ಇಂಜಿನಿಯರಿಂಗ್ ಪರೀಕ್ಷೆ ವೇಳೆ ಕಾಲೇಜಿಗೆ ಬೀಗ: ತಹಶೀಲ್ದಾರ್ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ

Update: 2020-09-29 14:08 GMT

ಬೆಂಗಳೂರು, ಸೆ.29: ಇಂಜಿನಿಯರಿಂಗ್ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಕಾಲೇಜಿಗೆ ಹಾಕಿದ್ದ ಬೀಗ ತೆರೆಯುವಂತೆ ನಿರ್ದೇಶಿಸಿದ್ದರೂ ನ್ಯಾಯಾಲಯದ ಆದೇಶ ಪಾಲಿಸದ ಬೆಂಗಳೂರು ದಕ್ಷಿಣ ತಹಶೀಲ್ದಾರ್ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ನಗರದ ಇಸ್ಲಾಮಿಯಾ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಪೀಠ, ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವಂತೆ ಕಾಲೇಜಿಗೆ ಬೀಗ ಹಾಕಿದ್ದು ಎಷ್ಟು ಸರಿ? ಬೀಗ ತೆರೆಯುವಂತೆ ನ್ಯಾಯಾಲಯ ಸೂಚಿಸಿದ್ದರೂ ಏಕೆ ತೆಗೆದಿಲ್ಲ? ನಿಮ್ಮ ಮಕ್ಕಳು ಓದುತ್ತಿದ್ದರೆ ಈ ರೀತಿ ಬೀಗ ಹಾಕುತ್ತಾ ಇದ್ದಿರಾ ಎಂದು ಪ್ರಶ್ನಿಸಿದೆ.

ನಗರದಲ್ಲಿ ಕೊರೋನ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಪರೀಕ್ಷೆ ನಡೆಯುತ್ತಿರುವ ಕಾಲೇಜಿಗೆ ತೆರಳಿ ಬೀಗ ಹಾಕಿದ್ದೇಕೆ? ಯಾವ ಜನಪ್ರತಿನಿಧಿಯನ್ನು ಖುಷಿಪಡಿಸಲು ಇಂಥ ಕೆಲಸ ಮಾಡುತ್ತಿದ್ದೀರಾ? ನೀವೆಲ್ಲಾ ನಿಜಕ್ಕೂ ಓದಿ ಅಧಿಕಾರಿಗಳಾಗಿದ್ದೀರಾ? ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹಾಗೆಯೇ ನೀವು ಎಸಗಿರುವ ಕೃತ್ಯಕ್ಕೆ ವಿವರಣೆ ನೀಡಿ ವೈಯಕ್ತಿಕ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶಿವಪ್ಪ ಲಮಾಣಿ ಅವರಿಗೆ ನಿರ್ದೇಶಿಸಿದೆ.

ಪ್ರಕರಣವೇನು: ನಗರದ ದಕ್ಷಿಣ ತಾಲೂಕು ಬೇಗೂರು ಹೋಬಳಿ ವ್ಯಾಪ್ತಿಯ ಹುಳಿಮಾವು ಗ್ರಾಮದ ಸರ್ವೆ ನಂಬರ್ 63ರಲ್ಲಿ 5 ಎಕರೆ ಭೂಮಿ ಇದ್ದು, ಈ ಜಾಗದಲ್ಲಿ ಇಸ್ಲಾಮಿಯಾ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವಿಟಿಯು ಅನುಮೋದನೆಯೊಂದಿಗೆ ಇಂಜಿನಿಯರಿಂಗ್ ಶಿಕ್ಷಣ ನೀಡುತ್ತಿದೆ. ಕಳೆದ 40 ವರ್ಷಗಳಿಂದ ಇಲ್ಲಿ ಕಾಲೇಜು ನಡೆಯುತ್ತಿದ್ದರೂ, ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಸರಕಾರ ಮತ್ತು ಕಾಲೇಜು ಆಡಳಿತ ಮಂಡಳಿ ನಡುವೆ ವಿವಾದವಿದೆ.

ಸೆಪ್ಟೆಂಬರ್ ತಿಂಗಳಲ್ಲಿ ವಿಟಿಯು ನಿಗದಿಪಡಿಸಿರುವ ಪರೀಕ್ಷೆಗಳು ನಡೆಯುತ್ತಿದ್ದು, ಕಾಲೇಜಿನ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಸೆಪ್ಟೆಂಬರ್ 15 ರಂದು ದಕ್ಷಿಣ ವಿಭಾಗದ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಾಲೇಜಿಗೆ ತೆರಳಿ ಬೀಗ ಹಾಕಿದ್ದಾರೆ. ಈ ಕುರಿತು ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಬೀಗ ತೆರೆಯಲು ಕೋರಿದೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಬೀಗ ತೆರೆಯಲು ಸೂಚಿಸಿದ್ದರೂ ಅಧಿಕಾರಿಗಳು ಆದೇಶ ಪಾಲಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News