ಉಳುವವನನ್ನು ಭೂಮಿಯ ಒಡೆಯನಾಗಿಸಿದ್ದು ದೇವರಾಜ ಅರಸು ಅವರ ನಾಯಕತ್ವದ ಕಾಂಗ್ರೆಸ್ ಸರಕಾರ. ಈಗ ಬಡವರ ಭೂಮಿಯನ್ನು ಉಳ್ಳವರ ಪಾಲು ಮಾಡಲು ಹೊರಟಿರುವುದು ಬಿಜೆಪಿ ಸರಕಾರ. ಹಾಗಾದರೆ ನಿಜವಾಗಿ ಯಾರು ರೈತರ ಪರ?' ಎಂದು ಅವರು ಪ್ರಶ್ನಿಸಿದರು.

`ರಾಜ್ಯ ಸರಕಾರ ನಿಜವಾಗಿ ರೈತ, ಕಾರ್ಮಿಕರ, ಬಡವರ ಪರವಾಗಿದ್ದರೆ ಎಪಿಎಂಸಿ ಕಾಯಿದೆ, ಭೂ ಸುಧಾರಣಾ ಕಾಯಿದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ತಪ್ಪನ್ನು ಮಾಡುತ್ತಲೇ ಇರಲಿಲ್ಲ. ಯಡಿಯೂರಪ್ಪ ಹಸಿರು ಶಾಲು ಹೊದ್ದಿರುವ ಒಬ್ಬ `ಢೋಂಗಿ ರೈತನಾಯಕ'. ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದ ರೈತರಿಗಷ್ಟೇ ಅಲ್ಲ ಗ್ರಾಹಕರಿಗೂ ಭವಿಷ್ಯದಲ್ಲಿ ದೊಡ್ಡ ನಷ್ಟ ಕಾದಿದೆ. ಖಾಸಗಿ ಕಂಪೆನಿಗಳು ರೈತರಿಂದ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚು ಬೆಲೆಗೆ ಮಾರಿ ಜನರ ಸುಲಿಗೆಗೆ ಇಳಿಯಲಿವೆ' ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News