ಬಿಜೆಪಿಯ ಭ್ರಷ್ಟಾಚಾರದ ಕಡತಗಳನ್ನು ಸುಟ್ಟು ಹಾಕಲು ಸಂತೋಷ್ ಬಳಕೆ: ಆಮ್ ಆದ್ಮಿ ಆರೋಪ

Update: 2020-10-15 18:37 GMT

ಬೆಂಗಳೂರು, ಅ.15: ಭ್ರಷ್ಟಾಚಾರದ ಕಡತಗಳು, ಅಕ್ರಮ ಟೆಂಡರ್‍ಗಳು ಹಾಗೂ ಇನ್ನಿತರೆ ಅವ್ಯವಹಾರಗಳ ಕಡತಗಳನ್ನು ಸುಟ್ಟು ಹಾಕಲು ಎನ್.ಆರ್.ಸಂತೋಷ್ ಎಂಬ ಖಾಸಗಿ ವ್ಯಕ್ತಿಯನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದರು.

ಗುರುವಾರ ನಗರದಲ್ಲಿನ ಪಕ್ಷದ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ತಂಗಿಯ ಮೊಮ್ಮಗನಾದ ಈ  ಕುಟುಂಬದ ವ್ಯಕ್ತಿಯನ್ನು ರಾಜ್ಯ ಸರಕಾರದ ಶಾಸನಾತ್ಮಕ ಆಡಳಿತ ನಿರ್ವಹಣೆಯಲ್ಲಿ ಸೇರಿಸಿಕೊಂಡು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನಗಳನ್ನು, ಕಚೇರಿ ನಿರ್ವಹಣೆಗೆ ಸಿಬ್ಬಂದಿಗಳನ್ನು ನೀಡಿ ಸರಕಾರದ ಎಲ್ಲ ಸವಲತ್ತುಗಳನ್ನು ನೀಡಿರುವ ಉದ್ದೇಶ ನಿಧಾನಕ್ಕೆ ಬಯಲಾಗುತ್ತಿದೆ ಎಂದರು.

ಎಲ್ಲ ಇಲಾಖೆಯಲ್ಲೂ ಕೈಯಾಡಿಸುತ್ತಿರುವ ಸಂತೋಷ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿಯ ನಾಯಕರು, ಯಡಿಯೂರಪ್ಪ ಹಾಗೂ ವಿಜಯೇಂದ್ರ ಸೇರಿದಂತೆ ಇತರೆ ಸಹೋದ್ಯೋಗಿಗಳು ಎಲ್ಲ ಇಲಾಖೆಗಳಲ್ಲಿ ನಡೆಸಿರುವ ಕೋಟ್ಯಂತರ ರೂಪಾಯಿ ಅಕ್ರಮಗಳ ಕಡತಗಳನ್ನು ಹುಡುಕಿ ಸುಟ್ಟು ಹಾಕಲು ಎಂದು ಅವರು ಕಿಡಿಕಾರಿದರು.

ಈ ನೇಮಕಾತಿ ಸಂವಿಧಾನ ವಿರೋಧಿ ಹಾಗೂ ಕಾನೂನು ವಿರೋಧಿಯಾಗಿದ್ದು ಮುಖ್ಯಮಂತ್ರಿ ತಮ್ಮ ಪರಮಾಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸ್ವಜನಪಕ್ಷಪಾತ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಈ ನಡೆಯನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಶರತ್ ಖಾದ್ರಿ ತಿಳಿಸಿದರು.

ಈಗಾಗಲೇ ಮುಖ್ಯಮಂತ್ರಿಯ ಮಗ ವಿಜಯೇಂದ್ರ ವಿರುದ್ಧವೂ ಅನೇಕ ಹಗರಣಗಳು ಕೇಳಿ ಬಂದು ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಈ ಮೂಲಕ ಮುಖ್ಯಮಂತ್ರಿ ಅಕ್ರಮ ಕೂಟ ರಚನೆ ಮಾಡಿಕೊಂಡಿದ್ದಾರೆ. ಈ ವ್ಯಕ್ತಿಯ ವಿರುದ್ಧ ಈಗಾಗಲೇ ಆಪರೇಷನ್ ಕಮಲ ದಂತಹ ಅಸಂವಿಧಾನಿಕ ಪ್ರಜಾಪ್ರಭುತ್ವ ವಿರೋಧಿ ಕುಕೃತ್ಯಗಳಲ್ಲಿ ಭಾಗಿಯಾಗಿರುವ ನೇರ ಸಾಕ್ಷಿಗಳು ರಾಜ್ಯದ ಜನತೆ ಮುಂದಿವೆ ಎಂದು ಅವರು ತಿಳಿಸಿದರು.

ಈ ವ್ಯಕ್ತಿಯ ವಿರುದ್ಧ ಈಗಾಗಲೇ ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುವ ವರದಿಗಳು ಮಾಧ್ಯಮಗಳಲ್ಲಿ ಈಗಾಗಲೇ ಬಿತ್ತರವಾಗಿದೆ. ಈ ವ್ಯಕ್ತಿಯ ವಿರುದ್ಧ ಬಿಜೆಪಿಯ ಪ್ರಮುಖ ನಾಯಕ ಈಶ್ವರಪ್ಪ ಈ ಹಿಂದೆ ಗುರುತರವಾದ ಆರೋಪವನ್ನು ಮಾಡಿದ್ದರು. ರಾಜ್ಯ ಸರಕಾರದಲ್ಲಿನ ಕಡತ ಪರಿಶೀಲನೆಯಂತಹ ಮಹತ್ವದ ಆಡಳಿತಾತ್ಮಕ ನಿರ್ವಹಣೆಯಲ್ಲಿ ನೇರವಾಗಿ ಕೈಹಾಕಿ ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರ ಎಸಗಲು ನೇಮಕಾತಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ರಾಜಕೀಯ ಎಂದರೆ ಹಣ ಮಾಡುವ ದಂಧೆಯನ್ನಾಗಿ ಮಾಡಿಕೊಂಡಿರುವ ಮುಖ್ಯಮಂತ್ರಿ, ಅಸಂವಿಧಾನಿಕವಾಗಿ ಈ ಹುದ್ದೆಯನ್ನು ತಮ್ಮ ಆಪ್ತನಿಗೆ ಹಂಚಿ, ಈ ಮೂಲಕ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಕುರ್ಚಿ ಕೂಡ ಅಲುಗಾಡುತ್ತಾ ಇರುವುದರಿಂದ, ಈ ಸಮಯದ ಒಳಗೆ ತಮ್ಮ ಆಪ್ತರಿಗೆ ಗಂಟು ಮಾಡಿಟ್ಟುಕೊಳ್ಳಲು ಆಸ್ಪದ ನೀಡಿದ್ದಾರೆ ಎಂದು ಅವರು ದೂರಿದರು.

ಈ ಕೂಡಲೇ ಈ ವ್ಯಕ್ತಿಯನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಬೇಕು ಹಾಗೂ ಈ ವಿಚಾರವಾಗಿ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜನನಿ ಭರತ್, ಮುತ್ತುರಾಜ್ ಚುಂಚನಘಟ್ಟ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News